Thursday, September 19, 2024
Google search engine
Homeತಾಜಾ ಸುದ್ದಿಜಮೀರ್ ಅಹ್ಮದ್ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಎಸ್ಸಿ ಮೋರ್ಚಾ ಪೊಲೀಸರಿಗೆ ದೂರು

ಜಮೀರ್ ಅಹ್ಮದ್ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಎಸ್ಸಿ ಮೋರ್ಚಾ ಪೊಲೀಸರಿಗೆ ದೂರು

ಬೆಂಗಳೂರು: ರಾಜ್ಯಪಾಲರಿಗೆ ಧಮ್ಕಿ ಹಾಕಿದ ಸಚಿವ ಜಮೀರ್ ಅಹ್ಮದ್  ಅವರನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ಎಸ್ ಸಿ ಮೋರ್ಚಾ ಘಟಕದಿಂದ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಲಾಯಿತು.

ಬುಧವಾರ ಪೊಲೀಸರಿಗೆ ದೂರು ನೀಡಿದ ನಂತರ ಮಾತನಾಡಿದ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯಾಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ್ ಮಾಧ್ಯಮಗಳ ಜೊತೆ ಮಾತನಾಡಿ, ಆಡಳಿತ ಪಕ್ಷವಾದ ಕಾಂಗ್ರೆಸ್ಸಿನವರು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮಾಡಲು ಅವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯಪಾಲರದು ಸಾಂವಿಧಾನಿಕ ಹುದ್ದೆ. 3 ಜನ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಸಲಹೆ ಪಡೆದು ತನಿಖೆ ಮಾಡಲು ಅವರು ಅವಕಾಶ ಕೊಟ್ಟಿದ್ದಾರೆ. ರಾಜ್ಯಪಾಲರ ಭಿತ್ತಿಪತ್ರಕ್ಕೆ ಚಪ್ಪಲಿಯಲ್ಲಿ ಹೊಡೆದ ಇವರು ಸಂವಿಧಾನಕ್ಕೆ ಗೌರವ ಕೊಡುತ್ತಾರಾ ಎಂದು ಪ್ರಶ್ನಿಸಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯಪಾಲರೇ ಕಾರಣ ಎಂದು ಜಮೀರ್ ಅಹ್ಮದ್ ಅವರು ಹೇಳಿದ್ದು, ಅವರ ವಿರುದ್ಧ ದೂರು ಕೊಡಲಾಗಿದೆ ಎಂದರು. ಜಮೀರ್ ಅಹ್ಮದ್, ಐವಾನ್ ಡಿಸೋಜಾ, ರಕ್ಷಿತ್ ಶಿವರಾಂ ವಿರುದ್ಧವೂ ದೂರು ನೀಡಿದ್ದಾಗಿ ಅವರು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಅವರು ಅರಾಜಕತೆಯನ್ನು ಸೃಷ್ಟಿಸುವ ಹುನ್ನಾರದಲ್ಲಿ ಇದ್ದಂತಿದೆ ಎಂದು ಆಕ್ಷೇಪಿಸಿದರು. ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅವರು ಇದೇ ಮಾದರಿಯ ಹೇಳಿಕೆ ನೀಡಿದ್ದರು. ಈಗ ಕರ್ನಾಟಕದಲ್ಲಿ ಎಲ್ಲ ಕಾಂಗ್ರೆಸ್ ನಾಯಕರು ಇದೇ ಮಾತನ್ನು ಆಡುತ್ತಿದ್ದಾರೆ ಎಂದು ಟೀಕಿಸಿದರು.

ಹತಾಶವಾದ ಕಾಂಗ್ರೆಸ್ ಪಕ್ಷವು ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದೆ. ರಕ್ಷಿತ್ ಶಿವರಾಂ, ಐವಾನ್ ಡಿಸೋಜಾ ಅವರಿಬ್ಬರೂ ವಕೀಲರಾಗಿದ್ದಾರೆ. ಅವರೇನು ಜನಸಾಮಾನ್ಯರಲ್ಲ ಎಂದು ಗಮನಕ್ಕೆ ತಂದರು. ಅವರ ಮಾತುಗಳು ಜನಸಾಮಾನ್ಯರನ್ನು ದಂಗೆಗೆ ಪ್ರಚೋದಿಸುವಂತಿದೆ ಎಂದು ಆರೋಪಿಸಿದರು. ಮಂಗಳೂರಿನಲ್ಲಿ ಬಸ್ಸಿಗೆ ಕಲ್ಲೆಸೆದು ಜನಸಾಮಾನ್ಯರಾದ ಮಹಿಳೆಗೆ ಗಾಯವಾಗಿದೆ ಎಂದು ತಿಳಿಸಿದರು.

ಎಸ್‍ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್ ಹಾಗೂ ಪ್ರಮುಖರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments