ತಮ್ಮನಿಗೆ ಹೃದಯಾಘಾತ ಆಗಿರುವ ಸುದ್ದಿ ಕೇಳಿ ಅಣ್ಣನಿಗೂ ಹೃದಯಾಘಾತವಾಗಿದ್ದು, ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನಲ್ಲೂ ಸೋದರರು ಒಂದಾದ ದುರಂತ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿಯ ಸುರಪುರ ತಾಲೂಕಿನ ಕೆಂಭಾವಿಯ ನಿವಾಸಿಗಳಾದ ಅಣ್ಣ ಶಂಶುದ್ದೀನ್ (42) ಹಾಗೂ ಇರ್ಫಾನ್ (38) ಸಾವಿನಲ್ಲೂ ಒಂದಾದ ಸೋದರರು.
ತಮ್ಮ ಇರ್ಫಾನ್ಗೆ ಎದೆನೋವು ಕಾಣಿಸಿಕೊಂಡು ಹೃದಯಾಘಾತವಾದ ಸುದ್ದಿ ತಿಳಿದ ಕೂಡಲೇ ಅಣ್ಣ ಶಂಶೋದ್ದೀನ್ಗೂ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಅಸು ನೀಗಿದ್ದಾರೆ.
ಇರ್ಫಾನ್ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು, ಆದರೆ ಶಂಶೋದ್ದೀನ್ ಕೃಷಿಯಲ್ಲಿ ಜೀವನ ಮಾಡುತ್ತಿದ್ದರು.
ರಾಜ್ಯದಲ್ಲಿ ದಿನೇ ದಿನೇ ಆಕಸ್ಮಿಕ ಹೃದಯಾಘಾತ ಸಾವುಗಳು ಸಂಭವಿಸುತ್ತಿರುವುದು ಕಳವಳಕಾರಿ ವಿಷಯವಾಗಿದೆ.


