15ನೇ ಉಪ ರಾಷ್ಟ್ರಪತಿಯಾಗಿ ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಧಾಕೃಷ್ಣನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಇದರೊಂದಿಗೆ ರಾಧಾಕೃಷ್ಣನ್ ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಧಿಕೃತವಾಗಿ ಅಲಂಕರಿಸಿದರು.
ಉಪರಾಷ್ಟ್ರಪತಿ ಹುದ್ದೆಗೇರಿದ ತಮಿಳುನಾಡಿನ ಮೂರನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ರಾಧಾಕೃಷ್ಣನ್ ಪಾತ್ರರಾಗಿದ್ದಾರೆ. ಈ ಹಿಂದೆ ಎಸ್ ರಾಧಾಕೃಷ್ಣನ್ (1952 – 1962) ಹಾಗೂ ಆರ್ ವೆಂಕಟರಾಮನ್ (1984-1987) ಉಪರಾಷ್ಟ್ರಪತಿಯಾಗಿದ್ದರು.
ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಹಲವು ಪಕ್ಷಗಳ ಹಿರಿಯ ನಾಯಕರು ಭಾಗಿಯಾಗಿದ್ದರು. ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಕರ್ನಾಟಕದ ರಾಜ್ಯಪಾಲ ತಾವರಚಂದ್ ಗೆಹ್ಲೋಟ್, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಪಂಜಾಬ್ ಗವರ್ನರ್ ಮತ್ತು ಚಂಡೀಗಢ ಆಡಳಿತಾಧಿಕಾರಿ ಗುಲಾಬ್ ಚಂದ್ ಕಟಾರಿಯಾ, ಜಾರ್ಖಂಡ್ ರಾಜ್ಯಪಾಲ ಸಂತೋಷ್ ಗಂಗ್ವಾರ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಎನ್ಡಿಎ ಅಭ್ಯರ್ಥಿ ಆಗಿದ್ದ ತಮಿಳುನಾಡು ಮೂಲದ ಸಿಪಿ ರಾಧಾಕೃಷ್ಣನ್ ಬುಧವಾರ ನಡೆದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಇಂಡಿಯಾ ಕೂಟದ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ಅವರನ್ನು 152 ಮತಗಳ ಅಂತರದಿಂದ ಸೋಲಿಸಿದ್ದರು. ಉಪರಾಷ್ಟ್ರಪತಿ ಹುದ್ದೆಗೆ ನಡೆದ ಮತದಾನದಲ್ಲಿ ರಾಧಾಕೃಷ್ಣನ್ 452 ಮತಗಳನ್ನು ಪಡೆದರೆ, ಎದುರಾಳಿ ಅಭ್ಯರ್ಥಿಯಾಗಿದ್ದ ಸುದರ್ಶನ್ ರೆಡ್ಡಿ 300 ಮತ ಗಳಿಸಿದ್ದರು.
781 ಸಂಸದರಲ್ಲಿ ಒಟ್ಟು 767 ಎಂಪಿಗಳು ಮತ ಚಲಾಯಿಸಿದ್ದು, ಶೇ 98.2ರಷ್ಟು ಮತದಾನವಾಗಿತ್ತು. ಇದರಲ್ಲಿ 752 ಮತಗಳು ಮಾನ್ಯವಾಗಿದ್ದು, 15 ಮತಗಳು ಅಮಾನ್ಯಗೊಂಡವು. ಆಸಕ್ತಿಕರ ಅಂಶ ಎಂದರೆ ಎನ್ಡಿಎ ಅಭ್ಯರ್ಥಿ ಸಿ ಪಿ ರಾಧಾಕೃಷ್ಣನ್ ನಿರೀಕ್ಷೆಗಿಂತ 14 ಹೆಚ್ಚಿನ ಮತಗಳನ್ನು ಪಡೆದಿದ್ದು, ಅಡ್ಡ ಮತದಾನದ ಆರೋಪ ಕೇಳಿ ಬಂದಿದೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವಿನ ಬೆನ್ನಲ್ಲೇ ಮಹಾರಾಷ್ಟ್ರ ರಾಜ್ಯಪಾಲರ ಹುದ್ದೆಗೆ ರಾಧಕೃಷ್ಣನ್ ಗುರುವಾರ ರಾಜೀನಾಮೆ ಸಲ್ಲಿಸಿದರು. ಗುಜರಾತ್ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಅವರನ್ನು ಮಹಾರಾಷ್ಟ್ರ ರಾಜ್ಯಪಾಲರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.


