ಸೋದರ ಆತ್ಮಹತ್ಯೆಗೆ ಕಾರಣವಾದ ಉದ್ಯಮಿ ಮೇಲಿನ ದ್ವೇಷಕ್ಕೆ ಆಕೆಯ ಮಗಳನ್ನು ಕೊಲೆ ಮಾಡಿ ಸೇಡು ತೀರಿಸಿಕೊಂಡ ಆಘಾತಕಾರಿ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಸೆಪ್ಟೆಂಬರ್ 11ರಂದು ನಾಪತ್ತೆಯಾಗಿದ್ದ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ನಡೆದ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಭಾಗ್ಯಶ್ರೀ ಸುಲಹಳ್ಳಿ (21) ಕೊಲೆಯಾಗಿದ್ದು, ಕಾರ್ಖಾನೆಯ ನಿರ್ಜನ ಪ್ರದೇಶದಲ್ಲಿ ಆಕೆಯ ಶವ ಕೊಲೆಯಾದ ರೀತಿ ಪತ್ತೆಯಾಗಿತ್ತು. ಶವ ಪತ್ತೆಯಾದಾಗ ಅದು ಏಳು ದಿನಗಳ ಕಾಲ ಕೊಳೆತ ಸ್ಥಿತಿಯಲ್ಲಿ ಇತ್ತು.
ಕೊಲೆ ಮಾಡಿದ ಮಂಜುನಾಥ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಮಂಜುನಾಥ್ ಭಾಗ್ಯಶ್ರೀ ಕೊಲೆಗೆ ಸೀಮೆಂಟ್ ಉದ್ಯಮಿ ಚನ್ನವೀರಪ್ಪ ಕಾರಣ ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.
ಕೆಲವು ತಿಂಗಳ ಹಿಂದೆ ಮಂಜುನಾಥ ಸೋದರ ವಿನೋದ್ ಕಂಪನಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸೋದನ ಸಾವಿಗೆ ಮಾಲೀಕ ಚನ್ನವೀರಪ್ಪ ಕಾರಣ ಎಂದು ಮಂಜುನಾಥ್ ಅಸಮಾಧಾನಗೊಂಡಿದ್ದ.
ದೂರು ಸಲ್ಲಿಸಿದ್ದ ಕುಟುಂಬ
ಕೆಲವು ವಾರಗಳ ಹಿಂದೆ ಮಳಖೇಡದ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವಿನೋದ ಎಂಬ ಯುವಕ, ನೌಕರಿ ತಪ್ಪಿದ ಕಾರಣದಿಂದ ಮನನೊಂದು ನೇಣಿಗೆ ಶರಣಾಗಿದ್ದ. ಈ ಘಟನೆಯಲ್ಲಿ, ಕಾರ್ಮಿಕ ಸಂಘದ ಅಧ್ಯಕ್ಷ ಚನ್ನವೀರಪ್ಪ ಸುಲಹಳ್ಳಿ ಕಾರಣ ಎಂದು ವಿನೋದನ ಕುಟುಂಬ ಆರೋಪ ಮಾಡಿತ್ತು. “ನಮ್ಮ ಮಗನ ಆತ್ಮಹತ್ಯೆಗೆ ಚನ್ನವೀರಪ್ಪನೇ ಹೊಣೆ ಎಂದು ಕುಟುಂಬದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಮಳಖೇಡ ಪೊಲೀಸ್ ಠಾಣೆಗೆ ದೂರು ಸಲ್ಲಿಸಿತ್ತು. ಅಲ್ಲದೇ ಗ್ರಾಮದಲ್ಲಿ ಪಂಚಾಯಿತಿಯೂ ನಡೆದಿತ್ತು. ಈ ಸಮಯದಲ್ಲಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಕುಟುಂಬ ಎಚ್ಚರಿಕೆ ನೀಡಿತ್ತು. ತಂದೆಯ ಮೇಲೆ ಸೇಡು ತೀರಿಸಿಕೊಳ್ಳಲು ಮಂಜುನಾಥ್ ಭಾಗ್ಯಶ್ರೀಯನ್ನು ಕೊಲೆ ಮಾಡಿದ್ದ ಎಂದು ಕಲಬುರಗಿ ಪೊಲೀಸರು ತಿಳಿಸಿದ್ದಾರೆ.
ಜೀವಕ್ಕೆ ಕುತ್ತಾದ ಸ್ನೇಹಿತ
ಆರಂಭದಲ್ಲಿ ಭಾಗ್ಯಶ್ರೀಯನ್ನು ಕತ್ತು ಬಿಗಿದು ಉಸಿರುಗಟ್ಟಿಸಿ ಕೊಂದರೆಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಪ್ರಾಥಮಿಕ ತನಿಖೆಯಲ್ಲಿ ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಹತ್ಯೆ ನಡೆಸಲಾಗಿದೆ ಎಂಬುದು ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ಮಳಖೇಡ ಪೊಲೀಸರು ವಿನೋದನ ಸಹೋದರ ಮಂಜುನಾಥ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಮಂಜುನಾಥನ ತಂದೆ, ದೊಡ್ಡಪ್ಪ, ಮತ್ತೊಬ್ಬ ಸಹೋದರ ಕೂಡ ಕೊಲೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರಸ್ತುತ ಮಂಜುನಾಥನನ್ನು ವಿಚಾರಣೆ ನಡೆಸಲಾಗುತ್ತಿದ್ದು, ಉಳಿದವರ ಮೇಲೂ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಭಾಗ್ಯಶ್ರೀ ಹಾಗೂ ಮಂಜುನಾಥರ ನಡುವೆ ಸ್ನೇಹ ಇದ್ದದ್ದರಿಂದ ಆಕೆ ಸಲುಗೆಯಿಂದ ಮಾತನಾಡುತ್ತಿದ್ದಳು. ಆದರೆ ಅದೇ ಸ್ನೇಹವೇ ಜೀವಕ್ಕೆ ಸಂಚಕಾರ ತಂದಿದೆ. ಕೊನೆಗೆ ಇದುವೇ ಕ್ರೂರ ಹತ್ಯೆಗೆ ಕಾರಣವಾಯಿತೇ ಎಂಬುದರ ಬಗ್ಗೆ ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಹಳೆಯ ವೈಷಮ್ಯ, ಕಾರ್ಮಿಕ ಸಂಘದ ಒಳಗಲಾಟೆ, ಹಾಗೂ ವೈಯಕ್ತಿಕ ದ್ವೇಷ ಈ ಎಲ್ಲ ಹಂತಗಳನ್ನೂ ಪರಿಶೀಲಿಸುತ್ತಿದ್ದಾರೆ.


