ದೇಶದ ಆರ್ಥಿಕತೆ ಬೆಳವಣಿಯಲ್ಲಿ ಸಣ್ಣ, ಸೂಕ್ಷ್ಮ ಕೈಗಾರಿಕೆಗಳು ಪ್ರಮುಖ ಪಾತ್ರವಹಿಸಿವೆ. ಆದರೆ, ಕೊರೊನಾ ನಂತರದ 80 ಸಾವಿರ ಎಂಎಸ್ಎಂಗಳು ಮುಚ್ಚಿ ಹೋಗಿವೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಮೈಸೂರಿನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ನಡೆದ 2 ದಿನಗಳ ಕಾಲ ಅಯೋಜಿಸಿರುವ ಮಹಿಳಾ ಉದ್ಯಮಿಗಳಿಂದ ತಯಾರಿಸಲಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ರಾಜ್ಯದ ವಿವಿಧ ಭಾಗಗಳ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊರೊನಾದಿಂದಾಗಿ ಆರ್ಥಿಕತೆಯ ಬೆನ್ನಲೆಬು ಕುಸಿದು ಬಿದ್ದಿದೆ. ಈಗ ಮತ್ತೆ ಸಣ್ಣ, ಗುಡಿ ಕೈಗಾರಿಗಳು ಬೆಳವಣಿಗೆ ರಾಜ್ಯ ಸರ್ಕಾರ ರೂಪುರೇಷೆಗಳನ್ನು ರೂಪಿಸಿ ಅವಕಾಶಗಳನ್ನು ಒದಗಿಸುವ ವ್ಯವಸ್ಥೆ ಮಾಡುತ್ತಿದೆ ಎಂದರು.
ಗ್ರಾಮೀಣಾಭಿವೃದ್ಧಿ ಸಚಿವನಾಗಿದ್ದ ಸಂದರ್ಭದಲ್ಲಿ ಗುಡಿ ಕೈಗಾರಿಕೆಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆ ರೂಪಿಸಿದ್ದೆ. ಇದರ ಜೊತೆಗೆ ಕಡಕೊಳದ ಬಳಿ ೨೫೦ ಎಕರೆ ಜಮೀನನ್ನು ಮಹಿಳಾ ಉದ್ಯಮಕ್ಕಾಗಿ ನೀಡಲಾಗಿದೆ. ಮಹಿಳೆಯರಿಗೆ ಸೂಕ್ತ ಅವಕಾಶಗಳನ್ನು ಒದಗಿಸಿದರೆ ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ವಿವರಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್ ಮಾತನಾಡಿ, ಒಂದು ದೇಶದ ಪ್ರಗತಿಯು ಅಲ್ಲಿನ ಮಹಿಳೆಯರ ಅಭಿವೃದ್ಧಿಯ ಮೇಲೆ ನಿರ್ಧರಿಸಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ, ಮಹಿಳೆಯರಿಗೂ ಇಂದಿಗೂ ಎರಡನೇ ದರ್ಜೆ ಪ್ರಜೆಗಳಾದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳಾ ಸಬಲೀಕರಣ ಉದ್ದೇಶದಿಂದಲೇ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಕಾಶಿಯಾದ ಮೂಲಕ ಶೇ.೫ರಷ್ಟು ಬಡ್ಡಿದರದಲ್ಲಿ ಕೋಟ್ಯಾಂತರ ರೂ.ಸಾಲ ನೀಡುತ್ತಿದೆ. ಮಹಿಳೆಯರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಗಮನ ಸೆಳೆದ ಪ್ರದರ್ಶನ:
ಮಹಿಳೆಯರು ತಯಾರಿಸಿದ ಕಸೂತಿ ಸೀರೆಯಿಂದ ಹಿಡಿದು ಹಿತ್ತಾಳೆ ಮೂರ್ತಿಗಳು, ಮನೆಯಲ್ಲಿಯೇ ತಯಾರಿಸಿದ ಸಿದ್ದ ಆಹಾರ ಉತ್ಪನ್ನಗಳು ಮತ್ತು ಉಪ್ಪಿನಕಾಯಿ, ಚಟ್ನಿಪುಡಿ, ಹಪ್ಪಳ, ಸಂಡಿಗೆ, ಜ್ಯೂಟ್ ಬ್ಯಾಕ್, ಸೌಂದರ್ಯ ವರ್ಧಕಗಳು, ಡಿಸೈನರ್ ಕುಪ್ಪಸ, ಕುರ್ತಾಗಳು, ಲೋಹದ ಕಲಾಕೃತಿಗಳು, ಮರದ ಕೆತ್ತನೆಗಳು ಪ್ರದರ್ಶನದಲ್ಲಿ ಗಮನ ಸೆಳೆದವು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಮಹಿಳಾ ಕರಕುಶಲಕರ್ಮಿಗಳು, ಆಹಾರ, ವಸ್ತ್ರೋದ್ಯಯ, ಸೌಂದರ್ಯ ವರ್ಧಕಗಳು, ೮೦ಕ್ಕೂ ಅಧಿಕ ಮಳಿಗೆಗಳನ್ನೂ ನಿರ್ಮಿಸಲಾಗಿದ್ದು, ಮಂಡ್ಯ, ಮೈಸೂರು, ಹಾಸನ ಹಲವು ಜಿಲ್ಲೆಗಳಿಂದ ಉತ್ಪಾದಕರು ಆಗಮಿಸಿದ್ದಾರೆ.
ಫೆ.23ರಂದು ಮೇಳದ ಕೊನೆಯ ದಿನವಾಗಿದೆ.
ಮೈಸೂರು ಕೈಗಾರಿಕಾ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು, ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್, ಉಪಾಧ್ಯಕ್ಷ ಬಿ.ಆರ್.ಗಣೇಶ್ ರಾವ್, ಜಂಟಿ ಕಾರ್ಯದರ್ಶಿ ಎನ್.ಸತೀಶ್, ಜಂಟಿ ಕಾರ್ಯದರ್ಶಿ ಜೆ.ಎಸ್.ಬಾಬು, ಖಜಾಂಚಿ ಎಚ್.ಮಂಜುನಾಥ್, ಗ್ರಾಮೀಣಾಭಿವೃದ್ದಿ ಉಪ ಸಮಿತಿ ಅಧ್ಯಕ್ಷ ಸಿ.ಎಂ.ಸುಬ್ರಮಣಿಯನ್, ಮಹಿಳಾ ಸಬಲೀಕರಣ ಸಮಿತಿಯ ಅಧ್ಯಕ್ಷೆ ಎಸ್.ಲತಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಶಿವಲಿಂಗಯ್ಯ ಹಾಜರಿದ್ದರು.


