ಪ್ರಿಯಕರನ ಜೊತೆಗೂಡಿ ಕುಖ್ಯಾತ ಗ್ಯಾಂಗ್ ಸ್ಟರ್ ಆಗಿದ್ದ ಗಂಡನ ಕೊಂದು ಶವವನ್ನು ಚರಂಡಿಗೆ ಎಸೆದಿದ್ದ ಪತ್ನಿ ಹಾಗೂ ಪ್ರಿಯಕರನ್ನು ದೆಹಲಿ ಪೊಲೀಸರು ಒಂದು ವರ್ಷದ ನಂತರ ಬಂಧಿಸಿದ್ದಾರೆ.
42 ವರ್ಷದ ಗ್ಯಾಂಗ್ ಸ್ಟರ್ ಆಗಿದ್ದ ಪತಿ ಪ್ರೀತಮ್ ನನ್ನು ಕೊಲೆಗೈದ ಆರೋಪದ ಮೇಲೆ ದೆಹಲಿಯ ಅಲಿಪುರ ನಿವಾಸಿ 34 ವರ್ಷದ ಸೋನಿಯಾ ಮತ್ತು ಪ್ರಿಯಕರ ಸೋನಿಪತ್ ನಿವಾಸಿ 28 ವರ್ಷದ ರೋಹಿತ್ ಅವರನ್ನು ಬಂಧಿಸಲಾಗಿದ್ದು, ಕೊಲೆಗೆ ಸಹಕರಿಸಿದ್ದ ಮತ್ತೊಬ್ಬ ಆರೋಪಿ ವಿಜಯ್ ಗಾಗಿ ಶೋಧ ಕಾರ್ಯ ನಡೆದಿದೆ.
ಪ್ರೀತಮ್ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. 2024ರ ಜುಲೈ 5ರಂದು ಪ್ರೀತಮ್ ತನ್ನ ಪತ್ನಿ ಸೋನಿಯಾಳನ್ನು ಸೋನಿಪತ್ನ ಗನೌರ್ನಲ್ಲಿರುವ ಆಕೆಯ ಸಹೋದರಿಯ ಮನೆಯಿಂದ ಕರೆದುಕೊಂಡು ಹೋಗಲು ಬಂದಿದ್ದ, ಆದರೆ ತೀವ್ರ ವಾಗ್ವಾದ ನಡೆದ ಬಳಿಕ ಆತ ಅಲ್ಲಿಂದ ಹೋಗಿದ್ದ.
ಆ ದಿನ ಸೋನಿಯಾ ತನ್ನ ಸಹೋದರಿಯ ಸಂಬಂಧಿ ವಿಜಯ್ಗೆ 50 ಸಾವಿರ ರೂ. ನೀಡಿ ತನ್ನ ಗಂಡನನ್ನು ಕೊಲ್ಲುವಂತೆ ಕೇಳಿಕೊಂಡಳು. ಪ್ರೀತಮ್ ಮರಳಿ ಬಂದಾಗ ಸೋನಿಯಾ ಅವನಿಗೆ ಮನೆಯಲ್ಲಿಯೇ ಇರಲು ಅವಕಾಶ ಮಾಡಿಕೊಟ್ಟಳು. ರಾತ್ರಿ ಪ್ರೀತಮ್ ಮಲಗಿದ್ದಾಗ ವಿಜಯ್ ಅವನನ್ನು ಕೊಂದು ಅಗ್ವಾನ್ಪುರ ಬಳಿಯ ಚರಂಡಿಯಲ್ಲಿ ಶವವನ್ನು ಎಸೆದಿದ್ದರು.
ಜುಲೈ 20 ರಂದು ಅಲಿಪುರ ಪೊಲೀಸ್ ಠಾಣೆಯಲ್ಲಿ ಸೋನಿಯಾ ಪ್ರೀತಮ್ ನಾಪತ್ತೆ ದೂರು ದಾಖಲಿಸಿದರು. ತನ್ನ ಪತಿ ಹೊರಗೆ ಹೋಗಿದ್ದು, ಹಿಂತಿರುಗಿಲ್ಲ ಎಂದು ಆಕೆ ಸುಳ್ಳು ಹೇಳಿದ್ದಳು. ಆರಂಭದಲ್ಲಿ ಪೊಲೀಸರು ಈ ಪ್ರಕರಣವನ್ನು ಸಾಮಾನ್ಯ ಪ್ರಕರಣದಂತೆ ಕಂಡಿದ್ದರು.
ತನಿಖೆಯ ಸಮಯದಲ್ಲಿ, ಪೊಲೀಸ್ ತಂಡವು ಪ್ರೀತಮ್ಗೆ ಸಂಬಂಧಿಸಿದ ಮೊಬೈಲ್ ಕೊನೆಯದಾಗಿ ಸೋನಿಪತ್ನಲ್ಲಿ ಬಳಸಲಾಗಿದೆ ಎಂದು ತಿಳಿದುಬಂದಿತ್ತು. ಇದು ತಂಡವನ್ನು ರೋಹಿತ್ ವರೆಗೆ ಕರೆದೊಯ್ಯಿತು. ವಿಚಾರಣೆ ನಡೆಸಿದಾಗ ರೋಹಿತ್ ಆರಂಭದಲ್ಲಿ ದಾರಿ ತಪ್ಪಿಸಲು ಪ್ರಯತ್ನಿಸಿದ್ದ. ನಂತರ ಅಪರಾಧ ಒಪ್ಪಿಕೊಂಡಿದ್ದ.
ಸೋನಿಯಾ ಜೊತೆ ತನಗೆ ಸಂಬಂಧವಿದೆ ಎಂದು ರೋಹಿತ್ ಪೊಲೀಸರಿಗೆ ತಿಳಿಸಿದ್ದಾನೆ. ಪ್ರೀತಮ್ ಅವರನ್ನು ಕೊಲ್ಲಲು ಇಬ್ಬರೂ ಸಂಚು ರೂಪಿಸಿದ್ದರು. ಸೋನಿಯಾ ತನ್ನ ಪತಿಯನ್ನು ಕೊಲ್ಲಲು ವಿಜಯ್ಗೆ ಹಣ ನೀಡಿದ್ದಾಳೆ ಎಂದು ಅವರು ಒಪ್ಪಿಕೊಂಡಿದ್ದಾರೆ.
ಸೋನಿಯಾ ಸುಮಾರು 15 ವರ್ಷ ವಯಸ್ಸಿನವಳಾಗಿದ್ದಾಗ ಪ್ರೀತಮ್ನನ್ನು ಪ್ರೀತಿಸಿ, ತನ್ನ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಅವನನ್ನು ಮದುವೆಯಾಗಿದ್ದು, 16 ವರ್ಷದ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ರೋಹಿತ್ ಈ ಹಿಂದೆ ಕೊಲೆ ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕೆ ಸಂಬಂಧಿಸಿದ ನಾಲ್ಕು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ.


