ಬೆಂಗಳೂರು: ಸಿನಿಮಾ ನಿರ್ಮಾಪಕ ತನ್ನ ಮಗಳಿಗಾಗಿ ನಟಿಯಾಗಿರುವ ಪತ್ನಿಯನ್ನೇ ಅಪಹರಿಸಿ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಿನಿಮಾ ನಿರ್ಮಾಣ ಮಾಡಿ, ನಟನೆಯಲ್ಲೂ ತೊಡಗಿಸಿಕೊಂಡಿರುವ ಹರ್ಷವರ್ಧನ್ ನಟಿ ಚೈತ್ರಾ ಅವರನ್ನೇ ಕಿಡ್ನಾಪ್ ಮಾಡಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಪ್ರಕರಣ ಬೆಂಬತ್ತಿದ ಪೊಲೀಸರು ತನಿಖೆ ನಡೆಸಿದಾಗ ಕೌಟುಂಬಿಕ ಕಲಹದ ಕಾರಣ ಹರ್ಷವರ್ಧನ್ ಮಗಳಿಗಾಗಿ ಪತ್ನಿಯನ್ನೇ ಸ್ನೇಹಿತನ ಮೂಲಕ ಅಪಹರಿಸಿದ್ದಾರೆ. ನಂತರ ಪತ್ನಿಯನ್ನೇ ಮನೆಯವರಿಗೆ ಒಪ್ಪಿಸಿದ್ದಾರೆ. ಆದರೆ ಹೀಗೆ ಪತ್ನಿಯನ್ನೇ ಅಪಹರಿಸಲು ಅವರ ಮಗಳೇ ಕಾರಣ ಎಂದು ತಿಳಿಸಿದ್ದಾರೆ.
ಪತಿ-ಪತ್ನಿ ಇಬ್ಬರೂ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ, ಇದು ಕೌಟುಂಬಿಕ ವಿಷಯ, ತಾವು ಇದನ್ನು ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದಾರೆ. ಮಾತುಕತೆ ಮೂಲಕ ಪ್ರಕರಣ ಬಗೆಹರಿಸಿಕೊಳ್ಳುವಂತೆ ಪೊಲೀಸರು ಸಲಹೆ ನೀಡಿ ಕಳುಹಿಸಿಕೊಟ್ಟಿದ್ದಾರೆ.
ಹರ್ಷವರ್ಧನ್, ವರ್ಧನ್ ಸಿನಿಮಾಸ್ ಕಂಪೆನಿ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿದ್ದು, ‘ನಿನ್ನಲ್ಲೇನೋ ಹೇಳಬೇಕು’ಹೆಸರಿನ ಸಿನಿಮಾ ನಿರ್ಮಿಸಿದ್ದಾರೆ. ಆ ಸಿನಿಮಾದಲ್ಲಿ ಚೈತ್ರಾ ಕೂಡ ನಟಿಸಿದ್ದರು. ಬಳಿಕ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದು ಹೆಣ್ಣು ಮಗುವಿದೆ. ಆದರೆ ಕೌಟುಂಬಿಕ ಕಲಹಗಳಿಂದ ಹರ್ಷವರ್ಧನ್ ಮತ್ತು ಚೈತ್ರಾ ಇಬ್ಬರೂ ದೂರಾಗಿದ್ದು, ಮಗು, ಚೈತ್ರಾ ಅವರ ಜೊತೆಗೆ ಇದೆ.
ಮಗಳನ್ನು ನೋಡಲು ಪತ್ನಿ ಅವಕಾಶ ಮಾಡಿಕೊಡುತ್ತಿರಲಿಲ್ಲ ಇದರಿಂದ ಬೇಸರಗೊಂಡ ಹರ್ಷವರ್ಧನ್, ತನ್ನ ಗೆಳೆಯನೊಟ್ಟಿಗೆ ಸೇರಿಕೊಂಡು ಪತ್ನಿಯನ್ನೇ ಅಪಹರಿಸಿದ್ದಾರೆ. ಗೆಳೆಯನ ಮೂಲಕ, ಶೂಟಿಂಗ್ ಇದೆಯೆಂದು ಹೇಳಿ ಚೈತ್ರಾ ಅವರಿಗೆ 20 ಸಾವಿರ ರೂಪಾಯಿ ಅಡ್ವಾನ್ಸ್ ಕೊಡಿಸಿ, ಮೈಸೂರಿಗೆ ಶೂಟಿಂಗ್ಗೆ ಎಂದು ಕರೆಸಿಕೊಂಡಿದ್ದಾರೆ. ಬಳಿಕ ಪತ್ನಿಯನ್ನು ಅಪಹರಣ ಮಾಡಿ, ಚೈತ್ರಾ ಅವರ ತಾಯಿಗೆ ಕರೆ ಮಾಡಿ, ‘ನಿಮ್ಮ ಮಗಳನ್ನು ಅಪಹರಣ ಮಾಡಿದ್ದೇನೆ, ನನ್ನ ಮಗಳನ್ನು ಕಳಿಸಿದರೆ ನಾನು ನಿಮ್ಮ ಮಗಳನ್ನು ಬಿಟ್ಟು ಕಳಿಸುತ್ತೀನಿ’ ಎಂದು ಬೆದರಿಕೆ ಹಾಕಿದ್ದಾರೆ.
ಕೂಡಲೇ ಚೈತ್ರಾ ಅವರ ಸಹೋದರಿ, ಬ್ಯಾಟರಾಯನಪುರ ಪೊಲೀಸರಿಗೆ ಮಾಹಿತಿ ತಿಳಿಸಿ, ದೂರು ನೀಡಿದ್ದಾರೆ. ಬಳಿಕ ಹರ್ಷವರ್ಧನ್ ಅವರೇ ಪತ್ನಿಯನ್ನು ಕರೆದುಕೊಂಡು ಬಂದು ಅವರ ಕುಟುಂಬದವರಿಗೆ ಒಪ್ಪಿಸಿದ್ದಾರೆ. ಬಳಿಕ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿ, ‘ಇದು ಕೌಟುಂಬಿಕ ವಿಷಯ ನಾವು ಇದನ್ನು ಬಗೆಹರಿಸಿಕೊಳ್ಳುತ್ತೇವೆ’ ಎಂದು ಪೊಲೀಸರ ಮುಂದೆ ಚೈತ್ರಾ ಮತ್ತು ಹರ್ಷವರ್ಧನ್ ಹೇಳಿದ್ದಾರೆ. ಪೊಲೀಸರು, ಮತ್ತೊಮ್ಮೆ ವಿಚಾರಣೆಗೆ ಹಾಜರಾಗಬೇಕೆಂದು ಹೇಳಿ ಹರ್ಷವರ್ಧನ್ ಅನ್ನು ಬಿಟ್ಟು ಕಳಿಸಿದ್ದಾರೆ.
ತನ್ನ ಮಗಳ ಮುಖ ನೋಡಲು ಅವಕಾಶ ಮಾಡಿಕೊಟ್ಟಿರಲಿಲ್ಲ, ಮಗುವಿನ ಜೊತೆ ಮಾತನಾಡಲು ಸಹ ಅವಕಾಶ ಮಾಡಿಕೊಡುತ್ತಿರಲಿಲ್ಲ ಪದೇ ಪದೇ ಕೇಳಿಕೊಂಡರೂ ಸಹ ಮಗುವಿನ ಮುಖ ತೋರಿಸುತ್ತಿರಲಿಲ್ಲ ಹಾಗಾಗಿ ನಾನು ಹೀಗೆ ಮಾಡಿದೆ ಎಂದು ಪೊಲೀಸರ ಎದುರು ಹರ್ಷವರ್ಧನ್ ಹೇಳಿಕೊಂಡಿದ್ದಾರೆ.


