Thursday, December 25, 2025
Google search engine
Homeರಾಜ್ಯಗ್ಯಾರಂಟಿ ಯೋಜನೆಗಳಿಂದ ಜನರ ಬದುಕಿನಲ್ಲಿ ಆರ್ಥಿಕ ಚೇತರಿಕೆ: ಬಿಜೆಪಿಗೆ ದಿನೇಶ್ ಗೂಳಿಗೌಡ ತಿರುಗೇಟು

ಗ್ಯಾರಂಟಿ ಯೋಜನೆಗಳಿಂದ ಜನರ ಬದುಕಿನಲ್ಲಿ ಆರ್ಥಿಕ ಚೇತರಿಕೆ: ಬಿಜೆಪಿಗೆ ದಿನೇಶ್ ಗೂಳಿಗೌಡ ತಿರುಗೇಟು

ಬೆಳಗಾವಿ (ಸುವರ್ಣ ವಿಧಾನ ಸೌಧ): ಗ್ಯಾರಂಟಿ ಯೋಜನೆಗಳ ಮೂಲಕ ನಾಗರಿಕರಿಗೆ ನೇರವಾಗಿ ಹಣ ವರ್ಗಾವಣೆಯಿಂದ ಅವರ ಆರ್ಥಿಕ ಬದುಕು ಬಹಳಷ್ಟು ಚೇತರಿಕೆ ಕಂಡಿದ್ದು ಕೆಲವರು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. 5 ಗ್ಯಾರಂಟಿ ಯೋಜನೆಗಳ ಮೂಲಕ ಒಟ್ಟು 1.08 ಲಕ್ಷ ಕೋಟಿ ರೂ. ಮೊತ್ತವು ನೇರವಾಗಿ ಜನರ ಖಾತೆಗಳಿಗೆ ತಲುಪಿದೆ. ಈ ಸಂಬಂಧ ವಿಧಾನ ಪರಿಷತ್ ವಿರೋಧ ಪಕ್ಷದ  ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ತಿರುಗೇಟು ನೀಡಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕತೆಯನ್ನು ಹಾಳು ಮಾಡುತ್ತಿವೆ ಮತ್ತು ಅಭಿವೃದ್ಧಿಗೆ ಅಡ್ಡಿಯಾಗುತ್ತಿವೆ ಎಂಬ ವಿಧಾನ ಪರಿಷತ್ ವಿರೋಧ ಪಕ್ಷದ  ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಟೀಕೆಗೆ, ಕಾಂಗ್ರೆಸ್ ಶಾಸಕರಾದ ದಿನೇಶ್‌ ಗೂಳಿಗೌಡ ಅವರು ಅಂಕಿ-ಅಂಶಗಳ ಸಮೇತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಗ್ಯಾರಂಟಿ ಯೋಜನೆಗಳ ಯಶಸ್ಸು ಮತ್ತು ಅವುಗಳಿಂದ ಕೋಟ್ಯಂತರ ಜನರ ಬದುಕಿನಲ್ಲಿ ಆದ ಬದಲಾವಣೆಯನ್ನು ಅವರು ಒತ್ತಿ ಹೇಳಿದ್ದಾರೆ.

ಪಂಚ ಗ್ಯಾರಂಟಿ ಮತ್ತು ಲಾಭ

ಗೃಹಲಕ್ಷ್ಮಿ: ಇದುವರೆಗೂ 23 ಕಂತುಗಳಲ್ಲಿ ಒಟ್ಟು ₹54,980 ಕೋಟಿ ಬಿಡುಗಡೆ ಮಾಡಲಾಗಿದ್ದು, 1.24 ಕೋಟಿ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. 24ನೇ ಕಂತಿನ ಹಣವೂ ಸಂದಾಯವಾಗುತ್ತಿದೆ.

ಶಕ್ತಿ ಯೋಜನೆ: ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದ ನಂತರ, ಈವರೆಗೆ ₹15,951.31 ಕೋಟಿ ಮೌಲ್ಯದ 618 ಕೋಟಿಗೂ ಹೆಚ್ಚು (618.92 ಕೋಟಿ) ಉಚಿತ ಟಿಕೆಟ್‌ಗಳನ್ನು ಮಹಿಳೆಯರು ಪಡೆದುಕೊಂಡಿದ್ದಾರೆ.

ಗೃಹಜ್ಯೋತಿ: 1.67 ಕೋಟಿ ಮನೆಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ.

ಅನ್ನಭಾಗ್ಯ: 1 ಕೋಟಿ 53 ಲಕ್ಷ ಪಡಿತರ ಚೀಟಿಗಳಿದ್ದು,  5 ಕೋಟಿ 42  ಲಕ್ಷ  ಫಲಾನುಭವಿಗಳು ಈ ಯೋಜನೆಯಡಿ ಪ್ರತಿ ತಿಂಗಳು ತಲಾ 10 ಕೆಜಿ  ಅಕ್ಕಿ ಪಡೆಯುತ್ತಿದ್ದಾರೆ.

ಯುವನಿಧಿ: 2.84 ಲಕ್ಷ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಹೊಂದಿದ ಯುವಕರು ಮಾಸಿಕ ಭತ್ಯೆಯನ್ನು ಪಡೆಯುತ್ತಿದ್ದಾರೆ. (ಯೋಜನೆಯಡಿ ಈವರೆಗೆ ₹757 ಕೋಟಿಗೂ ಹೆಚ್ಚು ನೆರವು ನೀಡಲಾಗಿದೆ).

ಮಹಿಳೆಯರ ಸ್ವಾವಲಂಬನೆ ಮತ್ತು ಜೀವನದ ಬದಲಾವಣೆ

ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಟೀಕೆ ಸತ್ಯಕ್ಕೆ ದೂರವಾಗಿದೆ. ವಾಸ್ತವವಾಗಿ, ಗ್ಯಾರಂಟಿ ಯೋಜನೆಗಳು, ವಿಶೇಷವಾಗಿ ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಗಳು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಮಹಿಳೆಯರ ಬದುಕನ್ನು ಸಂಪೂರ್ಣವಾಗಿ ಬದಲಾಯಿಸಿವೆ.

ಆರ್ಥಿಕ ಸ್ವಾತಂತ್ರ್ಯ: ಗೃಹಲಕ್ಷ್ಮಿಯಿಂದ ಪ್ರತಿ ತಿಂಗಳು ನೇರವಾಗಿ ₹2,000 ಹಣ ಪಡೆಯುತ್ತಿರುವುದರಿಂದ, ಮಹಿಳೆಯರು ಸಣ್ಣ ಉಳಿತಾಯ ಮಾಡಲು, ಮಕ್ಕಳ ಶಿಕ್ಷಣಕ್ಕೆ ಹಣ ವಿನಿಯೋಗಿಸಲು ಮತ್ತು ಸಣ್ಣ ಗೃಹ ಕೈಗಾರಿಕೆಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿದೆ. ಇದು ಅವರ ಸ್ವಾವಲಂಬನೆಗೆ ದೊಡ್ಡ ಬಲ ನೀಡಿದೆ.

ಸಂಚಾರ ಸ್ವಾತಂತ್ರ್ಯ: ಶಕ್ತಿ ಯೋಜನೆಯಿಂದ ಉಚಿತ ಪ್ರಯಾಣಕ್ಕೆ ಅವಕಾಶ ಸಿಕ್ಕಿರುವುದರಿಂದ, ಮಹಿಳೆಯರು ಕೆಲಸ, ವ್ಯಾಪಾರ, ಶಿಕ್ಷಣ, ಮತ್ತು ವೈಯಕ್ತಿಕ ಅಗತ್ಯಗಳಿಗಾಗಿ ಮುಕ್ತವಾಗಿ ಪ್ರಯಾಣಿಸುತ್ತಿದ್ದಾರೆ. ಇದರಿಂದ ಅವರ ಶ್ರಮದ ಹಣ ಉಳಿತಾಯವಾಗಿದ್ದು, ಇದು ಆರ್ಥಿಕ ವ್ಯವಸ್ಥೆಗೆ ಚೈತನ್ಯ ನೀಡಿದೆ.

ಈ ಯೋಜನೆಗಳು ಜನರಿಗೆ ನೇರವಾಗಿ ಆರ್ಥಿಕ ನೆರವು ನೀಡಿ ಅವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿವೆ. ಇದರಿಂದಾಗಿ ಸ್ಥಳೀಯ ಮಾರುಕಟ್ಟೆಗಳು ಮತ್ತು ಗ್ರಾಮೀಣ ಆರ್ಥಿಕತೆಗೆ ಪುನಶ್ಚೇತನ ಸಿಕ್ಕಿದ್ದು, ಜನರ ಬದುಕು ಉಳಿದಿದೆ ಎಂದು ದಿನೇಶ್‌ ಗೂಳಿಗೌಡ ಅವರು ಪ್ರತ್ಯುತ್ತರ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments