ಬೆಳಗಾವಿ: ವಿರೋಧ ಪಕ್ಷದವರು ಅಸತ್ಯವನ್ನು ಹೇಳುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ ವಾಸ್ತವದ ತಳಹದಿಯ ಮೇಲೆ ಟೀಕೆಗಳನ್ನು ಮಾಡಬೇಕು. ಉತ್ತರಗಳನ್ನು ಕೊಡುವಾಗ ದಾರಿ ತಪ್ಪಿಸದೇ ಸದನದ ಗೌರವ ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷಗಳಿಗೆ ಕಿವಿಮಾತು ಹೇಳಿದರು.
ವಿಧಾನಸಭೆಯಲ್ಲಿ ಮಂಗಳವಾರ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಾತನಾಡುವ ಸಂದರ್ಭದಲ್ಲಿ ರೈತರಿಗೆ ಸರ್ಕಾರ ಪರಿಹಾರವನ್ನು ನೀಡಿಲ್ಲ, ರೈತರಿಗೆ ಕೊಡಲು ಸರ್ಕಾರದ ಬಳಿ ಹಣವಿಲ್ಲ ಎಂದಾಗ ಮಧ್ಯಪ್ರವೇಶಿಸಿ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಕಳೆದ ಸಾಲಿನಲ್ಲಿ 38 ಲಕ್ಷ ರೈತರಿಗೆ ಪರಿಹಾರವನ್ನು ನೀಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಕೊಟ್ಟೂ ಕೂಡ ಇಲ್ಲಿಯವರೆಗೂ ಒಂದು ಪೈಸೆ ಹಣ ಬಿಡುಗಡೆಯಾಗಿಲ್ಲ. 2245 ಕೋಟಿ ರೈತರಿಗೆ ಪರಿಹಾರ ನೀಡಲಾಗಿದೆ ಎಂದರು.
ಈ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷದವರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ಉಂಟಾಗಿ ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.
ಸದನ ಮತ್ತೆ ಸೇರಿದಾಗ ಮಾತನಾಡಿದ ಮುಖ್ಯಮಂತ್ರಿಗಳು, ನಂತರ ವಿರೋಧ ಪಕ್ಷದ ನಾಯಕರು ಅಥವಾ ಸಭಾ ನಾಯಕರು ಮಾತನಾಡುವಾಗ ಮಧ್ಯೆ ಮಾತನಾಡುವುದು ಸರಿಯಲ್ಲ. ವಿಧಾನಮಂಡಲದಲ್ಲಿ ಗುಣಾತ್ಮಕ ಚರ್ಚೆಗಳು ಕಡಿಮೆಯಾಗುತ್ತಿರುವ ಬಗ್ಗೆ ಈಗಾಗಲೇ ಸಾರ್ವಜನಿಕರಲ್ಲಿ ಅಸಮಾಧಾನವಿದೆ. ಸಂವಿಧಾನಾತ್ಮಕವಾಗಿ ಮಾತನಾಡುವಾಗ ಅಡ್ಡಿಪಡಿಸಬಾರದು. ವಿರೋಧ ಪಕ್ಷದವರು ಮಾತನಾಡುವಾಗ ಸುಮ್ಮ ಸುಮ್ಮನೆ ಅಡ್ಡಿಪಡಿಸಬಾರದು. ವಿರೋಧ ಪಕ್ಷದ ನಾಯಕರು ಮಣಿದಾಗ ಮಾತ್ರ ಮಾತನಾಡಬೇಕು. ಯಾರೇ ಆದರೂ ಚರ್ಚೆಗೆ ಅಡ್ಡಿಪಡಿಸಬಾರದು ಎಂದು ಸೂಚಿಸಿದರು.


