ಬೆಂಗಳೂರಿನಲ್ಲಿ 14,307 ರಸ್ತೆ ಗುಂಡಿಗಳನ್ನು ಮುಚ್ಚಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಹೇಳಿಕೆ ಮತ್ತು ಪೇಪರ್ ದಾಖಲೆ ಮೇಲೆ ನನಗೆ ನಂಬಿಕೆ ಇಲ್ಲ. ಹಾಗಾಗಿ ಖುದ್ದು ಪರಿಶೀಲನೆ ನಡೆಸಿದೆ ಎಂದು ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಧ್ಯರಾತ್ರಿ 11ರಿಂದ 2 ಗಂಟೆಯವರೆಗೂ ನಗರದ ವಿವಿಧ 10 ಪ್ರದೇಶಗಳಲ್ಲಿ ರಸ್ತೆ ಗುಂಡಿ ಮುಚ್ಚಿರುವ ಕಾರ್ಯವನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಭಾರೀ ಮಳೆಯಿಂದಾಗಿ ನಗರದಲ್ಲಿ ರಸ್ತೆ ಗುಂಡಿಗಳು ಹೆಚ್ಚಾಗಿ ಅನಾಹುತಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ನಾನು ಅಮೆರಿಕ ಪ್ರವಾಸ ಹೋಗುವ ಮುನ್ನ ಅಧಿಕಾರಿಗಳಿಗೆ ರಸ್ತೆ ಗುಂಡಿ ಮುಚ್ಚಲು 15 ದಿನಗಳ ಗಡುವು ನೀಡಿದ್ದೆ. ರಸ್ತೆ ಗುಂಡಿ ಮುಚ್ಚಿದ ಮೇಲೆ ಅದರ ವೀಡಿಯೊ ಮಾಡಿ ಕಳುಹಿಸುವಂತೆ ಸೂಚನೆ ನೀಡಿದ್ದೆ ಎಂದು ಅವರು ಹೇಳಿದರು.
ಅಧಿಕಾರಿಗಳು 14 ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ. ಈ ಬಗ್ಗೆ ವೀಡಿಯೊಗಳನ್ನು ಕೂಡ ಕಳುಹಿಸಿದ್ದಾರೆ. ಆದರೆ ಅಧಿಕಾರಿಗಳ ಮಾತು, ದಾಖಲೆಗಳನ್ನು ನಾನು ನಂಬುವುದಿಲ್ಲ. ಅಲ್ಲದೇ ಗುಣಮಟ್ಟ ಪರಿಶೀಲನೆಗಾಗಿ ನಾನೇ ಖುದ್ದು ಪರಿಶೀಲಿಸಲು ಮುಂದಾದೆ ಎಂದು ಅವರು ಹೇಳಿದರು.
ಪರಿಶೀಲನೆ ನಂತರ ರಸ್ತೆ ಗುಂಡಿ ಮುಚ್ಚಿರುವುದು ಸಮಾಧಾನಕರವಾಗಿ ಕಾಣುತ್ತಿದೆ. ಮಳೆಯಿಂದಾಗಿ ಗುಣಮಟ್ಟ ಕಾಯ್ದುಕೊಳ್ಳುವುದು ಕಷ್ಟ. ರಸ್ತೆ ಗುಂಡಿಯಿಂದ ಯಾರ ಜೀವವೂ ಹೋಗಬಾರದು. ನಾಗರಿಕರಿಗೆ ಉತ್ತಮ ಸೇವೆ ನೀಡಬೇಕು ಎಂಬುದೇ ನನ್ನ ಗುರಿ ಎಂದು ಡಿಕೆ ಶಿವಕುಮಾರ್ ವಿವರಿಸಿದರು.
ಇದಕ್ಕೂ ಮುನ್ನ ಸಚಿವರು ಜಯಮಹಲ್ ರಸ್ತೆಯ ಪ್ಯಾಚ್ ವರ್ಕ್ ವೀಕ್ಷಣೆ ವೇಳೆ ಆರೆಯಿಂದ ನೆಲಕ್ಕೆ ಗುದ್ದಿ ಪರಿಶೀಲನೆ ನಡೆಸಿದರು. ನಂತರ ಟ್ರಿನಿಟಿ ಜಂಕ್ಷನ್ನಲ್ಲಿ ಡಾಂಬರೀಕರಣಕ್ಕೂ ಮುನ್ನ ಮಾಡುವ ಮಿಲ್ಲಿಂಗ್ ಕಾಮಗಾರಿಗಳ ಪರಿಶೀಲಿಸಿದರು. ರಸ್ತೆಯ ಹದಗೆಟ್ಟಿರುವ ಭಾಗವನ್ನು ಮಿಲ್ಲಿಂಗ್ ಮಾಡಿ ಡಾಂಬರೀಕರಣ ಮಾಡುವಂತೆ ಸೂಚಿಸಿದರು. ಬಳಿಕ ಬನಶಂಕರಿ ಮೇಟ್ರೋ ಬಳಿಯ ಬನಶಂಕರಿ ರಸ್ತೆ ಕಾಮಗಾರಿಯನ್ನೂ ಪರಿಶೀಲಿಸಿದರು. ಜೊತೆಗೆ ಪಾಲಿಕೆ ಆಯುಕ್ತರಿಗೆ ರಸ್ತೆ ಬದಿಯಲ್ಲಿ ಅಂಗಡಿ ಹಾಕಿರೋದನ್ನ ತೆಗೆಸಬೇಕು ಅಂತ ಸೂಚನೆ ನೀಡಿದರು.
ಬೆಂಗಳೂರು ನಗರದ ಜೆಸಿ ರಸ್ತೆ, ಟ್ರಿನಿಟಿ ಜಂಕ್ಷನ್ ಹಾಗೂ ದೊಮ್ಮಲೂರು ಬ್ರಿಡ್ಜ್ ಬಳಿ ರಸ್ತೆ ಗುಂಡಿಗಳ ದುರಸ್ತಿ ಕಾಮಗಾರಿಯ ಸ್ಥಿತಿಗತಿಗಳನ್ನು ಪರಿಶೀಲಿಸಿದೆ. ಅಧಿಕಾರಿಗಳು ನೀಡಿದ ಮಾಹಿತಿ ಕೇಳಿ ಕೂರುವವನು ನಾನಲ್ಲ. ಕಾಮಗಾರಿಯ ಗುಣಮಟ್ಟವನ್ನು ಕಣ್ಣಾರೆ ನೋಡಿ ಪರಿಶೀಲಿಸುವುದು ಈ ಭೇಟಿಯ ಉದ್ದೇಶವಾಗಿದೆ. ಜಾಗತಿಕ ನಗರವಾಗಿ ಗುರುತಿಸಿಕೊಂಡಿರುವ… pic.twitter.com/AMAT7mcuFS
— DK Shivakumar (@DKShivakumar) September 23, 2024