ವಾಕಿಂಗ್ ಮುಗಿಸಿ ಮನೆಗೆ ಹೋಗುತ್ತಿದ್ದ ನಿವೃತ್ತ ಎಸಿಪಿ ಮೇಲೆ ಹಲ್ಲೆ ಮಾಡಿ ಚಿನ್ನದ ಸರ, ಬ್ರೇಸ್ಲೆಟ್ ಕಸಿದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಡಿ.ಜೆ.ಹಳ್ಳಿಯ ನಿವಾಸಿಗಳಾದ ಸೈಯ್ಯದ್ ಮೊಹ್ಸಿನ್ (30), ಮೊಹಮ್ಮದ್ ಸಲ್ಮಾನ್ (20) ಹಾಗೂ ಸೈಯ್ಯದ್ ಇರ್ಫಾನ್ (23) ಅವರನ್ನು ಬಂಧಿಸಲಾಗಿದೆ.
ಕೆಲ ದಿನಗಳ ಹಿಂದೆ ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಬಳಿ ಹಾಡಹಗಲೇ ನಿವೃತ್ತ ಎಸಿಪಿ ಹೆಚ್.ಸುಬ್ಬಣ್ಣ ಅವರ ಮೇಲೆ ಚಾಕುವಿನಿಂದ ಹಲ್ಲೆಗೈದಿದ್ದ ಆರೋಪಿಗಳು 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದರು.
ಅಪ್ಪು ಸಿನಿಮಾ ಮಾದರಿಯಲ್ಲಿ ಹಲ್ಲೆ
ಅಪ್ಪು ಸಿನಿಮಾದಲ್ಲಿ ಮಾಸ್ಕ್ ಧರಿಸಿ ಪೊಲೀಸ್ ಇನ್ ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸುವ ದೃಶ್ಯದ ಮಾದರಿಯಲ್ಲಿ ಆರೋಪಿಗಳು ಹಲ್ಲೆ ನಡೆಸಿದ್ದರು.
ಬೆಳಿಗ್ಗೆ ವಾಕಿಂಗ್ ಮುಗಿಸಿ 9:30ರ ಸುಮಾರಿಗೆ ಮನೆಗೆ ಮರಳುತ್ತಿದ್ದ ಸುಬ್ಬಣ್ಣ ಅವರನ್ನು ಮಾಸ್ಕ್ ಧರಿಸಿ ಬಂದಿದ್ದ ಇಬ್ಬರು ಆರೋಪಿಗಳು ಅಡ್ಡಗಟ್ಟಿದ್ದರು. ಬಳಿಕ ಚಾಕು ತೋರಿಸಿ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದುಕೊಂಡಿದ್ದರು.
ಕಳ್ಳರ ದಾಳಿಯನ್ನು ಪ್ರತಿರೋಧಿಸಲು ಮುಂದಾದ ಸುಬ್ವಣ್ಣ ಅವರ ಕೈಗೆ ಚಾಕುವಿನಿಂದ ಹಲ್ಲೆ ಮಾಡಿ, ಕೈಯಲ್ಲಿದ್ದ ಚಿನ್ನದ ಬ್ರೇಸ್ಲೆಟ್ ಸಹ ಕಿತ್ತುಕೊಂಡು ಕ್ಷಣಮಾತ್ರದಲ್ಲಿ ಕಾಲ್ಕಿತ್ತಿದ್ದರು.
ಸುಬ್ಬಣ್ಣ ನಂತರ ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಅದರ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


