ನವದೆಹಲಿ: ದತ್ತಾಂಶ ಸಂರಕ್ಷಣೆ ಹೆಸರಿನಲ್ಲಿ ಮೋದಿ ಸರ್ಕಾರ ಜನರಿಂದ ಮಾಹಿತಿ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಜನ ಸಾಮಾನ್ಯನ ಹಕ್ಕುಗಳನ್ನು ರಕ್ಷಿಸಲು ನಮ್ಮ ಪಕ್ಷ ಸರ್ವಾಧಿಕಾರದ ವಿರುದ್ಧ ಹೋರಾಡಲಿದೆ ಎಂದು ಅವರು ಹೇಳಿದರು.
`ಒಂದೆಡೆ ಭಾರತವು ತಪ್ಪು ಮಾಹಿತಿ ಹಂಚಿಕೊಳ್ಳುವ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ ದತ್ತಾಂಶ ಸಂರಕ್ಷಣೆ ಹೆಸರಿನಲ್ಲಿ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಆರ್ಟಿಐಯನ್ನು ದುರ್ಬಲ ಮಾಡುತ್ತಿದೆ’ ಎಂದವರು ಹೇಳಿದರು.
`ಪಡಿತರ ಚೀಟಿಗಳ ಪಟ್ಟಿ, ನರೇಗಾ ಫಲಾನುಭವಿಗಳು, ಸಾರ್ವಜನಿಕ ಕಲ್ಯಾಣ ಯೋಜನೆಗಳಲ್ಲಿ ತೊಡಗಿರುವವರ ಹೆಸರುಗಳು, ಮತದಾರರ ಪಟ್ಟಿ, ಸರ್ಕಾರಿ ಬ್ಯಾಂಕ್ಗಳಲ್ಲಿ ಸಾಲ ಪಡೆದು ವಿದೇಶಕ್ಕೆ ಪಲಾಯನಗೈದ ಕೋಟ್ಯಧಿಪತಿಗಳ ಹೆಸರುಗಳಂತಹ ಸಾರ್ವಜನಿಕ ವಲಯದ ಮಾಹಿತಿಗಳನ್ನು ಜನರಿಗೆ ಲಭ್ಯವಾಗುವಂತೆ ಮಾಡುವುದು ಮುಖ್ಯವಾಗಿದೆ. ಆದರೆ ಈಗ ಆ ಪರಿಸ್ಥಿತಿ ಇಲ್ಲ’ ಎಂದರು.
`ಯಾವುದೇ ಕಾರಣಕ್ಕೂ ಆರ್ಟಿಐ ದುರ್ಬಲಗೊಳಿಸಲು ಕಾಂಗ್ರೆಸ್ ಬಿಡುವುದಿಲ್ಲ. ಈ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಲಿದ್ದೇವೆ. ಬೀದಿಗಿಳಿದು ಹೋರಾಡುತ್ತೇವೆ’ ಎಂದು ಹೇಳಿದರು.


