ಬೆಂಗಳೂರು: ರಾಜ್ಯ ಸರ್ಕಾರ ನಕಲಿ ಬಳಕೆ ಪ್ರಮಾಣ ಪತ್ರ ನೀಡಿ ಕೇಂದ್ರ ಸರ್ಕಾರದ 1324 ಕೋಟಿ ರೂ. ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯ ಸರ್ಕಾರ, ಕೇಂದ್ರದಿಂದ ಬಂದ ವಿಶೇಷ ಗ್ರ್ಯಾಂಟ್ ಅನ್ನು ಸಂಬಂಧಿಸಿದ ಇಲಾಖೆಗಳಿಗೆ ಕೊಟ್ಟೇ ಇಲ್ಲ. ಕೇಂದ್ರ ಕಳಿಸಿದ ವಿಶೇಷ ಗ್ರ್ಯಾಂಟ್ ಆಯಾ ಇಲಾಖೆಗಳಿಗೆ ಹೋಗೇ ಇಲ್ಲ. ಕೇಂದ್ರಕ್ಕೆ ನಕಲಿ ಬಳಕೆ ಪ್ರಮಾಣಪತ್ರಗಳನ್ನು ಸರ್ಕಾರ ಸಲ್ಲಿಸಿದೆ ಅನ್ನೋ ಮಾಹಿತಿ ನಮಗೆ ಬಂದಿದೆ ಎಂದರು.
ಕೇಂದ್ರ ಎಲ್ಲ ರಾಜ್ಯಗಳಿಗೆ ವಿಶೇಷ ಅನುದಾನ ಕೊಟ್ಟಿದೆ. ವಿಶೇಷ ಗ್ರ್ಯಾಂಟ್ ಹಣವನ್ನು ಕೇಂದ್ರ ಸರ್ಕಾರ ಹಂತಹಂತವಾಗಿ ಬಿಡುಗಡೆ ಮಾಡುತ್ತದೆ. ರಾಜ್ಯಗಳು ಇದರ ಬಳಕೆ ಕುರಿತು ಪ್ರಗತಿ ವರದಿ ಕೊಡಬೇಕಾಗುತ್ತದೆ. ಆದರೆ ನಕಲಿ ದಾಖಲೆ ನೀಡಿ ಕೇಂದ್ರದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದೆ ಎಂದು ಹೇಳಿದರು.
ಕೇಂದ್ರದ ವಿಶೇಷ ಅನುದಾನಕ್ಕೆ fake utilisation certificate ಸಲ್ಲಿಸಿರುವ ಬಗ್ಗೆ ಸಿಎಂ ಸ್ಪಷ್ಟನೆ ಕೊಡಬೇಕು. ಸಣ್ಣ ನೀರಾವರಿ ಇಲಾಖೆಯಿಂದ ನಕಲಿ ಯುಟಿಲೈಸೇಷನ್ ಸರ್ಟಿಫಿಕೇಟ್ ಕೊಡಲಾಗಿದೆ ಎಂದು ಅವರು ಆಗ್ರಹಿಸಿದರು.
ವಿಶೇಷ ಅನುದಾನ ಬೇರೆ ಯೋಜನೆಗಳಿಗೆ ಬಳಕೆ
ಕೇಂದ್ರದ ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ಬೇರೆ ಯೋಜನೆಗಳಿಗೆ ಬಳಕೆ ಮಾಡಿ ಕೇಂದ್ರದ ಮಾರ್ಗಸೂಚಿ ಉಲ್ಲಂಘಿಸಿದೆ. ಆದರೆ ನಕಲಿ ಬಳಕೆ ಪ್ರಮಾಣ ಪತ್ರ ಕಳಿಸಿ ಮಾರ್ಗಸೂಚಿ ಅನುಸರಿಸಿದೆ ಎಂದು ಹೇಳಿದೆ ಎಂದು ಅವರು ಆರೋಪಿಸಿದರು.
ಕೃಷ್ಣಭಾಗ್ಯ ಜಲನಿಗಮದಿಂದಲೂ, ವಿಶ್ವೇಶ್ವರಯ್ಯ ಜಲನಿಗಮದಿಂದಲೂ ಇದೇ ರೀತಿ ನಕಲಿ ಯುಟಿಲೈಸೇಷನ್ ಸರ್ಟಿಫಿಕೇಟ್ ಕೊಡಲಾಗಿದೆ. ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಬಂದಿದ್ದು 273 ಕೋಟಿ ರೂ. ಈ ಪೈಕಿ ಆರ್ಥಿಕ ಇಲಾಖೆ ಕೋರಿಕೆ ಮೇರೆಗೆ 132 ಕೋಟಿ ರೂ ಮೊತ್ತದಷ್ಟು ಯುಟಿಲೈಸೇಷನ್ ಸರ್ಟಿಫಿಕೇಟ್ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ವೈಫಲ್ಯ, ಭ್ರಷ್ಟಾಚಾರ ಮುಚ್ಚಿ ಹಾಕಲು ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ. ಈ ಸರ್ಕಾರ ಎಲ್ಲ ವರ್ಗದ ಜನರಿಗೆ ಘೋರ ಅನ್ಯಾಯ ಮಾಡಿದೆ. ಇಲಾಖೆಗಳಿಗೆ ಕೇಂದ್ರದ ವಿಶೇಷ ಅನುದಾನ ಕೊಟ್ಟೇ ಇಲ್ಲ. ಅನುದಾನ ಕೊಡದಿದ್ರೂ ಆ ಇಲಾಖೆಗಳ ಮೇಲೆ ಒತ್ತಾಯ ಹಾಕಿ ನಕಲಿ ಯುಟಿಲೈಸೇಷನ್ ಸರ್ಟಿಫಿಕೇಟ್ ಸಲ್ಲಿಕೆ ಮಾಡಲಾಗಿದೆ. ಈ ಫೇಕ್ ಯುಟಿಲೈಸೇಷನ್ ಸರ್ಟಿಫಿಕೇಟ್ಗೆ ಸಿಎಂ, ಡಿಸಿಎಂ ಇಬ್ಬರೂ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.


