ಒಂದೇ ಕುಟುಂಬದ 7 ಮಂದಿ ಕಾರಿನಲ್ಲಿ ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಹರಿಯಾಣದ ಪಂಚಕುಲದ ಸೆಕ್ಟರ್ 27ರಲ್ಲಿ ಡೆಹ್ರಾಡೂನ್ನಲ್ಲಿ ನಡೆದಿದೆ.
ಪ್ರವೀಣ್ ಮಿತ್ತಲ್ (42) ಅವರ ಪತ್ನಿ, ಪೋಷಕರು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಮಗ ಮೃತಪಟ್ಟವರು. ಪಂಚಕುಲದ ಸೆಕ್ಟರ್27ರಲ್ಲಿ ಸೋಮವಾರ ರಾತ್ರಿ ಪಾರ್ಕ್ ಮಾಡಲಾಗಿದ್ದ ಕಾರಿನಲ್ಲಿ 6 ಮಂದಿ ಅಸ್ವಸ್ಥರಾಗಿ ಪರದಾಡುತ್ತಿದ್ದರು.
ಕಾರಿನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ವಿಚಾರಿಸಿದಾಗ ಆತ, ನಾನು ಸಾಲದ ಸುಳಿಯಲ್ಲಿ ಸಿಲುಕಿದ್ದೇನೆ. ಹಾಗಾಗಿ ನನ್ನ ಕುಟುಂಬದವರೆಲ್ಲರೂ ವಿಷ ಸೇವಿಸಿದ್ದೇವೆ. ಇನ್ನು 5 ನಿಮಿಷದಲ್ಲಿ ನಾನೂ ಸಾಯುತ್ತೇನೆ ಎಂದು ಹೇಳಿದ್ದಾಗಿ ಪ್ರತ್ಯಕ್ಷ ದರ್ಶಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯರ ಮಾಹಿತಿ ಮೇರಿಎಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರಾದರೂ ಅಷ್ಟರಲ್ಲಿ ಕಾಲ ಮಿಂಚಿದ್ದು, 7 ಮಂದಿ ಕೂಡ ದಾರಿ ಮಧ್ಯೆದಲ್ಲೇ ಅಸುನೀಗಿದ್ದಾರೆ.
ಪ್ರವೀಣ್ ಮಿತ್ತಲ್ ಕುಟುಂಬವು ಪಂಚಕುಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುವಾಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಿನಲ್ಲಿ ಸಿಕ್ಕ ಡೆತ್ನೋಟ್ನಲ್ಲಿ ಸಾಲಭಾದೆಯಿಂದ ಕುಟುಂಬಸ್ಥರೆಲ್ಲರು ಆತ್ಮಹತ್ಯೆ ಮಾಡಿಕೊಂಡಿದ್ದೇವೆ ಎಂದು ಬರೆಯಲಾಗಿದೆ.
ಪ್ರವೀಣ್ ಮಿತ್ತಲ್ ಆತ್ಮಹತ್ಯೆಗೂ ಕೆಲವೇ ದಿನಗಳ ಮುನ್ನ ಸೋದರ ಸಂಬಂಧಿ ಜೊತೆ ಮಾತನಾಡಿದ್ದು, ಸುಮಾರು 20 ಕೋಟಿ ರೂ. ಸಾಲ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಸೋದರ ಸಂಬಂಧಿ ಸಂದೀಪ್ ಅಗರ್ ವಾಲ್ ತಮ್ಮ ಅಂತಿಮ ಕ್ರಿಯೆಗಳನ್ನು ನಡೆಸಿಕೊಡಲಿ ಎಂದು ಮನವಿ ಮಾಡಿದ್ದಾರೆ.
ಕೆಲವು ವರ್ಷಗಳ ಹಿಂದೆ ಪ್ರವೀಣ್ ಮಿತ್ತಲ್ ಗುಜರಿ ಕಂಪನಿ ಆರಂಭಿಸಿದ್ದು, ಸಾಲದ ಕಂತನ್ನು ಸಮಯಕ್ಕೆ ಸರಿಯಾಗಿ ಪಾವತಿಸದ ಕಾರಣ ಬ್ಯಾಂಕ್ ಆಸ್ತಿಯನ್ನು ಜಫ್ತಿ ಮಾಡಿತ್ತು. ಇದರಿಂದ ಡೆಹ್ರಾಡೂನ್ ಗೆ ವಲಸೆ ಹೋಗಿದ್ದು, 6 ವರ್ಷಗಳಿಂದ ಕುಟುಂಬದ ಸಂಪರ್ಕವನ್ನೇ ಹೊಂದಿರಲಿಲ್ಲ. ಒಂದು ತಿಂಗಳ ಹಿಂದೆಯಷ್ಟೇ ಮನೆಗೆ ಮರಳಿದ್ದ ಎಂದು ತಿಳಿದು ಬಂದಿದೆ.
ಹೆಚ್ಚಿನ ತನಿಖೆಯನ್ನು ಕೈಗೊಂಡಿರುವುದಾಗಿ ಡಿಸಿಪಿ ಹಿಮಾದ್ರಿ ಕೌಶಿಕ್ ತಿಳಿಸಿದ್ದಾರೆ .ಘಟನಾ ಸ್ಥಳಕ್ಕೆ ಡಿಸಿಪಿ ಹಿಮಾದ್ರಿ ಕೌಶಿಕ್ ಹಾಗೂ ಪಂಚಕುಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಂಚಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



