ಬೆಂಗಳೂರು: ಕರೆ ಮಾಡಲು ನೀಡಿದ್ದ ಮೊಬೈಲ್ ಫೋನ್ ವಾಪಸ್ ಕೇಳಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದು, ಈ ವೇಳೆ ಪ್ರಶ್ನಿಸಿದ ಸೆಕ್ಯೂರೆಟಿ ಗಾರ್ಡ್ ಮೇಲೆ ಹಲ್ಲೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜಯನಗರದ ಪಟಾಲಮ್ಮ ದೇವಸ್ಥಾನದ ರಸ್ತೆಯಲ್ಲಿ ಜುಲೈ 3ರಂದು ಈ ಘಟನೆ ಜರುಗಿದೆ. ಕರೆ ಮಾಡಲು ಮೊಬೈಲ್ ಕೊಟ್ಟಿದ್ದ ಸೆಕ್ಯುರಿಟಿ ಗಾರ್ಡ್ ಪರ್ವಿಂದರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಸ್ಗರ್ ಎಂಬಾತನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಟ್ಟಾಕಮ್ಮ ದೇವಸ್ಥಾನದ ರಸ್ತೆಯ ಪಕ್ಕದಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡದ ಇಂಜಿನಿಯರಿಂಗ್ ಕೆಲಸ ಮಾಡುತ್ತಿದ್ದ ಮಿಥುನ್ ಕುಮಾರ್ ಜುಲೈ 3ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ರಸ್ತೆಯಲ್ಲಿ ಒನ್ ವೇನಲ್ಲಿ ಬಂದಿದ್ದ ಅಸ್ಗರ್, ‘ನನ್ನ ಮೊಬೈಲ್ ಹಾಳಾಗಿದೆ, ಒಂದು ಕರೆ ಮಾಡಬೇಕು’ ಎಂದು ಮಿಥುನ್ ಕುಮಾರ್ ಬಳಿ ಫೋನ್ ಕೇಳಿದ್ದ. ಈ ವೇಳೆ ಮಿಥುನ್ ಕುಮಾರ್ ತನ್ನ ಮೊಬೈಲ್ ಫೋನ್ ನೀಡಿದ್ದರು.
ಎರಡು ಕರೆಗಳನ್ನು ಮಾಡಿದ್ದ ಆರೋಪಿ ಬಳಿ ಮಿಥುನ್ ಕುಮಾರ್ ಫೋನ್ ವಾಪಸ್ ಕೇಳಿದ್ದರು. ಮೊಬೈಲ್ ಹಿಂದಿರುಗಿಸಲು ನಿರಾಕರಿಸಿದ್ದ ಆರೋಪಿ, ತನ್ನ ಸ್ಕೂಟರ್ನ ಮ್ಯಾಟ್ ಅಡಿಯಿಂದ ಮಾರಕಾಸ್ತ್ರ ತೆಗೆದು ಮಿಥುನ್ ಕುಮಾರ್ ಮೇಲೆ ಬೀಸಿದ್ದ. ಈ ವೇಳೆ ಗಲಾಟೆ ಬಿಡಿಸಲು ಬಂದ ಸೆಕ್ಯೂರಿಟಿ ಗಾರ್ಡ್ ಪರ್ವಿಂದರ್ ಮೇಲೆಯೂ ಮಾರಕಾಸ್ತ್ರ ಬೀಸಿ ಸ್ಕೂಟರ್ ಹಿಂದಿರುಗಿಸಿಕೊಂಡು ಪರಾರಿಯಾಗಿದ್ದ.
ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಠಾಣೆ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ.


