ಜಮೀನು, ಹಣ ಹಾಗೂ ವಿಮೆ ಹಣಕ್ಕಾಗಿ ಅಳಿಯನನ್ನು ಕೊಂದು ಅಪಘಾತದ ನಾಟವಾಡಿದ ಮಾವ ಹಾಗೂ ಸೋದರ ಸಂಬಂಧಿಗಳು ಹಾವೇರಿಯ ರಟ್ಟಿಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸೆಪ್ಟೆಂಬರ್ 27ರಂದು 38 ವರ್ಷದ ಬಸವರಾಜ್ ಪುಟ್ಟಪ್ಪನವರ್ ಎಂಬಾತನ ಕೊಲೆ ಮಾಡಿದ್ದಕ್ಕಾಗಿ ಮಾವ ರಾಘವೇಂದ್ರ ಮಾಳಗೊಂಡರ, ಸಿದ್ದನಗೌಡ ಹಲಗೇರಿ, ಪ್ರವೀಣ ಮತ್ತು ಲೋಕೇಶ್ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
8 ಎಕರೆ ಜಮೀನು, ಮನೆ ಹಾಗೂ ಆಕ್ಸಿಡೆಂಟಲ್ ಇನ್ಶೂರೆನ್ಸ್ ಕ್ಲೇಮ್ ಮಾಡಲು ಆರೋಪಿಗಳು ಈ ರೀತಿ ಪ್ಲ್ಯಾನ್ ಮಾಡಿದ್ದಾರೆ. ಕೊಲೆಗೀಡಾದ ಬಸವರಾಜ್ ಸಹೋದರ ಸಂಬಂಧಿಕರು ಯಾವುದೇ ಆಸ್ತಿ ಮಾರಾಟ ಮಾಡದಂತೆ ಕೋರ್ಟ್ ಸ್ಟೇ ಮಾಡಿಸಿದ್ದರು. ವಿಮೆಯಿಂದ ಬರುವ ಹಣ, ಜಮೀನು ಮತ್ತು ಆತನ ಬಳಿ ಇದ್ದ ಹಣಕ್ಕಾಗಿ ಕೊಲೆ ಮಾಡಿದ್ದಾಗಿ ಪ್ರಮುಖ ಆರೋಪಿ ಸಿದ್ದನಗೌಡ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಬಸವರಾಜ್ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದ ಆರೋಪಿಗಳು ಸಂಪ್ರದಾಯದಂತೆ ಮಣ್ಣು ಮಾಡದೇ ಸುಡಲು ಮುಂದಾದಾಗ ಬಸವರಾಜ್ ಸಹೋದರ ಸಂಬಂಧಿ ಶಿವಕುಮಾರ್ಗೆ ಸಂಶಯ ಬಂದು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ವಿಚಾರಣೆ ವೇಳೆ ಬಾಯಿಬಿಟ್ಟ ಆರೋಪಿಗಳು
ತಂದೆ – ತಾಯಿ ಹಾಗೂ ಸಹೋದರರನ್ನು ಕಳೆದುಕೊಂಡು ಏಕಾಂಗಿಯಾಗಿದ್ದ ಬಸವರಾಜ್ ಮದ್ಯವ್ಯಸನಿ ಆಗಿದ್ದ. ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದ ಬಸವರಾಜ್ ಗೆ ಹಿಂದೆ ಮುಂದೆ ಯಾರೂ ಇಲ್ಲ. ಈತನನ್ನು ಕೊಂದರೆ ವಿಮಾ ಹಣದ ಜೊತೆ ಆಸ್ತಿಯೂ ಕೈದಕ್ಕುತ್ತದೆ ಎಂದು ಆರೋಪಿಗಳು ಕೊಲೆಗೆ ಸಂಚು ರೂಪಿಸಿದ್ದರು.
ಬಸವರಾಜ್ ಅಪಘಾತ ವಿಮೆ ಮಾಡಿಸಿದ್ದ ಮಾಹಿತಿಯನ್ನೂ ಪಡೆದಿದ್ದ ಮಾವ ಸಿದ್ದನಗೌಡ ಮನೆಯಿಂದ ಕರೆದುಕೊಂಡು ಹೋಗಿ ಕಂಠಫೂರ್ತಿ ಕುಡಿಸಿ ಬೈಕ್ನಲ್ಲಿ ಊರಿಗೆ ಕಳಿಸಿದ್ದರು. ನಂತರ ಬಸವರಾಜ್ನ ಹಿಂದೆ ಕಾರಿನಿಂದ ಡಿಕ್ಕಿ ಹೊಡಿಸಿ ಅಪಘಾತ ಎಂದು ಬಿಂಬಿಸಿದ್ದರು.
5 ಕೋಟಿ ವಿಮೆ ಹಣಕ್ಕಾಗಿ ಕೊಲೆ
ಕೆಲವು ದಿನಗಳ ಹಿಂದೆಯಷ್ಟೇ ಇದೇ ತರಹ ವಿಜಯನಗರದ ಹೊಸಪೇಟೆ ಹೊರವಲಯದಲ್ಲಿ 5 ಕೋಟಿ ರೂ. ವಿಮಾ ಹಣಕ್ಕಾಗಿ ನಕಲಿ ಪತ್ನಿ ಹಾಗೂ ಅವರ ಸಹಚರರಿಂದ ಕೊಲೆ ನಡೆದಿತ್ತು.
ಆರೋಪಿಗಳು 5.25 ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಯತ್ನಿಸಿ ಪೊಲೀಸರಿಗೆ ತಗಲಾಕಿಕೊಂಡಿದ್ದರು. ಈ ಪ್ರಕರಣದಲ್ಲಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮೃತನ ಹೆಸರಲ್ಲಿ 5.25 ಕೋಟಿ ರೂ. ಇನ್ಶೂರೆನ್ಸ್ ಮಾಡಿಸಿದ್ದರು. ಈ ಹಣವನ್ನು ಪಡೆಯುವ ಆಸೆಯಿಂದಾಗಿ ಮೊದಲು ಕೊಲೆ ಮಾಡಿ, ಬಳಿಕ ಹೊಸಪೇಟೆ ಹೊರವಲಯದ ಜಂಬುನಾಥ ಹಳ್ಳಿಗೆ ಹೋಗುವ ರಸ್ತೆಗೆ ಕರೆತಂದಿದ್ದರು.
ಸೆಕೆಂಡ್ ಹ್ಯಾಂಡ್ ಎಕ್ಸೆಲ್ ಬೈಕ್ ಬಾಡಿಗೆಗೆ ತಂದು ಅದರ ಮೇಲೆ ಕೂರಿಸಿ ಕಾರಿನಿಂದ ಗುದ್ದಿಸಿ ಅಪಘಾತ ಎಂದು ಬಿಂಬಿಸಿದ್ದರು. ಆದರೆ ಆರೋಪಿಗಳ ಕೆಲ ಎಡವಟ್ಟಿನಿಂದ ಅದು ಕೊಲೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.


