ಖಾಸಗಿ ಬಸ್ ಹರಿದು ಇಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ಸಂಭವಿಸಿದೆ.
ಖಾಸಗಿ ಬಸ್ ಯೂ ಟರ್ನ್ ತೆಗೆದುಕೊಳ್ಳುವಾಗ ಇಬ್ಬರು ಮಕ್ಕಳಿಗೆ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ವರ್ಷಾ [2] ಮತ್ತು ಭಾನು [4] ಮೃತಪಟ್ಟಿದ್ದಾರೆ.

ಯಾದಗಿರಿ ಮೂಲದ ಶಾಲಾ ಬಸ್ ಚಾಲಕ ಮಾರಪ್ಪ [45] ಎಂಬಾತನನ್ನು ಸ್ಥಳೀಯರು ಹೆಣ್ಣೂರು ಸಂಚಾರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಮಾರಪ್ಪ ಮದ್ಯ ಸೇವಿಸಿರಲಿಲ್ಲ ಎಂಬುದು ತಿಳಿದು ಬಂದಿದೆ.
ಥಣಿಸಂದ್ರದ ಕ್ವಾರ್ಟರ್ಸ್ ಬಳಿ ವಾಸವಾಗಿದ್ದ ಪೊಲೀಸ್ ಪೇದೆ ನಾಗನಗೌಡ ಅವರ ಪುತ್ರಿ ವರ್ಷಾ ಹಾಗೂ ಅಣ್ಣನ ಮಗಳು ಭಾನು ಮೇಲೆ ಬಸ್ ಹರಿದು ಮೃತಪಟ್ಟಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ತಮ್ಮ ಬೈಕ್ನಲ್ಲಿ ಹಾಲು ತರಲು ತೆರಳುವಾಗ ಶಾಲಾ ಬಸ್ ಯೂಟರ್ನ್ ತೆಗೆದುಕೊಳ್ಳುವಾಗ ಬೈಕ್ ಗೆ ಡಿಕ್ಕಿ ಹೊಡೆದಿದೆ. ಹಿಂದೆ ಕುಳಿತಿದ್ದ ಇಬ್ಬರು ಮಕ್ಕಳು ಕೆಳಗೆ ಬಿದ್ದಿದ್ದು, ಹಿಂದಿನ ಚಕ್ರ ಮೇಲೆ ಹರಿದು ದುರಂತ ಸಂಭವಿಸಿದೆ.
ಯಾದಗಿರಿ ಮೂಲದ ನಾಗನಗೌಡ ಅವರು ಸಿಎಆರ್ನಲ್ಲಿ ಕಾನ್ಸ್ಟೇಬಲ್ ಆಗಿದ್ದಾರೆ. ತಮ್ಮ ಮಗಳು ವರ್ಷ ಮತ್ತು ಅಣ್ಣನ ಮಗಳಾದ ಭಾನು ಅನ್ನು ಬೈಕ್ನಲ್ಲಿ ಕೂರಿಸಿಕೊಂಡು ಹಾಲು ತರಲು ಹೋಗುತ್ತಿದ್ದರು. ಇದೇ ವೇಳೆ ಸ್ಕೂಲ್ ಟೈಮ್ ಆಗಿದ್ದರಿಂದ ಬಸ್ ಮಕ್ಕಳ ಪಿಕಪ್ಗೆ ತೆರಳುತ್ತಿತ್ತು. ಬಸ್ ಬರುವುದನ್ನು ಕಂಡು ನಾಗನಗೌಡ ಅವರು ಬೈಕ್ ನಿಲ್ಲಿಸಿದ್ದರು.
ಹೆಣ್ಣೂರು ಸಂಚಾರಿ ಠಾಣೆ ವ್ಯಾಪ್ತಿಯ ಥಣಿಸಂದ್ರ ಬಳಿ ಶಾಲಾ ಬಸ್ ಯೂಟರ್ನ್ ತೆಗೆದುಕೊಳ್ಳುವಾಗ ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ನಿಂದ ಕೆಳಗೆ ಬಿದ್ದ ಇಬ್ಬರು ಮಕ್ಕಳ ಮೇಲೆ ಬಸ್ ಹಿಂಬದಿ ಚಕ್ರ ಹರಿದಿದೆ. ಕೂಡಲೇ ಮಕ್ಕಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕಾನ್ಸ್ಟೇಬಲ್ ನಾಗನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇಬ್ಬರು ಮಕ್ಕಳ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆ ಬಳಿ ಕುಟುಂಬಸ್ಥರು ಜಮಾಯಿಸಿದ್ದು, ಮಕ್ಕಳನ್ನ ಕಳೆದುಕೊಂಡ ಹಿನ್ನಲೆ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಹೆಣ್ಣೂರು ಸಂಚಾರ ಪೊಲೀಸರು ಶಾಲಾ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ನಾಗನಗೌಡ ದಂಪತಿಗೆ ಮದುವೆ ಆಗಿ 10 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. 4 ವರ್ಷದ ಹಿಂದೆ ಹರ್ಷ ಗಂಡು ಮಗು ಜನಿಸಿದರೆ, 2 ವರ್ಷದ ಹಿಂದೆ ವರ್ಷಾ ಜನಿಸಿದ್ದಳು. 5 ದಿನಗಳ ಹಿಂದೆಯಷ್ಟೇ ರಜೆ ಎಂಬ ಕಾರಣಕ್ಕೆ ಭಾನುವನ್ನು ಮನೆಗೆ ಕರೆಸಿಕೊಂಡು ನೋಡಿಕೊಳ್ಳುತ್ತಿದ್ದರು. ಇದೀಗ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.


