ದಾವಣಗೆರೆ: ಅಕ್ರಮ ಸಂಬಂಧದಿಂದ ಹೊಟ್ಟೆಯಲ್ಲಿದ್ದ ಮಗು ಸಾವಿಗೆ ಕಾರಣವಾಗಿದ್ದಕ್ಕೆ ಪ್ರಿಯಕರನಿಂದ ಕೊಲೆ ಮಾಡಿಸಿ ಕೇರಳದಲ್ಲಿ ತಲೆಮರೆಸಿಕಂಡಿದ್ದ ಪತ್ನಿ ಹಾಗೂ ಪ್ರಿಯಕರ ಸೇರಿದಂತೆ ಮೂವರನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.
ಪತಿ ನಿಂಗಪ್ಪ ಕೊಲೆ ಮಾಡಿದ್ದ ಪತ್ನಿ ಲಕ್ಷ್ಮೀ (38) ಹಾಗೂ ಪ್ರಿಯಕರ ತಿಪ್ಪೇಶ್ ನಾಯ್ಕ್ (42) ಮತ್ತು ಸ್ನೇಹಿತ ಸಂತೋಷ್ (40) ಅವರನ್ನು ಬಂಧಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತ್ಯಾಗದಕಟ್ಟೆಯ ನಿವಾಸಿ ಲಕ್ಷ್ಮೀ ಮತ್ತು ಚನ್ನಗಿರಿ ತಾಲೂಕಿನ ಅಣ್ಣಾಪುರ ಗ್ರಾಮದ ನಿವಾಸಿ ನಿಂಗಪ್ಪ ಮದುವೆಯಾಗಿ 8 ವರ್ಷ ಕಳೆದರೂ ಮಗು ಆಗಿರಲಿಲ್ಲ.
ನಿಂಗಪ್ಪನಿಗೆ ಮಕ್ಕಳಾಗುವ ಯೋಗವಿರಲಿಲ್ಲ. ಅಡಿಕೆ ಕೆಲಸ ಮಾಡುತ್ತಿದ್ದ ನಿಂಗಪ್ಪ ಜೊತೆ ಸ್ನೇಹಿತರಾದ ತಿಪ್ಪೇಶ್ ನಾಯ್ಕ್ ಹಾಗೂ ಸಂತೋಷ್ ಕೂಲಿ ಕೆಲಸಕ್ಕೆ ಬರುತ್ತಿದ್ದರು. ಈ ವೇಳೆ ಪತ್ನಿ ಲಕ್ಷ್ಮೀ ಕೂಡ ಅಡಿಕೆ ಕೆಲಸಕ್ಕೆ ಹೋಗುತ್ತಿದ್ದು, ತಿಪ್ಪೇಶ್ ನಾಯ್ಕ್ ಗೆ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ ಅನೈತಿಕ ಸಂಬಂಧ ಬೆಳೆದಿದೆ. ಇದರ ಪರಿಣಾಮವಾಗಿ ಲಕ್ಷ್ಮೀ ಗರ್ಭಿಣಿಯಾಗಿದ್ದಳು.
ತನಗೆ ಮಕ್ಕಳು ಆಗುವುದಿಲ್ಲ ಎಂದು ತಿಳಿದಿದ್ದರೂ ಪತ್ನಿ ಗರ್ಭಿಣಿಯಾಗಿದ್ದರಿಂದ ಅನುಮಾನಗೊಂಡ ನಿಂಗಪ್ಪ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದ. ಪತಿಯ ವರ್ತನೆಗೆ ಕೋಪಗೊಂಡ ಲಕ್ಷ್ಮೀ ತಾಯಿಯಾಗುವ ಭಾಗ್ಯನ್ನು ಹಾಳು ಮಾಡಿದ ಪತಿ ನಿಂಗಪ್ಪನನ್ನು ಕೊಲೆ ಮಾಡಬೇಕೆಂದು ನಿರ್ಧರಿಸಿ ಸಂಚು ರೂಪಿಸಿದಳು.
2024 ರ ಜನವರಿ 18 ರಂದು ಲಕ್ಷ್ಮೀ ತನ್ನ ಪ್ರಿಯಕರ ತಿಪ್ಪೇಶ್ ನಾಯ್ಕ ಜೊತೆ ಸೇರಿಕೊಂಡು ನಿಂಗಪ್ಪನನ್ನು ಪಾರ್ಟಿ ಮಾಡಿಸುವ ನೆಪದಲ್ಲಿ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾಳೆ. ಲಕ್ಷ್ಮೀ ಮತ್ತು ತಿಪ್ಪೇಶ್ ಇಬ್ಬರೂ ಸೇರಿಕೊಂಡು ನಿಂಗಪ್ಪನಿಗೆ ಕಂಠಪೂರ್ತಿ ಕುಡಿಸಿದ್ದಾರೆ. ಮದ್ಯದ ನಶೆಯಲ್ಲಿದ್ದ ನಿಂಗಪ್ಪನನ್ನು ಬಸವಾಪುರ ಗ್ರಾಮದ ಬಳಿರುವ ಭದ್ರಾ ನಾಲೆಯಲ್ಲಿ ತಳಿದ್ದಾರೆ.
ಪತಿ ನಿಂಗಪ್ಪ ಭದ್ರಾ ನಾಲೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ ಎಂದು ಲಕ್ಷ್ಮೀ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಭದ್ರಾ ನಾಲೆಯಲ್ಲಿ ಎಷ್ಟೇ ಶೋಧ ಕಾರ್ಯಾ ನಡೆಸಿದರೂ ನಿಂಗಪ್ಪನ ಪತ್ತೆಯಾಗಿರಲಿಲ್ಲ.
ಈ ವೇಳೆ ಲಕ್ಷ್ಮೀ ತವರು ಮನೆ ಸೇರಿದರೆ ತಿಪ್ಪೇಶ್ ನಾಯ್ಕ್ ಕೆಲಸಕ್ಕೆಂದು ಕೇರಳಕ್ಕೆ ಹೋಗಿ ಅಲ್ಲಿಯೇ ವಾಸವಿದ್ದ. ನಂತರ ಲಕ್ಷ್ಮೀ ತವರು ಮನೆಯಲ್ಲಿ ಯಾರಿಗೂ ಹೇಳದೆ-ಕೇಳದೆ ಕೇರಳಕ್ಕೆ ಹೋಗಿ ತಿಪ್ಪೇಶ್ ಜೊತೆ ವಾಸವಿದ್ದಾಳೆ. ಲಕ್ಷ್ಮೀ ತವರು ಮನೆಯವರು ಲಕ್ಷ್ಮೀ ಕಾಣೆಯಾಗಿದ್ದಾಳೆ ಎಂದು ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಚಾರಣೆ ನಡೆಸಿದ ಪೊಲೀಸರಿಗೆ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಪ್ರೇಮಿಗಳನ್ನು ಬಂಧಿಸಿದ್ದಾರೆ.



