ಎರಡು ದಿನಗಳ ರಜೆ ದಿನ ದರೋಡೆಕೋರರು ವಿಜಯಪುರ ಜಿಲ್ಲೆಯ ಕೆನರಾ ಬ್ಯಾಂಕ್ ನ ಮಂಗೋಲಿ ಶಾಖೆಯಲ್ಲಿ 53 ಕೋಟಿ ರೂ. ಮೌಲ್ಯದ 59 ಕೆಜಿ ಚಿನ್ನಾಭರಣಗಳನ್ನು ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬ್ಯಾಂಕಿನಿಂದ ಸಾಲ ಪಡೆದ ಗ್ರಾಹಕರು ಅಡಮಾನ ಇಟ್ಟಿದ್ದ ಚಿನ್ನವನ್ನು ದುಷ್ಕರ್ಮಿಗಳು ಕದ್ದಿದ್ದಾರೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರ್ಗಿ ತಿಳಿಸಿದ್ದಾರೆ.
ಮೇ 23ರಂದು ಸಂಜೆ ಬ್ಯಾಂಕ್ಗೆ ಬೀಗ ಹಾಕಿ ಸಿಬ್ಬಂದಿ ತೆರಳಿದ್ದು, ಮೇ 24 ಮತ್ತು 25 ರಂದು (ನಾಲ್ಕನೇ ಶನಿವಾರ ಮತ್ತು ಭಾನುವಾರ) ಬ್ಯಾಂಕ್ ರಜೆ ಇತ್ತು. ಮೇ 26 ಸೋಮವಾರ ಸಿಬ್ಬಂದಿಗಳು ಬ್ಯಾಂಕ್ ಗೆ ಬಂದಿದ್ದು ಸ್ವಚ್ಛತ ಸಿಬ್ಬಂದಿ ಶಾಖೆಯನ್ನು ಸ್ವಚ್ಛಗೊಳಿಸುವ ವೇಳೆ ಶಟರ್ ಬೀಗಗಳನ್ನು ಕತ್ತರಿಸಿರುವುದನ್ನು ಅವರು ಗಮನಿಸಿದ್ದು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮೇ 26ರಂದು ಕೆನರಾ ಬ್ಯಾಂಕ್ ಮಂಗೋಲಿ ಶಾಖೆಯ ವ್ಯವಸ್ಥಾಪಕರು ನೀಡಿದ ದೂರು ಆಧರಿಸಿ ಪರಿಶೀಲನೆ ನಡೆಸಿದ ಪೊಲೀಸರು 59 ಕೆಜಿ ಚಿನ್ನವನ್ನು ಕಳವು ಮಾಡಲಾಗಿದೆ ಎಂದು ದೃಢಪಟ್ಟಿದೆ. ಇದರ ಮೌಲ್ಯ 53 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಕರಣದ ತನಿಖೆಗಾಗಿ 8 ತಂಡಗಳನ್ನು ರಚಿಸಲಾಗಿದೆ ಎಂದು ನಿಂಬರ್ಗಿ ಹೇಳಿದ್ದಾರೆ.
ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಿ ಪ್ರಕರಣವನ್ನು ಅದರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಪೊಲೀಸ್ ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


