ನಾಡಿನ ಸುಪ್ರಸಿದ್ಧ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಜಿಲ್ಲಾಡಳಿತದಿಂದ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಮೊದಲ ದಿನವಾದ ಅಕ್ಟೋಬರ್ 9ರಂದು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಅಕ್ಟೋಬರ್ 9 ರಿಂದ ದೇವಾಲಯ ತೆರೆದು ಮಧ್ಯಾಹ್ನ 12.00 ಗಂಟೆಗೆ ಶಾಸ್ತ್ರೋಕ್ತವಾಗಿ ಪೂಜೆ ನೆರೆವೇರಿಸಲಾಗುವುದು. ಮೊದಲ ದಿನ ಪೂಜಾ ಕೈಂಕಾರ್ಯಕ್ಕೆ ಮಾತ್ರ ಅವಕಾಶವಿದ್ದು, ಸಾರ್ವಜನಿಕರಿಗೆ ಪ್ರವೇಶಾವಕಾಶವಿರುವುದಿಲ್ಲ.
ಸಾರ್ವಜನಿಕರಿಗೆ ಅಕ್ಟೋಬರ್ 10, ಶುಕ್ರವಾರ ಬೆಳಿಗ್ಗೆ 6.00 ರಿಂದ ದರ್ಶನಾವಕಾಶ ಆರಂಭವಾಗುತ್ತದೆ. ಅಂದು ಸಂಜೆ 7.00 ಗಂಟೆಗೆ ದರ್ಶನ ನಿಲ್ಲಿಸಿ ಪೂಜಾ ಕಾರ್ಯಗಳಿಗೆ ಅವಕಾಶ ನೀಡಬೇಕಾಗಿರುತ್ತದೆ. ಇನ್ನುಳಿದ ದಿನಗಳಲ್ಲಿ ದೇವಾಲಯವು 24 ಗಂಟೆಗಳು ತೆರೆದಿದ್ದರೂ ಸಹ ಪ್ರತಿ ದಿನ ನೈವ್ಯಧ್ಯ ಮತ್ತು ಅಲಂಕಾರ ಕಾರ್ಯಗಳಿಗೆ ಮಧ್ಯಾಹ್ನ 2.00 ರಿಂದ ಮಧ್ಯಾಹ್ನ 3.30 ನಡುವೆ ಮತ್ತು ಬೆಳಗಿನ ಜಾವ 2.00 ರಿಂದ 5.00ರವರೆಗೆ ಸಾರ್ವಜನಿಕರಿಗೆ ದರ್ಶನಾವಕಾಶವಿರುವುದಿಲ್ಲ.
ಈ ಸಮಯಗಳನ್ನು ಹೊರತುಪಡಿಸಿ ಅಕ್ಟೋಬರ್ 10 ಶುಕ್ರವಾರ ಬೆಳಗಿನ ಜಾವ 6.00 ರಿಂದ ಅಕ್ಟೋಬರ್ 22 ಬುಧವಾರ ಸಂಜೆ 7.00 ಗಂಟೆಯವರೆಗೆ ದರ್ಶನಾವಕಾಶವಿರುತ್ತದೆ. ಅಕ್ಟೋಬರ್ 22 ರಂದು ಸಂಜೆ 7.00 ಗಂಟೆಗೆ ಸಾರ್ವಜನಿಕರಿಗೆ ಪ್ರವೇಶ ನಿಲ್ಲಿಸಲಾಗುವುದು. ಅಕ್ಟೋಬರ್ 23ರಂದು ಪೂಜಾ ಕೈಂಕಾರ್ಯಗಳೊಂದಿಗೆ ಜಾತ್ರಾ ಮಹೋತ್ಸವ ಸಮಾರೂಪವಾಗುವುದು. ದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಮೇಲೆ ತಿಳಿಸಿದ ದರ್ಶನದ ಸಮಯವನ್ನು ಗಮನಿಸಿಕೊಂಡು ಬರಲು ಕೋರಿದೆ.
ಅಕ್ಟೋಬರ್ 10, 11, 17, 18, 19, 20 ದಿನಗಳಂದು ಸಾರ್ವಜನಿಕರು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದೆಂದು ಅಂದಾಜಿಸಲಾಗಿದೆ. ಈ ದಿನಗಳನ್ನು ಹೊರತುಪಡಿಸಿ, ಬೇರೆ ಸೂಕ್ತ ದಿನ ಆಗಮಿಸಲು ಪ್ರಯತ್ನ ಮಾಡಬಹುದು. ಬರುವ ಸಾರ್ವ ಜನಿಕರಿಗೆ ಧರ್ಮದರ್ಶನ, ರೂ. 300 ಮತ್ತು ರೂ. 1000 ಹೀಗೆ ಮೂರು ಪ್ರತ್ಯೇಕ ಸಾಲುಗಳಲ್ಲಿ ದರ್ಶನಾವಕಾಶ ಕಲ್ಪಿಸಲಾಗಿದೆ.
ಸಚಿವರು, ಶಾಸಕರು, ನ್ಯಾಯಮೂರ್ತಿಗಳು, ಉನ್ನತ ಅಧಿಕಾರಿಗಳು, ಇತರೆ ಗಣ್ಯರು ಆಗಮಿಸಲಿದ್ದು, ತಮ್ಮ ಆಗಮನದ ದಿನಾಂಕವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಮೊದಲೇ ಮಾಹಿತಿ ನೀಡಿದ್ದಾರೆ. ನಿಗಧಿತ ದಿನಾಂಕದಂದು ಬೆಳಿಗ್ಗೆ 10.30 ರಿಂದ 12.30 ಗಂಟೆ ನಡುವೆ ಮಾತ್ರ ಆಗಮಿಸುವುದು. ಬೇರೆ ಅವಧಿಯಲ್ಲಿ ಗಣ್ಯರಿಗೆ ದರ್ಶನಾವಕಾಶ ಇರುವುದಿಲ್ಲ. ಗಣ್ಯರು ಮೊದಲು ಹಾಸನದ ಸರ್ಕಾರಿ ಅತಿಥಿ ಗೃಹಕ್ಕೆ (ಪರಿವೀಕ್ಷಣ ಮಂದಿರ) ಆಗಮಿಸಲು ಕೋರಿದೆ. ಗಣ್ಯರನ್ನು ಜಿಲ್ಲಾಡಳಿತದ ವಾಹನದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು, ಇದಕ್ಕೆ ಗಣ್ಯರ ಸಹಕಾರ ಕೋರಿದೆ.
ಗಣ್ಯರು ದರ್ಶನಕ್ಕೆ ಆಗಮಿಸಲು ದಿನಾಂಕವನ್ನು ಪೂರ್ವನಿಗದಿಪಡಿಲು ನಿರ್ಧರಿಸಿದಂತೆ, ದರ್ಶನ ಬಯಸಿದ ದಿನಕ್ಕೆ ಮುಂಚಿತವಾಗಿ ಜಿಲ್ಲಾಧಿಕಾರಿಗಳ ಕಛೇರಿ ಇ-ಮೇಲ್ ವಿಳಾಸಕ್ಕೆ [deo.hassan@gmail.com] ಶಿಷ್ಠಾಚಾರದಲ್ಲಿ ವ್ಯತ್ಯಾಸ ಆಗದ ಬಗ್ಗೆ ಮುತುವರ್ಜಿಯಿಂದ ಪತ್ರ ವ್ಯವಹರಿಸಲು ಕೋರಿ, ದಿನಾಂಕವನ್ನು ಮರು ಖಾತರಿಪಡಿಸಿಕೊಳ್ಳಲು ವಿನಂತಿಸಿದೆ. ಈ ಉದ್ದೇಶವಾಗಿ ಶ್ರೀ ಮಂಜುನಾಥ ವಿ., ಕೆ.ಎ.ಎಸ್., ಅಪರ ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ ರವರ ಮೊಬೈಲ್ ಸಂಖ್ಯೆ:9449343588 ಅಥವಾ ಕಛೇರಿ ದೂರವಾಣಿ ಸಂಖ್ಯೆ 08172-250554, ಶ್ರೀ ರಾಜೇಶ್, ಕೆ.ಎ.ಎಸ್., ಸಹಾಯಕ ಆಯುಕ್ತರು, ಸಕಲೇಶಪುರ ಉಪವಿಭಾಗ, ಸಕಲೇಶಪುರ ಇವರ ದೂರವಾಣಿ ಸಂಖ್ಯೆ: 8971221368 ಉಪವಿಭಾಗಾಧಿಕಾರಿಗಳು, ಹಾಸನ ಉಪವಿಭಾಗ ಕಛೇರಿ ನಿಯಂತ್ರಣ ಕೊಠಡಿ ಸಹಾಯವಾಣಿ ಸಂಖ್ಯೆ: 08172-257119 ಯನ್ನು ಸಂಪರ್ಕಿಸಿ ನಿರ್ಣಯಿಸಲು ಕೋರಿದೆ.
ಹಿಂದಿನ ವರ್ಷಗಳ ಅನುಭವಗಳನ್ನು ಪರಿಶೀಲಿಸಿ, ದೇವಾಲಯ ಪ್ರವೇಶ ಬಹಳ ಕಿರಿದಾಗಿರುವುದರಿಂದ ರಸ್ತೆ ಸಂಪರ್ಕ ಬಹಳ ಸೀಮಿತವಾಗಿರುವುದರಿಂದ ಮತ್ತು ದೇಶಾದ್ಯಂತ ಒಂದು ದಿನಕ್ಕೆ ಸರಾಸರಿ 2 ಲಕ್ಷ ಸಾರ್ವಜನಿಕರ ಆಗಮನದ ನಿರೀಕ್ಷೆ ಇರುವುದರಿಂದ ಈ ಬದಲಾವಣೆಗಳನ್ನು ತರಲಾಗಿದೆ. ಆಗಮಿಸುವ ಲಕ್ಷಾಂತರ ಸಾರ್ವಜನಿಕರ ಸೌಕರ್ಯ, ಸುಗಮ ದರ್ಶನ ಹಾಗೂ ಅತಿಮುಖ್ಯವಾಗಿ ಸುರಕ್ಷತೆಯ ದೃಷ್ಠಿಯಿಂದ ಗಣ್ಯರ ಹಾಗೂ ಸಾರ್ವಜನಿಕರ ಸಹಕಾರವನ್ನು ಕೋರಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಈ ಬಾರಿ 3 ವೇದಿಕೆಗಳಲ್ಲಿ ನಾಡಿನ ಸಂಪದ್ಬರಿತ ನೃತ್ಯ, ಜಾನಪದ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಹೆಲಿಕ್ಯಾಪ್ಟರ್ ಪ್ರವಾಸ, ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಇವುಗಳ ಸಂಪೂರ್ಣ ಪ್ರಯೋಜನ ಮತ್ತು ಅನುಭವನ್ನು ಪಡೆಯಬೇಕಾಗಿ ಆಗಮಿಸುವ ಸಾರ್ವಜನಿಕರಲ್ಲಿ ಕೋರಿದೆ.
ಈ ಎಲ್ಲಾ ವ್ಯವಸ್ಥೆಗಳಿಗೆ ಮತ್ತು ತೀರ್ಮಾನಗಳಿಗೆ ಜಿಲ್ಲಾಡಳಿತದೊಂದಿಗೆ ಎಲ್ಲಾ ಜನಪ್ರತಿನಿಧಿಗಳು ಹಾಗೂ ಸರ್ಕಾರ ಒಂದಾಗಿ ನಿಂತು ಈ ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಬದ್ಧವಾಗಿವೆ.


