ಕೊಟ್ಟ ಹಣ ವಾಪಸ್ ಕೇಳಿದ ಮಾವನನ್ನು ಕೊಂದು ಉಪ್ಪಿನ ಚಿಲದಲ್ಲಿ ತುಂಬಿ ಸಜ್ಜೆ ಮೇಲೆ ಅಳಿಯ ಮುಚ್ಚಿಟ್ಟ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಜೇವರ್ಗಿ ತಾಲೂಕಿನ ಯಡ್ರಾಮಿ ಠಾಣೆಯ ಕಣಮೇಶ್ವರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶರಣಬಸಪ್ಪ ಭೋವಿ (33) ಅವರನ್ನು ಕೊಲೆ ಮಾಡಿದ ಕಣಮೇಶ್ವರ ಗ್ರಾಮದ ಅಜಯ್ ಭೋವಿ ಬಂಧಿತ ಆರೋಪಿ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅರೆಮುರಾಳ ಗ್ರಾಮದ ನಿವಾಸಿ ಆಗಿರುವ ಅಜಯ್ ಭೋವಿ ಕೊಟ್ಟ ಸಾಲ ವಾಪಸ್ ಕೊಡು ಎಂದು ಕೇಳಿದ ಮಾವಗೆ ಹಣ ವಾಪಸ್ ಕೊಡುವುದಾಗಿ ಮನೆಗೆ ಕರೆಸಿ ಕೊಲೆ ಮಾಡಿದ್ದಾನೆ. ಶವವನ್ನು ಅಡುಗೆ ಕೋಣೆಯಲ್ಲಿರುವ ಸಜ್ಜೆಯ ಮೇಲೆ ಉಪ್ಪಿನ ಚಿಲದಲ್ಲಿ ಶವ ಮುಚ್ಚಿಟ್ಟಿದ್ದಾನೆ.
ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದ ಸುದ್ದಿ ಕೇಳಿದ (ಕೊಲೆಯಾದ ವ್ಯಕ್ತಿ) ಶರಣಬಸಪ್ಪ ಅವರ ತಾಯಿ ಹಾಗೂ ಗ್ರಾಮಸ್ಥರ ಜತೆ ಸೇರಿ ಆರೋಪಿಯ ಮನೆಗೆ ಹೋಗಿ ಶವ ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕಲಬುರಗಿ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಮೃತ ದೇಹ ರವಾನಿಸಿದ್ದರು. ಜೇವರ್ಗಿ ಸಿಪಿಐ ರಾಜೇಸಾಹೇಬ ನದಾಫ್, ಯಡ್ರಾಮಿ ಠಾಣೆ ಪಿಎಸ್ಐ ವಿಶ್ವನಾಥ ಮುದರೆಡ್ಡಿ ಪ್ರಕರಣ ದಾಖಲಿಸಿಕೊಂಡು.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಮುದ್ದೇಬಿಹಾಳ ತಾಲೂಕಿನ ಅರೆಮುರಾಳ ಗ್ರಾಮದ ಶರಣಬಸಪ್ಪ ಭೋವಿ ಅವರು ಆರೋಪಿಗೆ 6 ಲಕ್ಷ ರೂ. ನೀಡಿದ್ದರು. ಆ ಹಣ ನೀಡುವಂತೆ ಒತ್ತಡ ಹೇರಿದ್ದರಿಂದ ಆರೋಪಿ ಅಜಯ್ ನನ್ನ ಮನೆಗೆ ಬಾ ಎಂದು ಕರೆಸಿಕೊಂಡಿದ್ದ.
ಮನೆಗೆ ಬಂದ ಶರಣಬಸಪ್ಪನನ್ನು ಹತ್ಯೆಗೈದು ಕಾಲು ಮತ್ತು ಮುಖಕ್ಕೆ ಟಿಸ್ಕೋ ಟೇಪ್ ಸುತ್ತಿ ಉಪ್ಪಿನ ಚೀಲದಲ್ಲಿ ಹಾಕಿ ಚೀಲಕ್ಕೆ ಟೇಪ್ ಸುತ್ತಿ ಶವವನ್ನು ಬೇರೆ ಕಡೆಗೆ ಸಾಗಿಸುವ ಉದ್ದೇಶದಿಂದ ಆರೋಪಿ ತನ್ನ ಮನೆಯಲ್ಲಿನ ಅಡುಗೆ ಕೋಣೆಯಲ್ಲಿರುವ ಸಜ್ಜೆಯ ಮೇಲೆ ಉಪ್ಪಿನ ಚಿಲದಲ್ಲಿ ಹೆಣ ಮುಚ್ಚಿಟ್ಟಿದ್ದ ವಿಚಾರ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.
ಕೊಲೆಯಾದ ವ್ಯಕ್ತಿಯ ತಾಯಿ ತವರು ಮನೆ ಕಣಮೇಶ್ವರ ಆದ ಕಾರಣ ತನ್ನ ಹಿರಿಯ ಮಗಳನ್ನು ಸುರೇಶ ಎಂಬಾತನಿಗೆ ಮದುವೆ ಮಾಡಿದ್ದರು.
ಕೊಲೆಯಾದ ವ್ಯಕ್ತಿ ಆಗಾಗ ಕಣಮೇಶ್ವರ ಗ್ರಾಮಕ್ಕೆ ಹೋಗಿ ಬರುತ್ತಿದ್ದ. ಅದೇ ಗ್ರಾಮದ ಅಜಯಯೊಂದಿಗೆ ಪರಿಚಯ ಬೆಳೆಸಿಕೊಂಡಿದ್ದ. ಬಳಿಕ ಸಾಲ ಪಡೆದು ವಾಪಸ್ ಮಾಡಲು ಸತಾಯಿಸುತ್ತಿದ್ದ. ಶರಣಬಸಪ್ಪ ಕೊಲೆ ಮಾಡಿ ಶವವನ್ನು ಬೇರೆ ಕಡೆ ಸಾಗಿಸಿ ಪ್ರಕರಣ ಮುಚ್ಚಿಹಾಕುವ ಸಂಚು ರೂಪಿಸಿದ್ದ ಎನ್ನಲಾಗಿದೆ.


