ವಿಚ್ಚೇದನ ಪಡೆದ ಪತ್ನಿಗೆ ಜೀವನಾಂಶ ನೀಡಲು ನಿರಾಕರಿಸಿದ ಹೆತ್ತ ತಂದೆ-ತಾಯಿಯನ್ನು ಕೊಂದ ಮಗ ಗರಗಸದಿಂದ ತುಂಡು ತುಂಡಾಗಿ ಕತ್ತರಿಸಿದ ದೇಹವನ್ನು ನದಿಗೆ ಬಿಸಾಕಿ ವಿಕೃತಿ ಮೆರೆದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಜೌನ್ಪುರದ ನಿವಾಸಿ, ಇಂಜಿನಿಯರ್ ಅಂಬೇಶ್ ಎಂಬಾತ ತಂದೆ-ತಾಯಿ ಶ್ಯಾಮ್ ಬಹದ್ದೂರ್ (62) ಮತ್ತು ಬಬಿತಾ (60) ಅವರನ್ನು ಕೊಲೆ ಮಾಡಿ, ಅವರ ದೇಹಗಳನ್ನು ಗರಗಸದಿಂದ ಕತ್ತರಿಸಿ ನದಿಗೆ ಎಸೆದಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಗ ಪ್ರೀತಿಸಿ ಮದುವೆ ಆದ ಮುಸ್ಲಿಂ ಮಹಿಳೆಯನ್ನು ಮನೆಗೆ ಸೇರಿಸಿಕೊಳ್ಳಲು ಹೆತ್ತವರು ನಿರಾಕರಿಸಿದ್ದಾರೆ. ಕುಟುಂಬದವರ ವಿರೋಧದ ನಡುವೆಯೂ ಪತ್ನಿಯೊಂದಿಗೆ ಜೀವನ ನಡೆಸುತ್ತಿದ್ದ ಅಂಬೇಶ್ ಗೆ ಎರಡು ಮಕ್ಕಳು ಇದ್ದವು.
ಅಂಬೇಶ್ ಮತ್ತು ಆತನ ಪತ್ನಿ ಅಂತಿಮವಾಗಿ ಬೇರೆಯಾಗಲು ನಿರ್ಧರಿಸಿದರು. ನ್ಯಾಯಾಲಯದ ಆದೇಶದಂತೆ 5 ಲಕ್ಷ ರೂ. ಜೀವನಾಂಶ ಪಾವತಿಸಲುಹಣದ ಅಗತ್ಯವಿತ್ತು. ತನ್ನ ತಂದೆ ಬಳಿ ಹಣ ಕೇಳಿದಾಗ ಅವರು ನಿರಾಕರಿಸಿದ್ದರು. ಇದರಿಂದ ಕೋಪಗೊಂಡು ಹೆತ್ತವರನ್ನೇ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿ.13 ರಂದು ಅಂಬೇಶ್ ಸಹೋದರಿ ತಂದೆ-ತಾಯಿ ಮತ್ತು ಸಹೋದರ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಪ್ಪ-ಅಮ್ಮ ನನ್ನೊಟ್ಟಿಗೆ ಜಗಳವಾಡಿಕೊಂಡು ಮನೆಬಿಟ್ಟು ಹೋಗಿದ್ದಾರೆ. ಅವರನ್ನು ಹುಡುಕುತ್ತಿದ್ದೇನೆ ಎಂದು ಅಂಬೇಶ್ ಸಹೋದರಿಗೆ ಕರೆ ಮಾಡಿ ತಿಳಿಸಿದ್ದ. ಮತ್ತೆ ಫೋನ್ ಮಾಡಿದಾಗ ಸ್ವಿಚ್ಡ್ ಆಫ್ ಬಂತು ಎಂದು ಸಹೋದರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅನುಮಾನಗೊಂಡು ಪೊಲೀಸರು ಅಂಬೇಶ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ವಿಚಾರ ಬಹಿರಂಗವಾಗಿದೆ.
ನಿವೃತ್ತ ರೈಲ್ವೆ ಉದ್ಯೋಗಿ ಶ್ಯಾಮ್ ಬಹದ್ದೂರ್ ಮತ್ತು ಅವರ ಪತ್ನಿ ಬಬಿತಾಗೆ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದರು. ಮಗ ಅಂಬೇಶ್ ಐದು ವರ್ಷಗಳ ಹಿಂದೆ ಮುಸ್ಲಿಂ ಮಹಿಳೆಯನ್ನು ವಿವಾಹವಾಗಿದ್ದ. ಪೋಷಕರು ಈ ವಿವಾಹವನ್ನು ಒಪ್ಪಲಿಲ್ಲ. ಮುಸ್ಲಿಂ ಸೊಸೆಯನ್ನು ತಮ್ಮ ಮನೆಗೆ ಬಿಡುವುದಿಲ್ಲ ಎಂದು ಹೇಳಿದ್ದರು.


