ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಗಾಳಿ ಆಂಜನೇಯ ದೇವಸ್ಥಾನವನ್ನು ಸರಕಾರದ ಸುಪರ್ದಿಗೆ ಪಡೆದು ಕರ್ನಾಟಕ ಮುಜರಾಯಿ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ದೇವಸ್ಥಾನದಲ್ಲಿ ಭಾರೀ ಭ್ರಷ್ಟಾಚಾರ ಪತ್ತೆಯಾದ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಈ ಆದೇಶ ಹೊರಡಿಸಿದ್ದು, ಇಲಾಖೆಯ ಈ ಆದೇಶದ ಅನುಸಾರ ಇನ್ಮುಂದೆ ದೇವಸ್ಥಾನದ ಸಂಪೂರ್ಣ ಆಡಳಿತ ಮುಜರಾಯಿ ವ್ಯಾಪ್ತಿಗೆ ಒಳಪಡಲಿದೆ.
ಸರಕಾರವೇ ಇನ್ಮುಂದೆ ದೇವಸ್ಥಾನದ ಆಗುಹೋಗುಗಳನ್ನು ನೋಡಿಕೊಳ್ಳಲಿದೆ. ದೇವಸ್ಥಾನದ ಆಡಳಿತ ಮಂಡಳಿ ನಡೆಸಿದ ಅಕ್ರಮ ಚಟುವಟಿಕೆಗಳು ಮತ್ತು ದುರಾಡಳಿತದ ಹಿನ್ನೆಲೆಯಲ್ಲಿ ಸರಕಾರ ಈ ತೀರ್ಮಾನ ತೆಗೆದುಕೊಂಡಿದೆ.
ದೇವಸ್ಥಾನದಲ್ಲಿ ನಡೆದ ಕೆಲವು ಘಟನೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಆಯುಕ್ತರು ತನಿಖೆ ನಡೆಸಿದರು.
ತಬಿಖೆ ವೇಳೆ ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದರೂ ವರ್ಷಾಂತ್ಯದಲ್ಲಿ ಯಾವುದೇ ಮೊತ್ತ ದೇವಸ್ಥಾನದ ಖಾತೆಯಲ್ಲಿ ಉಳಿಯುತ್ತಿಲ್ಲ ಎನ್ನಲಾಗಿದೆ.
ಕಳೆದ 25 ವರ್ಷಗಳಿಂದ ದೇವಸ್ಥಾನದ ವಿಚಾರಕ್ಕೆ ಸಂಬಂಧಿಸಿ ಯಾವುದೇ ದಾಖಲೆಗಳನ್ನು ಇಟ್ಟಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಸರಕಾರ ಜುಲೈ 10ರಂದು ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ಆದೇಶ ಹೊರಡಿಸಿದೆ.


