ಶಿವಮೊಗ್ಗ : ಮಾಂಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಇವರು ಅಂತರಾಜ್ಯ ಸರಗಳ್ಳರು, ಒಂಟಿ ಮನೆ ದರೋಡೆಕೋರರು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಕಳೆದ ನ.18ರಂದು ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ 60 ಅಡಿ ರಸ್ತೆಯ 16 ಕ್ರಾಸ್ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುವಾಗ ಅಪರಿಚಿತರು ಹಿಂಬದಿಯಿಂದ ಬಂದು ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರ ಕಸಿದುಕೊಂಡು ಬೈಕ್ ಹತ್ತಿಕೊಂಡು ಹೋಗಿದ್ದರು. ಈ ಪ್ರಕರಣ ಬೆನ್ನು ಹತ್ತಿದ ಶಿವಮೊಗ್ಗ ವಿನೋಬನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಯಮತ್ತ್ತೂರಿನ ಅರಸು ಅಲಿಯಾಸ್ ವಲ್ಲರಸು ಆರ್ (25), ಬೆಂಗಳೂರಿನ ಪಾದರಾಯಪುರ ಗುಡ್ಡದಹಳ್ಳಿಯ ಕಾಲು ಅಲಿಯಾಸ್ ಇಬ್ರಾಹಿಂ ಪಾಶಾ ಅಲಿಯಾಸ್ ಇಬ್ರಾಹಿಂ ಬಾಶಾ, ಸೇಲಮ್ನ ಕೇಶವನ್ (43), ತಮಿಳುನಾಡಿನ ಹೊಸೂರಿನ ಚಾಲಕ, ಹಾಲಿ ಅತ್ತಿಬೆಲೆಯ ವಾಸಿ ಸತೀಶ್ಕುಮಾರ್ (40) ಬಂಧಿಸಲಾಗಿದೆ. ವಲ್ಲರಸು ಮತ್ತು ಇಬ್ರಾಹಿಂ ಪಾಶಾ ಆರೋಪಿತರ ಕಡೆಯಿಂದ 40 ಗ್ರಾಂ ತೂಕದ 4 ಲಕ್ಷ 80 ಸಾವಿರ ಮೌಲ್ಯದ ಬಂಗಾರದ ಗಟ್ಟಿ, ಕೃತ್ಯಕ್ಕೆ ಉಪಯೋಗಿಸಿದ ಟಿಎನ್ 90 ಎಲ್ 6618 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಮೂರನೆಯ ಆರೋಪಿ ಕೇಶವನ್ ಕಡೆಯಿಂದ 70 ಗ್ರಾಂ ತೂಕದ 8 ಲಕ್ಷ 50 ಸಾವಿರ ಮಾಂಗಲ್ಯ ಸರ ಹಾಗೂ 60 ಗ್ರಾಂ ತೂಕದ 10 ಲಕ್ಷ 20 ಸಾವಿರ ಮೌಲ್ಯದ ಬಂಗಾರದ ಆಭರಣಗಳು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಅಂದಾಜು ಮೌಲ್ಯ 25 ಲಕ್ಷದ ಚಿನ್ನಾಭಣರ ವಶಪಡಿಸಿಕೊಳ್ಳಲಾಗಿದೆ. ಡಿ.ವೈ.ಎಸ್.ಪಿ ಸಂಜೀವಕುಮಾರ್, ಸಿಪಿಐ ಸಂತೋಷ್ಕುಮಾರ್, ಎಸ್ ಐ ತಿರುಮಲೇಶ್ ಮತ್ತು ಸಿಬ್ಬಂದಿಗಳು ಇದರಲ್ಲಿ ಶ್ರಮ ಹಾಕಿದ್ದು, ಈ ಪತ್ತೆ ಕಾರ್ಯವನ್ನು ಎಸ್ಪಿ ನಿಖಿಲ್ ಶ್ಲಾಘಿಸಿದ್ದಾರೆ.


