ಬೆಂಗಳೂರು: ಐಶ್ವರ್ಯ ಗೌಡ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ ಗೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸ್ವತಃ ಡಿಕೆ ಸುರೇಶ್ ಈ ವಿಷಯ ತಿಳಿಸಿದ್ದು, ಜೂನ್ 19ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿದೆ ಎಂದು ಹೇಳಿದರು.
ಜೂನ್ 19ರ ಬದಲು ಜೂನ್ 23ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಇಡಿ ಬಳಿ ಮನವಿ ಮಾಡಿಕೊಂಡಿದ್ದೇನೆ ಎಂದು ಅವರು ವಿವರಿಸಿದರು.
ಡಿಕೆ ಸೋದರಿ ಎಂದು ಹೇಳಿಕೊಂಡು ಐಶ್ವರ್ಯ ಗೌಡ ವಂಚನೆ ಮಾಡಿರುವ ಪ್ರಕರಣದಲ್ಲಿ ಡಿಕೆ ಸುರೇಶ್ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಐಶ್ವರ್ಯ ಗೌಡ ಜೊತೆ ನಾನು ಯಾವುದೇ ವ್ಯವಹಾರ ಮಾಡಿಲ್ಲ. ಆಕೆ ಎರಡು ಕಾರ್ಯಕ್ರಮಗಳಿಗೆ ಕರೆದಿದ್ದಾಗ ಹೋಗಿದ್ದೆ ಅಷ್ಟೆ ಎಂದು ಅವರು ಹೇಳಿದರು.
ಐಶ್ವರ್ಯ ಗೌಡ ಹೇಳಿಕೆ ಮತ್ತು ಸಾಕ್ಷಿಗಳನ್ನು ಆಧರಿಸಿ ಇಡಿ ಗುರುವಾರ ಜೂ.19ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಡಿಕೆ ಸುರೇಶ್ ಅವರಿಗೆ ಸೂಚನೆ ನೀಡಿದೆ. ಜೂ.23ರಂದು ವಿಚಾರಣೆಗೆ ಹಾಜರಾಗುವುದಾಗಿ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆಂದು ದೂರು ಕೊಟ್ಟಿದ್ದೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಇಡಿ ಅಧಿಕಾರಿಗಳು ಏಳೆಂಟು ದಾಖಲೆಗಳು ಬೇಕು ಎಂದಿದ್ದಾರೆ. ಇಡಿ ಅಧಿಕಾರಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ ಎಂದರು.
ತನಿಖೆಗೆ ಸಹಕಾರ ನೀಡುತ್ತೇವೆ: ಡಿಕೆಶಿ
ಸೋದರ ಡಿಕೆ ಸುರೇಶ್ಗೆ ಇಡಿ ಸಮನ್ಸ್ ಜಾರಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಇಡಿ ತನಿಖೆಗೆ ಸಹೋದರ ಡಿ.ಕೆ.ಸುರೇಶ್ ಸಹಕಾರ ನೀಡುತ್ತಾರೆ. ಯಾವುದೇ ತನಿಖಾ ಸಂಸ್ಥೆ ನೋಟಿಸ್ ನೀಡಿದರೂ ಸ್ವೀಕರಿಸುತ್ತೇವೆ. ಕಾನೂನಿನ ಚೌಕಟ್ಟಿನಲ್ಲಿ ತನಿಖೆಗೆ ಹಾಜರಾಗಿ ಸಹಕಾರ ನೀಡುತ್ತೇವೆ ಎಂದರು.
ತಮ್ಮ ಹೆಸರು ಹೇಳಿಕೊಂಡು ವಂಚನೆ ಮಾಡಿರುವ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಡಿಕೆ ಸುರೇಶ್ ದೂರು ನೀಡಿದ್ದರು. ವಂಚನೆಗೊಳಗಾದ ಕೆಲವರು ಬಂದು ನನ್ನನ್ನು ಭೇಟಿಯಾಗಿದ್ದರು. ಈಗ ಇಡಿ ನೋಟಿಸ್ ನೀಡಿದ್ದಾರೆ, ಗೌರವದಿಂದ ಸ್ಪೀಕರಿಸಿದ್ದೇವೆ. ಮನೆಗೆ ನೋಟಿಸ್ ಅಂಟಿಸಿ ಹೋಗುವುದಾಗಿ ಹೇಳುತ್ತಿದ್ದಾರೆ ಅಂದರು.
ನಾನೇ ಇಡಿ ನೋಟಿಸ್ ಸ್ವೀಕರಿಸುವಂತೆ ಮನೆಯವರಿಗೆ ಹೇಳಿದ್ದೇನೆ. ನನಗೂ, ಡಿ.ಕೆ.ಸುರೇಶ್ಗೂ ಇಡಿ ಅಧಿಕಾರಿಗಳ ತನಿಖೆ ಹೊಸದೇನಲ್ಲ. ಇಡಿ ಅಧಿಕಾರಿಗಳ ಮುಂದೆ ಹಾಜರಾಗಿ ಸ್ಪಷ್ಟೀಕರಣ ನೀಡುತ್ತೇವೆ ಎಂದರು.


