ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 1 ಕೋಟಿ ರೂ. ಮೌಲ್ಯದ ಪಾನ್ ಮಸಾಲಾ ಮತ್ತು ತಂಬಾಕು ಪದಾರ್ಥಗಳನ್ನು ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ನಗರದ ಯಶವಂತಪುರ ರೈಲು ನಿಲ್ದಾಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 750ಕ್ಕೂ ಅಧಿಕ ತಂಬಾಕು ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಮಲಾ ಪಸಂದ್, ಪಾನ್ ಮಸಾಲಾ, ಹನ್ಸ್ ಚಾಪ್, ಚೈನಿ ಫಿಲ್ಟರ್ ತಂಬಾಕು ಮತ್ತು ಶಿಖರ್ ಪಾನ್ ಮಸಾಲಾ ಎಂಬ ಪ್ರತಿಷ್ಠಿತ ಬ್ರ್ಯಾಂಡ್ಗಳ ಪಾನ್ ಮಸಾಲಾ ಹಾಗೂ ತಂಬಾಕು ಪದಾರ್ಥಗಳನ್ನು ದೆಹಲಿಯಿಂದ ಬೆಂಗಳೂರಿಗೆ ರೈಲು ಮಾರ್ಗದ ಮೂಲಕ ಸಾಗಿಸಲಾಗುತ್ತಿತ್ತು.
ದಾಖಲೆಗಳಿಲ್ಲದೆ ನಿಲ್ದಾಣದ ಆವರಣದಲ್ಲಿರುವ ಕೆಲ ಸರಕು ವಾಹನಗಳು ಮತ್ತು ನಿಲ್ದಾಣದ ಫ್ಲಾಟ್ ಫಾರ್ಮ್ನಲ್ಲಿರುವ ಚೀಲಗಳಲ್ಲಿ ಸಂಗ್ರಹಿಸಿಡಲಾಗಿದ್ದು, ರೈಲು ಮಾರ್ಗದ ಮೂಲಕ ಬೆಂಗಳೂರಿಗೆ ಬಂದಿತ್ತು ಎಂದು ಜಾರಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
750ಕ್ಕೂ ಅಧಿಕ ಚೀಲಗಳ ಪಾನ್ ಮಸಾಲಾ ಮತ್ತು ತಂಬಾಕು ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕವಾಗಿ ಈ ವಸ್ತುಗಳ ಸಾಗಾಟಗಾರರು ಜಿಎಸ್ಟಿ ನಿಯಮಾವಳಿ ಅನ್ವಯ ಖರೀದಿ ಮಾಡದೆ ಅಕ್ರಮವಾಗಿ ಸಾಗಾಟ ಮಾಡಿರುವುದು ಗೊತ್ತಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ನಷ್ಟವಾಗಿರುವುದು ಕಂಡುಬಂದಿದೆ.
ಸೂಕ್ತ ದಾಖಲೆಗಳಿಲ್ಲದೆ ಹಾಗೂ ತೆರಿಗೆ ಬಿಲ್ಲುಗಳಿಲ್ಲದೆ ಸರಕುಗಳನ್ನು ಸಾಗಿಸುವ ಇಂತಹ ಅನಧಿಕೃತ ಚಟುವಟಿಕೆಗಳ ವಿರುದ್ಧ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿರುತ್ತಾರೆ. ಜಿಎಸ್ಟಿ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಾಣಿಜ್ಯ ತೆರಿಗೆಗಳ ಇಲಾಖೆಯ (ಜಾರಿ ವಿಭಾಗ) ಅಪರ ಆಯುಕ್ತ ಕನಿಷ್ಕ ತಿಳಿಸಿದ್ದಾರೆ.


