ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಖ್ಯಾತಿ ಪಡೆದ ಹೋರಿ ಹಬ್ಬ ನಡೆಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದ್ದು, ಸುಪ್ರೀಂಕೋರ್ಟ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಷರತ್ತು ವಿಧಿಸಿದೆ.
ನ್ಯಾ. ಎಂ ನಾಗಪ್ರಸನ್ನ ಅವರನ್ನೊಳಗೊಂಡ ಪೀಠ, ಶಿವಮೊಗ್ಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಂಭ್ರಮದಿಂದ ಆಚರಿಸುವ ಹೋರಿ ಹಬ್ಬ ಆಚರಿಸಲು ಅನುಮತಿ ನೀಡಿದೆ. ಅಲ್ಲದೇ ತಮಿಳುನಾಡಿ ಜಲ್ಲಿಕಟ್ಟು ವಿಷಯದಲ್ಲಿ ಸುಪ್ರೀಂ ಕೋರ್ಟ್ ವಿಧಿಸಿರುವ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಿದೆ.
ಸುಪ್ರೀಂ ಕೋರ್ಟ್ ಮತ್ತು ಈ ನ್ಯಾಯಾಲಯದ ವಿಭಾಗೀಯ ಪೀಠವು ಹೋರಿ ಹಬ್ಬಕ್ಕೆ ನೀಡಬೇಕಾದ ಅನುಮತಿಯು ಸುರಕ್ಷತಾ ಕ್ರಮಗಳು ಮತ್ತು ಪ್ರಾಣಿಗಳ ಭಾಗವಹಿಸುವಿಕೆ ಅಥವಾ ಬಳಕೆಯ ಕುರಿತು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಷರತ್ತುಗಳಿಗೆ ಕಟ್ಟುನಿಟ್ಟಾಗಿ ಅನುಗುಣವಾಗಿರಬೇಕು. ಇದು ಯಾವುದೇ ಸಂದರ್ಭದಲ್ಲಿ ಕಾಯ್ದೆಯ (ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960) ನಿಬಂಧನೆಗಳಿಗೆ ವಿರುದ್ಧವಾಗಿರಬಾರದು” ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೇ ಹಬ್ಬದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಖಿಲ ಕರ್ನಾಟಕ ರೈತ ಜಾನಪದ ಕ್ರೀಡಾ ಹೋರಿಹಬ್ಬ ಹೋರಾಟ ಸಮಿತಿಯು ಉತ್ಸವಗಳ ಭಾಗವಾಗಿ ಎತ್ತುಗಳು ಮತ್ತು ಎತ್ತಿನ ಬಂಡಿಗಳನ್ನು ಒಳಗೊಂಡ ರ್ಯಾಲಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಕೋರಿದಾಗ, 2022ರ ಡಿಸೆಂಬರ್ 12ರ ಅಧಿಸೂಚನೆಯನ್ನು ಉಲ್ಲೇಖಿಸಿದ ಅಧಿಕಾರಿಗಳು, ಆ ಅಧಿಸೂಚನೆಯ ಪ್ರಕಾರ ಮತ್ತು ನಿಗದಿತ ಷರತ್ತುಗಳನ್ನು ಪೂರೈಸಿದ ನಂತರ ಮಾತ್ರ ಅನುಮತಿ ನೀಡಲಾಗುವುದು ಎಂದಿದ್ದರು.


