ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ನಲ್ಲಿ ತಮ್ಮ ಹೆಸರಿನಲ್ಲಿ ನಕಲಿ ಖಾತೆ ತೆರೆದು, ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿದೆ ಎಂದು ಸ್ಯಾಂಡಲ್ ವುಡ್ ನಿರ್ದೇಶಕ ಎಸ್.ನಾರಾಯಣ್ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ನಗರದ ಕಮೀಷನರ್ ಕಚೇರಿಯಲ್ಲಿ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರನ್ನು ಬುಧವಾರ ಭೇಟಿ ಮಾಡಿ ದೂರು ನೀಡಿದ ಬಳಿಕ ಮಾತನಾಡಿದ ಎಸ್.ನಾರಾಯಣ್, ನಟರಾದ ಶಿವ ರಾಜ್ಕುಮಾರ್, ಪುನೀತ್, ಸುದೀಪ್ ಸೇರಿದಂತೆ ಹಲವು ನಟರನ್ನು ಗುರಿಯಾಗಿಸಿ, ನಾನು ಪೋಸ್ಟ್ ಮಾಡಿರುವಂತೆ ಅವಹೇಳಕಾರಿಯಾಗಿ ಅಪರಿಚಿತ ಕಿಡಿಗೇಡಿಗಳು ಪೋಸ್ಟ್ ಮಾಡಿದ್ದು,ಅವರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇನೆ ಎಂದು ಹೇಳಿದರು.
ನನ್ನ ಹೆಸರಿನಲ್ಲಿ ಫೇಸ್ ಬುಕ್ನಲ್ಲಿ ಖಾತೆಯಿಲ್ಲ. ಆದರೂ ಕಿಡಿಗೇಡಿಗಳು ಫೇಸ್ ಬುಕ್ನಲ್ಲಿ ನಕಲಿ ಖಾತೆ ತೆರೆದು ನಟರಿಗೆ ತೇಜೋವಧೆಯಾಗುವ ರೀತಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ.
ಕಳೆದ ಆರೇಳು ತಿಂಗಳಿಂದ ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದಾರೆ. ನಾಲ್ಕು ದಿನಗಳ ಹಿಂದೆ ಈ ವಿಷಯ ನನ್ನ ಗಮನಕ್ಕೆ ಬಂತು. ಅಪರಿಚಿತ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದೇನೆ” ಎಂದು ಅವರು ಹೇಳಿದರು.


