ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಗುರುವಾರ ದಿಢೀರನೆ ಬಂಗ್ಲೆಗುಡ್ಡದಲ್ಲಿ ಎಸ್ ಐಟಿ ಮರು ಪರಿಶೀಲನೆ ನಡೆಸಿದಾಗ ಮೂರು ಅಸ್ಥಿಪಂಜರಗಳು ಪತ್ತೆಯಾಗಿದೆ.
ಎಸ್ ಐಟಿ ಧರ್ಮಸ್ಥಳದ ನೇತ್ರಾವತಿ ಸ್ಥಳದಲ್ಲಿ ದೂರುದಾರ ಚೆನ್ನಯ್ಯ ನೀಡಿದ ಮಾಹಿತಿ ಆಧರಿಸಿ ನಡೆಸಿದ್ದ ಸ್ಥಳಲ್ಲಿ ಎರಡು ಕಡೆ ಮಾತ್ರ ಕಳೇಬರಗಳು ಪತ್ತೆಯಾಗಿದ್ದವು. ಇದರಲ್ಲಿ ಬಂಗ್ಲೆಗುಡ್ಡದಲ್ಲಿ ಒಂದು ಪುರುಷನ ಕಳೇಬರ ಕೂಡ ಸೇರಿತ್ತು. ಇದೀಗ ಇದೇ ಜಾಗದ ಆಸುಪಾಸಿನಲ್ಲಿ ನಡೆದ ಪರಿಶೀಲನೆ ವೇಳೆ ಮತ್ತೆ ಮೂರು ಅಸ್ಥಿಪಂಜರಗಳು ಪತ್ತೆಯಾಗಿವೆ.
ಬಂಗ್ಲೆ ಗುಡ್ಡ ಕಾಡಿನಲ್ಲಿ ಮಾನವರ ಬುರುಡೆಗಳು ಪತ್ತೆಯಾಗಿವೆ. ಮೂರು ಬುರುಡೆಗಳಲ್ಲಿ 1 ಗಂಡಸಿನ ಬುರುಡೆ ಅನ್ನೋದು ಖಾತ್ರಿಯಾಗಿದೆ. ಮೂರು ಬುರುಡೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲು ಸಿದ್ಧತೆ ನಡೆದಿದೆ. ಮೂರು ಬುರುಡೆಗಳು ಭೂಮಿಯ ಮೇಲ್ಪದರದಲ್ಲೇ ಪತ್ತೆಯಾದ ಕಾರಣ, ಎಸ್ಐಟಿ ತನಿಖೆಯನ್ನ ಇನ್ನಷ್ಟು ತೀವ್ರಗೊಳಿಸಿದೆ.
ಪ್ರಕರಣದ ಆರಂಭದಲ್ಲಿ ಚೆನ್ನಯ್ಯ ತಂದ ಬುರುಡೆ ಎಲ್ಲಿಂದ ತಂದ ಎಂಬ ಪ್ರಶ್ನೆಗೆ ಇದೀಗ ಎಸ್ಐಟಿ ಉತ್ತರ ಕಂಡುಹಿಡಿದಿದೆ. ಬಂಗ್ಲೆ ಗುಡ್ಡ ಕಾಡಿನಿಂದಲೇ ಚಿನ್ನಯ್ಯ ಬುರುಡೆ ತಂದಿದ್ದು ಅದಕ್ಕೆ ಸಾಕ್ಷಿ ನಾನೇ ಅಂತಾ ವಿಠಲಗೌಡ ಒಪ್ಪಿಕೊಂಡಿದ್ದಾರೆ. ಈ ಹಿನ್ನಲೆ ಎಸ್ಐಟಿ ಮತ್ತೆ ವಿಠಲಗೌಡನನ್ನು ಕರೆದೊಯ್ದು ಬಂಗ್ಲೆ ಗುಡ್ಡ ಕಾಡಿನಲ್ಲಿ ಮಹಜರು ನಡೆಸಿತ್ತು. ಪ್ರಕರಣದ ಸೂತ್ರಧಾರಿಗಳು ಅಂತ ಕರೆಸಿಕೊಂಡವರ ವಿಚಾರಣೆಯನ್ನ ಎಸ್ಐಟಿ ತೀವ್ರಗೊಳಿಸಿದೆ. ಆದ್ರೆ ಯಾರ ಮೇಲೂ ಎಸ್ಐಟಿಗೆ ಪ್ರಬಲ ಸಾಕ್ಷ್ಯ ಲಭ್ಯವಾಗುತ್ತಿಲ್ಲ.
ಎಸ್ ಐಟಿಗೆ ಮಹೇಶ್ ತಿಮರೋಡಿ ದೂರು
ಇದೇ ವೇಳೆ ಎಸ್ ಐಟಿ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಸಾಮಾಜಿಕ ಹೋರಾಟಗಾರ ಮಹೇಶ್ ತಿಮರೋಡಿ ದೂರು ನೀಡಿದ್ದಾರೆ. ಆದರೆ ದೂರಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಮತ್ತೊಂದೆಡೆ ಗಿರೀಶ್ ಮಟ್ಟೆಣ್ಣನವರ್ ಹಾಗೂ ಆರ್ ಐಟಿ ಕಾರ್ಯಕರ್ತ ಜಯಂತ್ ಅವರ ವಿಚಾರಣೆ ಕೂಡ ಮುಂದುವರಿದಿದೆ.
ನನಗೆ ಎಸ್ಐಟಿ ಹೊಡೆದಿಲ್ಲ. ಅವರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಕಾನೂನು ವಿಚಾರದಲ್ಲಿ ನಾನು ತಪ್ಪು ಮಾಡಿದ್ರೆ ಖಂಡಿತಾ ಶಿಕ್ಷೆ ಅನುಭವಿಸೋಕೆ ತಯಾರಿದ್ದೇನೆ. ತನಿಖೆಯಲ್ಲಿ ಸತ್ಯ ಹೊರಬರುತ್ತದೆ ಎಂದು ಜಯಂತ್ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಸೌಜನ್ಯ ಮಾವ ವಿಠಲ್ಗೌಡ ವೀಡಿಯೋ ಬಿಡುಗಡೆ ಮಾಡಿ, ಬಂಗ್ಲೆ ಗುಡ್ಡಕ್ಕೆ ಎರಡು ಸಲ ಸ್ಥಳ ಮಹಜರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದ ವೇಳೆ ಹೆಣಗಳ ರಾಶಿ ಸಿಕ್ಕಿದೆ. ಮೂರು ಮನುಷ್ಯರ ಕಳೆಬರಹ ಸಿಕ್ಕಿದೆ. ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.


