ಕೆಎಸ್ಸಾರ್ಟಿಸಿ ಬಸ್ ಚಲಾಯಿಸುತ್ತಿದ್ದಾಗಲೇ ಹೃದಯಾಘಾತಕ್ಕೆ ಒಳಗಾದ ಚಾಲಕ ಸಾವಿನ ದವಡೆಯಲ್ಲಿದ್ದರೂ ಸಮಯಪ್ರಜ್ಞೆ ಮೆರೆದು ಪ್ರಯಾಣಿಕರನ್ನು ರಕ್ಷಿಸಿದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.
ಕೆಎಸ್ಆರ್ಟಿಸಿ ರಾಜಹಂಸ ಬಸ್ ಚಲಾಯಿಸುತ್ತಿದ್ದ ಉತ್ತರ ಕರ್ನಾಟಕದ ರಾಜೀವ್ ಬಿರಾದಾರ್ (50) ಬಸ್ ನಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಹೃದಯಾಘಾತ ಕಾಣಿಸಿಕೊಂಡು ಸಾವಿನ ಕದ ತಟ್ಟುತ್ತಿದ್ದ ವೇಳೆ ರಾಜೀವ್ ಬಿರಾದಾರ್ ಪ್ರಯಾಣಿಕರ ಸುರಕ್ಷತೆ ಕಡೆ ಗಮನ ಹರಿಸಿ ಮಾನವೀಯತೆ ಮರೆದಿದ್ದಾರೆ.
ಬೆಂಗಳೂರಿಂದ ಹರಿಹರಕ್ಕೆ ಕೆಎಸ್ಆರ್ಟಿಸಿ ರಾಜಹಂಸ ಬಸ್ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
ನೆಲಮಂಗಲದ ಜಾಸ್ ಟೋಲ್ ತಲುಪುವ ಮೊದಲು ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡು 5 ನಿಮಿಷ ವಿಶ್ರಾಂತಿ ಪಡೆದಿದ್ದರು. ಬಳಿಕ ಬಸ್ ಚಲಾಯಿಸಿಕೊಂಡು ನೆಲಮಂಗಲದ ಜಾಸ್ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಎದೆನೋವು ತೀವ್ರಗೊಂಡಿದೆ. ತಕ್ಷಣ ಅವರು ಬಸ್ಸನ್ನು ಹೆದ್ದಾರಿಯ ಒಂದು ಬದಿಯಲ್ಲಿ ಸುರಕ್ಷಿತವಾಗಿ ನಿಲ್ಲಿಸಿದ್ದಾರೆ.
ಸಾವಿನ ತೆಕ್ಕೆಗೆ ಹೋಗುತ್ತಿರುವಾಗ ಚಾಲಕ ಮಾಡಿದ ಈ ಕೆಲಸದಿಂದ ಸಂಭಾವ್ಯ ಅಪಘಾತ ತಪ್ಪಿದ್ದು, ಪ್ರಯಾಣಿಕರು ಸುರಕ್ಷಿತವಾಗಿ ಉಳಿದಿದ್ದಾರೆ. ಕೂಡಲೇ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದು, ಅದು ಸ್ಥಳಕ್ಕೆ ಬರುವ ವೇಳೆಗೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ರಾಜೀವ್ ಬಿರಾದಾರ್ ಮೃತಪಟ್ಟಿದ್ದಾರೆ.


