ಕನ್ನಡ, ಕನ್ನಡ ಅಂತ ಹೇಳಿದ್ದಕ್ಕೆ ಪೆಹಲ್ಗಾಮ್ ನಲ್ಲಿ ದಾಳಿ ಆಗಿದ್ದು ಎಂದು ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
ಸತತವಾಗಿ ಹಿಂದಿ ಹಾಡುಗಳನ್ನು ಸೋನು ನಿಗಮ್ ಹಾಡುತ್ತಿದ್ದಾಗ ಅಭಿಮಾನಿಯೊಬ್ಬ ಕನ್ನಡ, ಕನ್ನಡ ಎಂದು ಕೂಗಿ ಕರೆದು ಕನ್ನಡ ಹಾಡು ಹಾಡುವಂತೆ ಕೇಳಿಕೊಂಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಸೋನು ನಿಗ್, ‘ಹೀಗೆ ‘ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಆಯ್ತು’ ಎಂದಿದ್ದಾರೆ.
ಸೋನು ನಿಗಮ್ ಪ್ರತಿಕ್ರಿಯೆ ಪೆಹಲ್ಗಾಮ್ ದಾಳಿಗೆ ಕನ್ನಡಿಗರೇ ಕಾರಣವೇನೋ ಎಂಬಂತೆ ಮಾತನಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ರೀತಿಯ ಹೇಳಿಕೆ ನೀಡಿದ್ದಕ್ಕೆ ಸೋನು ನಿಗಮ್ ಕನ್ನಡಿಗರ ಮುಂದೆ ಕೈ ಜೋಡಿಸಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡದಲ್ಲಿ ಸಾಕಷ್ಟು ಜನಪ್ರಿಯ ಹಾಡುಗಳನ್ನು ಹಾಡಿರುವ ಸೋನು ನಿಗಮ್ ಕನ್ನಡಿಗರ ಅಭಿಮಾನ, ಪ್ರಶಂಸೆಗೆ ಹಲವು ಕಡೆ ಕರ್ನಾಟಕದಲ್ಲಿ ನಾನು ಹುಟ್ಟದೇ ಇರಬಹುದು. ಆದರೆ ನನ್ನ ಎರಡನೇ ತವರು ಮನೆ ಇದ್ದಂತೆ ಎಂದು ಹಲವು ಕಡೆ ಹೇಳಿಕೊಂಡಿದ್ದರು. ಆದರೆ ಅವರ ಈ ವರ್ತನೆ ನಿರೀಕ್ಷಿಸದ ಕನ್ನಡಿಗರು ಆಘಾತ ವ್ಯಕ್ತಪಡಿಸಿದ್ದಾರೆ.
ಖ್ಯಾತ ಚಿತ್ರಕತೆಗಾರ ಹಾಗೂ ಸಂಭಾಷಣೆಕಾರ ಮಾಸ್ತಿ ಉಪ್ಪಾರಹಳ್ಳಿ ಅವರು ಸೋನು ನಿಗಂ ಹೇಳಿಕೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದು, ‘ಇವತ್ತು ವೇದಿಕೆಯ ಮೇಲಿದ್ದ ಈತನನ್ನು ಕನ್ನಡ ಹಾಡು ಹಾಡೆಂದು ಕೇಳಿದಾಗ ‘ ಪೆಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ್ದು ಇದೇ ಕಾರಣಕ್ಕೆ’ ಎಂಬ ಬಾಲಿಶ ಹೇಳಿಕೆ ನೀಡಿದ್ದಾನೆ. ವರುಷಗಳಿಂದ ಕನ್ನಡಿಗರು ಯಾವ ಕಂಠವನ್ನು ಕೊಂಡಾಡುತ್ತಿದ್ದರೋ ಇಂದು ಅದೇ ಕಂಠ ತುಚ್ಚವಾಗಿ ಅಪಮಾನಿಸಿದೆ. ಇಲ್ಲಿನ ಜನರು ತೋರೋ ಪ್ರೀತಿ, ನೀಡೋ ಗೌರವ ಕಂಡು ವಿಶ್ವವಿಖ್ಯಾತ ಗಾಯಕ ಮೇರುಪ್ರತಿಭೆ ಶ್ರೀ ಎಸ್ ಪಿ ಬಾಲ ಸುಬ್ರಮಣ್ಯಮ್ ರವರು ‘ ನನಗೆ ಮುಂದಿನ ಜನುಮ ಅಂತ ಇದ್ದರೆ ಅದು ಕನ್ನಡ ನೆಲದಲ್ಲಿಯೇ ಇರಲಿ ನಾನು ಕನ್ನಡಿಗನಾಗಿಯೇ ಹುಟ್ಟಬೇಕು ‘ ಎಂದು ನುಡಿದಿದ್ದರು. ಇದು ಈ ನೆಲದ ಶ್ರೇಷ್ಠತೆ ಮತ್ತು ಮಹಾನುಭಾವ ಎಸ್ ಪಿ ಬಾಲ ಸುಬ್ರಮಣ್ಯಮ್ ರವರ ಜೇಷ್ಠತೆ. ಇದೆಲ್ಲಾ ಈ ಬಾಡಿಗೆ ಗಾಯಕ ಸೋನು ನಿಗಮ್ಮನಿಗೆ ಹೇಗೆ ತಾನೇ ತಿಳಿಯಬೇಕು. ಧಿಕ್ಕಾರವಿರಲಿ ಈ ಅಪ್ರಭುದ್ದನ ಅರಿವಿಗೆ’ ಎಂದು ಬರೆದುಕೊಂಡಿದ್ದಾರೆ


