ಬೆಳಗಾವಿ: ನನ್ನನ್ನು ಉಚ್ಛಾಟಿಸಿದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಬಿವೈ ವಿಜಯೇಂದ್ರ ರಹಸ್ಯವಾಗಿ ದೆಹಲಿಯ ನೋಯ್ಡಾದಿಂದ 28 ಕಿ.ಮೀ. ದೂರದಲ್ಲಿ ರಹಸ್ಯ ಸಭೆ ನಡೆಸಿದ್ದರು ಎಂದು ಬಿಜೆಪಿ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರನ್ನು ವಿಜಯೇಂದ್ರ ಅಮಿತ್ ಶಾ ಬಳಿ ಕರೆದೊಯ್ದಿದ್ದರು. ಸಿದ್ದರಾಮಯ್ಯ ಸರ್ಕಾರ ವಿಸರ್ಜನೆಗೊಳಿಸಿ ಬಿಜೆಪಿ ಸರ್ಕಾರ ರಚನೆಗೆ ಮಾತುಕತೆ ನಡೆದಿತ್ತು. ಆದರೆ ಅಮಿತ್ ಶಾ ಈ ಪ್ರಸ್ತಾಪ ನಿರಾಕರಿಸಿದ್ದರು ಎಂದರು.
ನಾನು ಪಕ್ಷದಲ್ಲಿದ್ದರೆ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿಗೆ ಕರೆದುಕೊಂಡು ಬಂದು ಸರ್ಕಾರ ರಚಿಸಲು ಆಗಲ್ಲ ಎಂದು ನನ್ನನ್ನು ಉಚ್ಛಾಟಿಸಿದ್ದರು. ವಿಜಯೇಂದ್ರ ತಾವು ಡಿಸಿಎಂ ಆಗಲು ದೆಹಲಿಯಲ್ಲಿ ಡಿಕೆಶಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು ಬಸನಗೌಡ ಪಾಟೀಲ್ ಯತ್ನಾಳ್ ವಿವರಿಸಿದರು.
ನಾನು ಡಿಸಿಎಂ ಆಗುವ ಸಾಧ್ಯತೆ ಇದೆ ಅಂತ ಡಿಕೆಶಿಯನ್ನು ಭೇಟಿ ಮಾಡಿಸಿದ್ದಾರೆ. ವಿಜಯೇಂದ್ರ ಉಪಮುಖ್ಯಮಂತ್ರಿ ಆಗಬೇಕು ಅಂತಿದ್ದ. ಅದಕ್ಕೆ ಅಮಿತ್ ಶಾ ಬಳಿ ಡಿಕೆಶಿಯನ್ನು ಕರೆದುಕೊಂಡು ಹೋಗಿದ್ದರು. ಆದರೆ, ಹೈಕಮಾಂಡ್ ಈ ಪ್ರಸ್ತಾಪ ನಿರಾಕರಿಸಿತು. ಬಿಜೆಪಿಯವರೇ ಈ ಮಾತು ನನಗೆ ಹೇಳಿದರು. ಆ ನಂತರ ಜೋಶಿಯವರು ಅಮಿತ್ ಶಾರ ಸೂಚನೆ ಮೇರೆಗೆ ನಾವು ಯಾರನ್ನೂ ಸೇರಿಸಿಕೊಳ್ತಿಲ್ಲ ಅಂತ ಹೇಳಿದರು ಎಂದರು.
ಡಿಸೆಂಬರ್ 19ಕ್ಕೆ ಕಾಂಗ್ರೆಸ್ನವರು ದೆಹಲಿಗೆ ಹೋಗ್ತಿದ್ದಾರೆ. ಈಗ ಇಲ್ಲಿ ಗುಂಪು ಸಭೆಗಳು, ಡಿನ್ನರ್ ಸಭೆಗಳು ನಡೀತಿವೆ. ಬೆಂಬಲ ಯಾಚನೆ ಮಾಡಲು ಪ್ರತ್ಯೇಕ ಸಭೆಗಳು ನಡೀತಿವೆ. ಇನ್ನರ್ ಮತ್ತು ಡಿನ್ನರ್ ಸಭೆಗಳು ನಡೀತಿವೆ. ಡಿ.19ನೇ ತಾರೀಖಿನ ಬಳಿಕ ಎಲ್ಲವೂ ಗೊತ್ತಾಗುತ್ತದೆ ಎಂದರು.
ಸುವರ್ಣಸೌಧದ ಆರ್.ಅಶೋಕ್ ಕೊಠಡಿಯಲ್ಲಿ ಯತ್ನಾಳ್ ಜೊತೆ ಸುನೀಲ್ ಕುಮಾರ್ ಮತ್ತಿತರರು ಕ್ಲೋಸ್ ಡೋರ್ ಸಭೆ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿ, ಮೊನ್ನೆ ಬಿಜೆಪಿಯ ಕೆಲವು ಶಾಸಕರು ನನ್ನೊಂದಿಗೆ ಮಾತಾಡಿದ್ರು. ಬಿಜೆಪಿಗೆ ನೀವು ಬನ್ನಿ ಎಂದು ಅವರು ಹೇಳಿದರು.
ನಿಮ್ಮಂಥ ನಾಯಕರ ಅಗತ್ಯ ಇದೆ ಬನ್ನಿ ಅಂದ್ರು. ನಾನು ಹಾಗೆ ಬರಲ್ಲ, ದೊಡ್ಡ ಸ್ಥಾನ ಕೊಡಿ ಅಂದಿದ್ದೇನೆ. ದೊಡ್ಡ ಸ್ಥಾನ ಅಂದ್ರೆ ರಾಜ್ಯಾಧ್ಯಕ್ಷ ಹುದ್ದೆ ಅಥವಾ ವಿಪಕ್ಷ ನಾಯಕನ ಹುದ್ದೆ. ನಾನು ಶಾಸಕನಾಗಿಯೇ ವಾಪಸ್ ಹೋಗಲ್ಲ, ಸ್ಥಾನ ಕೊಟ್ರೆ ಹೋಗ್ತೇನೆ. ಇಲ್ಲ ಹಿಂದಿನ ಸಾಲಿನಲ್ಲಿ ಕುಳಿತುಕೊಂಡ್ರೆ ಬರಲ್ಲ ಎಂದಿದ್ದೇನೆ ಎಂದು ತಿಳಿಸಿದರು.


