ನವದೆಹಲಿ: ಪ್ರಧಾನಿ ನಿವಾಸದ ಬಳಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಮೂರು ಕೊಳೆಗೇರಿಗಳಲ್ಲಿರುವ 717 ಕುಟುಂಬಗಳಿಗೆ ಮಾರ್ಚ್ 6 ರೊಳಗೆ ಮನೆ ತೆರವು ಮಾಡುವಂತೆ ಸೂಚಿಸಲಾಗಿದೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಎಲ್ & ಡಿಒ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗದಲ್ಲಿ ಭಾಯಿ ರಾಮ್ ಕ್ಯಾಂಪ್, ಮಸೀದಿ ಕ್ಯಾಂಪ್ ಮತ್ತು ಡಿಐಡಿ ಕ್ಯಾಂಪ್ ಗಳಲ್ಲಿ ವಾಸವಾಗಿರುವ ನಿವಾಸಿಗಳಿಗೆ ಗುರುವಾರ ವಸತಿ ಮತ್ತು ನಗರ ಸಚಿವಾಲಯ (ಮೊಹುವಾ) ಭೂ ಮತ್ತು ಅಭಿವೃದ್ಧಿ ಕಚೇರಿ (ಎಲ್ & ಡಿಒ) ಮೂಲಕ ಪುನರ್ವಸತಿ ನೋಟಿಸ್ ನೀಡಿದೆ.
ಈ ಕ್ಲಸ್ಟರ್ಗಳು ಕೇಂದ್ರ ದೆಹಲಿಯಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಸಾವ್ಡಾ ಘೇವ್ರಾದ ಡುಸಿಬ್ ಕಾಲೋನಿಯಲ್ಲಿ ಅರ್ಹ ನಿವಾಸಿಗಳಿಗೆ ಫ್ಲಾಟ್ಗಳನ್ನು ಮಂಜೂರು ಮಾಡಲಾಗಿದೆ. ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯ ಪುನರ್ವಸತಿ ನೀತಿಯಡಿಯಲ್ಲಿ ಎಲ್ ಅಂಡ್ ಡಿಒ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರ ಡಿಡಿಎ ಜನವರಿ 2024ರಲ್ಲಿ ನಡೆಸಿದ ಜಂಟಿ ಸಮೀಕ್ಷೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಶಾಲಾ ಪರೀಕ್ಷೆಗಳು ನಡೆಯುತ್ತಿರುವಾಗ ಕೇಂದ್ರ ಗಡುವು ಏಕಾಏಕಿ ಮನೆ ಖಾಲಿ ಮಾಡುವಂತೆ ನೀಡಿರುವ ಸೂಚನೆಯು ಜನರಲ್ಲಿ ಭಯ, ಗೊಂದಲ ಮತ್ತು ಕೋಪವನ್ನು ಹುಟ್ಟುಹಾಕಿದೆ.
’10 ಅಥವಾ 12 ದಿನಗಳಲ್ಲಿ ಮನೆ ಖಾಲಿ ಮಾಡಲು ಹೇಳಿದರೆ ಅದು ಹೇಗೆ ಸಾಧ್ಯ? ನಮ್ಮ ಮಕ್ಕಳ ಅಧ್ಯಯನಕ್ಕೆ ತೊಂದರೆಯಾಗುತ್ತದೆ. ನನ್ನ ಮಗುವಿಗೆ ಏಪ್ರಿಲ್ನಲ್ಲಿ 12ನೇ ತರಗತಿಯ ಬೋರ್ಡ್ ಪರೀಕ್ಷೆ ಇದೆ. ನನ್ನ ಇಬ್ಬರೂ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ನಾವು ಏನು ಮಾಡಬೇಕು?’ ಎಂದು ಸ್ಥಳೀಯ ನಿವಾಸಿ ಕಮಲೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಇಲ್ಲಿ ಎಷ್ಟು ಮಕ್ಕಳು ಬೋರ್ಡ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆಂಬುದನ್ನು ನೋಡಬಹುದು. ಕನಿಷ್ಠ ಅವರ ಪರೀಕ್ಷೆಗಳು ಮುಗಿಯುವವರೆಗೆ ಸಮಯವಕಾಶ ನೀಡಿ ಎಂದು ಅವರು ಮನವಿ ಮಾಡಿದ್ದಾರೆ.
‘ನಾನು ಇಲ್ಲಿ ಹುಟ್ಟಿ ಬೆಳೆದಿದ್ದು, ನನಗೆ ಈಗ ಸುಮಾರು 70 ವರ್ಷಗಳಾಗಿದೆ. ನಾವು ಇಲ್ಲಿಗೆ ಬಂದವರಲ್ಲಿ ಮೊದಲಿಗರು. ನಾನು ಇಲ್ಲಿ ಐದು ಮಕ್ಕಳನ್ನು ಕಳೆದುಕೊಂಡಿದ್ದೇನೆ. ನನ್ನ ಇಡೀ ಜೀವನ ಇದೇ ಸ್ಥಳದಲ್ಲಿ ಕಳೆದಿದೆ. ಈಗ ಅವರು ಮಾರ್ಚ್ 6 ರೊಳಗೆ ಸ್ಥಳಾಂತರಗೊಂಡು ದೂರಕ್ಕೆ ಹೋಗಬೇಕೆಂದು ಹೇಳುತ್ತಾರೆ. ನಾವು ಎಲ್ಲಿಗೆ ಹೋಗುತ್ತೇವೆ, ಏನು ಕೊಡುತ್ತಾರೆ ಎಂದು ಯಾರೂ ನಮಗೆ ಸ್ಪಷ್ಟವಾಗಿ ಹೇಳಿಲ್ಲ. ಹೀಗಾಗಿ, ನನಗೆ ರಾತ್ರಿ ನಿದ್ದೆಯೇ ಬರುವುದಿಲ್ಲ’ ಎಂದು ವೃದ್ದರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಅರ್ಹ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿಕೊಂಡರೂ, ಹಠಾತ್ ಗಡುವು ಮತ್ತು ಸ್ಥಳಾಂತರವು ನಿವಾಸಿಗಳ ಜೀವನೋಪಾಯ, ಮಕ್ಕಳ ಶಿಕ್ಷಣ ಮತ್ತು ಸಾಮಾಜಿಕ ಸಂಪರ್ಕಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.


