ಅಡಿಕೆ ವ್ಯಾಪಾರಿಯಿಂದ ಒಂದು ಕೋಟಿ ರೂ. ನಗದು ದರೋಡೆ ಮಾಡಿದ್ದ 8 ಮಂದಿಯನ್ನು ದರೋಡೆಕೋರರನ್ನು ಬೆಂಗಳೂರು ಪೊಲೀಸರು ಕೇವಲ ಅರ್ಧ ಗಂಟೆಯಲ್ಲೇ ಬಂಧಿಸಿ, ಹಣ ವಾಪಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರಸೀಕೆರೆ ಮೂಲದ ಅಡಿಕೆ ವ್ಯಾಪಾರಿ ಹಾಗೂ ಉದ್ಯಮಿ ಮೋಟಾರಾಮ್ ಎಂಬುವರಿಂದ 1.1 ಕೋಟಿ ರೂ. ನಗದು ಹಣ ದೋಚಿದ ನರಸಿಂಹ, ಜೀವನ್, ಕಿಶೋರ್, ವೆಂಕಟರಾಜು, ಚಂದ್ರ ಅಲಿಯಾಸ್ ಚಂದಿರನ್, ಕುಮಾರ್, ರವಿಕಿರಣ್, ನಮನ್ ಎಂಬ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಹುಳಿಮಾವು ಪೊಲೀಸರು ದರೋಡೆ ನಡೆದ ಕೇವಲ ಅರ್ಧ ಗಂಟೆಯಲ್ಲಿ ಖೆಡ್ಡಾಕ್ಕೆ ಕೆಡವಿದ್ದಾರೆ.
ಅಡಿಕೆ ವ್ಯಾಪಾರಿ ಉದ್ಯಮಿ ಮೋಹನ್ ಬೆಂಗಳೂರು ನಿವಾಸಿ ಮೋಟರಾಮ್ ಎಂಬುವರ ಬಳಿ ಹಣ ತರಲು ಸಂಬಂಧಿ ಹೇಮಂತ್ ಅವರಿಗೆ ಹೇಳಿದ್ದರು.
ಮೋಹನ್ ಮಾಹಿತಿಯಂತೆ ಹುಳಿಮಾವು ಅಕ್ಷಯ ನಗರಕ್ಕೆ ಬಂದಿದ್ದ ಹೇಮಂತ್, ಮೊಟರಾಮ್ಗೆ ಕರೆ ಮಾಡಿದ್ದಾರೆ. ಅಣ್ಣ ಹೇಳಿದ್ದಾರೆ, ಹಣ ಕೊಡಬೇಕಂತೆ ಎಂದಿದ್ದಾರೆ. ಬಳಿಕ ಶನಿವಾರ ಸಂಜೆ ಅಕ್ಷಯ ನಗರದಲ್ಲಿ ಹಣ ನೀಡಲು ಮೋಟರಾಮ್ ದಂಪತಿ ಬಂದಿದ್ದಾರೆ. ಈ ವೇಳೆ ಕಾರಿನ ಡಿಕ್ಕಿಯಲ್ಲಿ ಎರಡು ಚೀಲ ಹಣ ತುಂಬಿಕೊಂಡು ಬಂದಿದ್ದರು.
ಹೇಮಂತ್ ಹಣ ಪಡೆಯಬೇಕು ಎನ್ನುಷ್ಟರಲ್ಲಿ ಬೈಕ್ನಲ್ಲಿ ಬಂದ ಇಬ್ಬರು ಆಸಾಮಿಗಳು ಬೆದರಿಸಿದ್ದಾರೆ. ನಂತರ ಅಲ್ಲಿಂದ ಕಾರಿನಲ್ಲಿ ಸ್ಬಲ್ಪ ಮುಂದಕ್ಕೆ ಹೋದಾಗ ಇನ್ನೂ ನಾಲ್ಕೈದು ಬೈಕ್ಗಳಲ್ಲಿ ಬಂದ ಸುಮಾರು 8 ಮಂದಿ ದರೋಡೆಕೋರರ ಗ್ಯಾಂಗ್ ಕಾರನ್ನು ಸುತ್ತುವರಿದು ಮೋಟರಾಮ್ ದಂಪತಿ ಹಾಗೂ ಹೇಮಂತ್ಗೆ ಜೀವ ಬೆದರಿಕೆ ಹಾಕಿ ಚೀಲದಲ್ಲಿದ್ದ ಒಂದು ಕೋಟಿಯ ಒಂದು ಲಕ್ಷ ಹಣ ಎಗರಿಸಿ ಎಸ್ಕೇಪ್ ಆಗಿದ್ದಾರೆ.
ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ
ದರೋಡೆ ಗ್ಯಾಂಗ್ ಹಣ ದೋಚುತ್ತಿದ್ದಂತೆಯೇ, ಹೇಮಂತ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಸಂದರ್ಭದಲ್ಲೇ ಸ್ವಲ್ಪ ದೂರದಲ್ಲೇ ಇದ್ದ ಹುಳಿಮಾವು ಪೊಲೀಸರು ಕೂಡಲೇ ಎಚ್ಚೆತ್ತುಕೊಂಡು ಇತರೆ ಪೊಲೀಸ್ ಸಿಬ್ಬಂದಿಯನ್ನೂ ಅಲರ್ಟ್ ಮಾಡಿದ್ದಾರೆ. ಪೊಲೀಸರು ಎಲ್ಲೆಡೆಯಿಂದ ಆರೋಪಿಗಳ ಬೆನ್ನತ್ತಿದ್ದಾರೆ.
ಡಕಾಯಿತಿ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ಯಾಂಗ್ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿರುವ ಪೊಲೀಸರು ಆರೋಪಿಗಳ ಪೂರ್ವಾಪರ, ಅಪರಾಧ ಕೃತ್ಯಗಳ ಹಿನ್ನೆಲೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್ಗಳು ಹಾಗೂ ಹಣ ಜಪ್ತಿಯಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.


