ಕರ್ನಾಟಕದ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಮೇಲೆ ಹೈಡ್ರೋಜನ್ ಬಾಂಬ್ ಬೀಳಲಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೊಸ ಬಾಂಬ್ ಸಿಡಿಸಿದ್ದಾರೆ.
ಇತ್ತೀಚೆಗೆ ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ಕುರಿತು ಗಂಭೀರ ಆರೋಪ ಮಾಡಿದ್ದ ರಾಹುಲ್ ಗಾಂಧಿ ಗುರುವಾರ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕರ್ನಾಟಕದಲ್ಲಿ ನಡೆದ ಮತ್ತೊಂದು ಮತಗಳ್ಳತನ ಕುರಿತು ಆರೋಪಿಸಿದರು.
ಕಾಂಗ್ರೆಸ್ ಮತದಾರರನ್ನೇ ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗಿದೆ. ಆದಿವಾಸಿಗಳು, ಒಬಿಸಿ ಒಟ್ಟಿನಲ್ಲಿ ವಿರೋಧಪಕ್ಷಕ್ಕೆ ಮತಹಾಕುವವರ ಹೆಸರುಗಳನ್ನೇ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಮತಗಳ್ಳತನ ಸಿಕ್ಕಿಬಿದ್ದಿದ್ದು ಹೇಗೆ ಎಂದರೆ, ಆಳಂದದಲ್ಲಿ ಬಿಎಲ್ಒ ಅವರ ಸಂಬಂಧಿಯ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿತ್ತು. ಆಗ ತನಿಖೆ ಆರಂಭಿಸಿದಾಗ ಅವರ ಸಂಬಂಧಿಯ ಪಕ್ಕದ ಮನೆಯವರು ಅವರ ಹೆಸರನ್ನು ತೆಗೆಸಿದ್ದಾರೆ ಎಂಬುದು ತಿಳಿದುಬಂದಿತ್ತು, ಬಳಿಕ ಅಲ್ಲಿ ಹೋಗಿ ವಿಚಾರಿಸಿದಾಗ ನಾವು ಅರ್ಜಿ ಕೊಟ್ಟಿಲ್ಲ, ಯಾರ ಹೆಸರನ್ನೂ ತೆಗೆಸಿಲ್ಲ ಎಂದು ಹೇಳಿದಾಗ ಕೆಲವು ವಿಚಾರಗಳು ಬಹಿರಂಗಗೊಂಡಿವೆ.
ಒಬ್ಬರ ಹೆಸರು ಬಳಸಿಕೊಂಡು ಮತದಾರರ ಪಟ್ಟಿಯಿಂದ 12 ಜನರ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಿರುವುದು ತಿಳಿದುಬಂದಿದೆ. ಆದರೆ ಅವರು ನಾನು ಯಾವ ಅರ್ಜಿಯನ್ನೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಆಳಂದಲ್ಲಿ 6018 ಜನರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಎಲ್ಲಾ ಹೆಸರುಗಳನ್ನು ಕರ್ನಾಟಕದ ಮೊಬೈಲ್ ಸಂಖ್ಯೆಯಿಂದಲೇ ಡಿಲೀಟ್ ಮಾಡಲಾಗಿದೆ. ಆದರೆ ಎಲ್ಲೋ ಕುಳಿತು ಈ ಹೆಸರುಗಳನ್ನು ತೆಗೆಸಲಾಗಿದೆ. ನಾವು ಪ್ರಜಾಪ್ರಭುತ್ವದ ಮೌಲ್ಯವನ್ನು ಉಳಿಸುವ ಕೆಲಸವನ್ನು ಮಾಡುತ್ತಿದ್ದೇವೆ.
ಇವರ ಹೆಸರುಗಳನ್ನು ತೆಗೆಸಲು ಬಳಸಿದ ಮೊಬೈಲ್ ಸಂಖ್ಯೆ ಯಾವುದು, ಹಾಗಾದರೆ ಒಟಿಪಿ ಎಲ್ಲಿಗೆ ಬಂದಿದೆ ಇದ್ಯಾವ ಮಾಹಿತಿಯೂ ಸಿಗುತ್ತಿಲ್ಲ. ಪ್ರತಿ ಚುನಾವಣೆ ಸಮಯದಲ್ಲೂ ಮತಗಳ್ಳತನದ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಲೇ ಇದ್ದವು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನೇರ ಆರೋಪ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ವಿರುದ್ಧ ರಾಹುಲ್ ಗಾಂಧಿ ನೇರ ಆರೋಪ ಮಾಡಿದ್ದಾರೆ. 18 ತಿಂಗಳಲ್ಲಿ ಚುನಾವಣಾ ಆಯೋಗಕ್ಕೆ 18 ಪತ್ರಗಳನ್ನು ಬರೆದು ಮಾಹಿತಿ ಕೇಳಲಾಗಿದೆ, ಆದರೆ ಅವರಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ, ಸಿಐಡಿ ಕೂಡ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಫೆಬ್ರವರಿ 23ರಂದು ಎಫ್ಐಆರ್ ದಾಖಲಿಸಲಾಗಿತ್ತು. ಹಾಗಾದರೆ ಇದೆಲ್ಲದರ ಹಿಂದೆ ಜ್ಞಾನೇಶ್ ಕುಮಾರ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ.


