27 ತಿಂಗಳಿಂದ ಸಂಬಳ ನೀಡದೇ ಅಧಿಕಾರಿಗಳು ಸತಾಯಿಸಿದ್ದರಿಂದ ಬೇಸತ್ತ ಗ್ರಾಮ ಪಂಚಾಯತ್ ವಾಟರ್ಮ್ಯಾನ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರದ ಹೊಂಗನೂರು ಗ್ರಾಮದ ವಾಟರ್ಮ್ಯಾನ್ ಚಿಕ್ಕೂಸನಾಯಕ (60) ಗ್ರಾಮ ಪಂಚಾಯತ್ ಕಚೇರಿ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗ್ರಾಪಂ ಅಧ್ಯಕ್ಷೆಯ ಪತಿ ಮೋಹನ್ಕುಮಾರ್, ಪಿಡಿಒ ರಾಮೇಗೌಡ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ನಲ್ಲಿ ಉಲ್ಲೇಖಿಸಿ ಆತ್ಮಹತ್ಯೆಗೆ ಶರಣಾಗುವ ಮುನ್ನ ಚಿಕ್ಕೂಸನಾಯಕ ಡೆತ್ ನೋಟ್ ಬರೆದು ಗೋಡೆಗೆ ಅಂಟಿಸಿದ್ದಾರೆ.
ನನಗೆ ರಜೆ ಬೇಕೆಂದರೂ ಕೊಡದೇ ಕಿರುಕುಳ ಕೊಡುತ್ತಿದ್ದರು. ರಜೆ ಕೇಳಿದರೆ ನೀನು ಕೆಲಸಕ್ಕೆ ವಾಪಸ್ ಬರುವಷ್ಟರಲ್ಲಿ ಬೇರೊಬ್ಬ ಕೆಲಸಗಾರನನ್ನು ನೋಡಿಕೊಳ್ಳುತ್ತೇವೆ ಎಂದು ಬೆದರಿಸುತ್ತಿದ್ದರು. ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ವರೆಗೂ ಕೆಲಸ ಮಾಡಿಸುತ್ತಿದ್ದರು. ಎಷ್ಟು ಬಾರಿ ಮನವಿ ಮಾಡಿದರೂ ಸಂಬಳ ಕೊಡದೇ ಕಿರುಕುಳ ನೀಡುತ್ತಿದ್ದರು ಎಂದು ಡೆತ್ ನೋಟ್ ನಲ್ಲಿ ಆರೋಪಿಸಲಾಗಿದೆ.
ಬಿಲ್ ಕಲೆಕ್ಷನ್ ಮಾಡಿಕೊಂಡು ಬಂದರಷ್ಟೇ ಸಂಬಳ ಕೊಡುವುದಾಗಿ ಪಿಡಿಒ ರಾಮೇಗೌಡ ಪೀಡಿಸಿಸುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ.
ಘಟನೆ ನಂತರ ಜಿಲ್ಲಾ ಪಂಚಾಯಿಸಿ ಸಿಇಒ ರಾಮೇಗೌಡ ಅವರನ್ನು ಅಮಾನತು ಮಾಡಲಾಗಿದೆ.
ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪಿಡಿಒ ಹಾಗೂ ಗ್ರಾ.ಪಂ.ಅಧ್ಯಕ್ಷೆ ಹಾಗೂ ಆಕೆಯ ಪತಿ ವಿರುದ್ಧ ಎಸ್ ಸಿ/ಎಸ್ ಟಿ ನಿಂದನೆ ಪ್ರಕರಣ ದಾಖಲಾಗಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಕುಟುಂಬಸ್ಥರ ಆಗ್ರಹಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಕಲಬುರಗಿಯಲ್ಲಿ ವೇತನ ಸಿಗದೇ ಲೈಬ್ರೇರಿಯನ್ ಆತ್ಮಹತ್ಯೆ ಮಾಡಿಕೊಂಡಿದ್ದರು.


