ಜನಪ್ರಿಯ ಜನಪದ ಕ್ರೀಡೆ ಕಂಬಳದಲ್ಲಿ ಅತೀ ಹೆಚ್ಚು ಪ್ರಶಸ್ತಿ ಗೆದ್ದು ಪ್ರಶಸ್ತಿಗಳ ಸರದಾರ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ಅವರ ʼಚೆನ್ನʼ ಹೆಸರಿನ ಕೋಣ ಗುರುವಾರ ಅಸುನೀಗಿದೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾರು 25 ವರ್ಷ ಪ್ರಾಯದ ಚೆನ್ನ ಕಳೆದ ಮೂರು ವರ್ಷದಿಂದ ವಿಶ್ರಾಂತಿಯಲ್ಲಿದ್ದ. ಗುರುವಾರ ಸಂಜೆ ಅಂತ್ಯಸಂಸ್ಕಾರ ನಡೆದಿದೆ.
ಸುಮಾರು 22 ವರ್ಷಗಳ ಹಿಂದೆ ಕಡಂದಲೆ ಕಾಳು ಪಾಣಾರ ಅವರ ಹಟ್ಟಿಯಲ್ಲಿದ್ದ ಕೋಣ ಚೆನ್ನ ಅನ್ನು ಬಾರ್ಕೂರು ಶಾಂತಾರಾಮ ಶೆಟ್ಟಿ ಅವರು ತಮ್ಮಲ್ಲಿಗೆ ಕರೆತಂದು ಮುದ್ದಿನಿಂದ ಸಾಕಿದ್ದರು. ಬಳಿಕ ಕಂಬಳಕ್ಕಾಗಿ ಚೆನ್ನನನ್ನು ಅಣಿಗೊಳಿಸಿದ್ದರು. ಮೂಡಬಿದಿರೆಯ ಕೋಟಿ – ಚೆನ್ನಯ ಕಂಬಳದ ಗದ್ದೆಗಳಿಂದ ಮೊದಲ ಮೂರು ವರ್ಷವೂ ನೇಗಿಲು ಜೂನಿಯರ್ ವಿಭಾಗದಲ್ಲಿ ಬಾರ್ಕೂರು ಶಾಂತಾರಾಮ ಶೆಟ್ಟರಿಗೆ ಚೆನ್ನ ಕೋಣ ಮೆಡಲ್ ಬಾಚಿಕೊಟ್ಟಿತ್ತು.
ಸೀನಿಯರ್ ಆಗಿ ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟರ ಹಟ್ಟಿಗೆ ತೆರಳಿದ ಚೆನ್ನ. ತುಸು ತುಂಟ ಪೋಕುರಿಯ ಕೋಣನಾದ್ದರಿಂದ ಕಂಬಳ ಓಟ ಆರಂಭವಾಗುವ ಸಮಯದಲ್ಲಿಯೂ ತರ್ಲೆ ಮಾಡುತ್ತಿತ್ತು. ಇದೇ ಕಾರಣಕ್ಕೆ ಸೀನಿಯರ್ ವಿಭಾಗದಲ್ಲಿ ಒಂದು ವರ್ಷ ನೇಗಿಲು ವಿಭಾಗದಲ್ಲಿ ಚೆನ್ನನನ್ನು ಓಡಿಸಲಾಗಿತ್ತು.
ಬಂಟ್ವಾಳದ ಮಹಾಕಾಳಿ ಬೆಟ್ಟು ಸೀತಾರಾಮ್ ಶೆಟ್ಟಿ ಚೆನ್ನನನ್ನು ತನ್ನ ಕೋಣದ ಜತೆ ಮಾಡಿದ್ದರು. ಆಗಲೇ ಅಲ್ಲಿಪಾದೆ ವಿನ್ಸೆಂಟ್ ಅವರು ಚೆನ್ನನಿಗೆ ಪ್ರೀತಿಯಿಂದ ಆರೈಕೆ ಮಾಡಿ ಕಂಬಳದ ಪಾಠ ಹೇಳಿಕೊಟ್ಟರು. ಅದೇ ವರ್ಷದ ನೇಗಿಲು ಹಿರಿಯ ವಿಭಾಗದಲ್ಲಿ ಚೆನ್ನ ಚಾಂಪಿಯನ್ ಆಗಿ ಹೊರಮ್ಮಿದ್ದ.


