ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೆಂದ್ರ ಪ್ರಧಾನ್ ರಾಜೀನಾಮೆ ಸೇರಿದಂತೆ ಮೂರು ಬೇಡಿಕೆಗಳನ್ನು ಈಡೇರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಹೋರಾಟಕ್ಕೆ ಕೊನೆಗೂ ಮಂಡಿಯೂರಿದೆ.
ಕಳೆದ 37 ದಿನಗಳಿಂದ ಸುದೀರ್ಘ ಹೋರಾಟ ನಡೆಸುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿ ಪಕ್ಷದ ನೇತೃತ್ವದಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಕೊನೆಗೂ ತಾರ್ಕಿಕ ಅಂತ್ಯ ಲಭಿಸಿದ್ದು, ಶನಿವಾರ ಸಂಜೆಯಿಂದಲೇ ಪ್ರತಿಭಟನೆ ಹಿಂಪಡೆಯಲಾಗಿದೆ.
ನೀಟ್ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ತೆರೆಬಿದ್ದಿದೆ. ಸೋನಮ್ ವಾಂಗ್ಚಕ್ ಉಪವಾಸ ಸತ್ಯಾಗ್ರಹವನ್ನು ಶುಕ್ರವಾರ ಕೊನೆಗಾಣಿಸಿದ್ದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಕೆಲವೇ ಗಂಟೆಗಳ ನಂತರ, ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಶ್ ರಾಂಕಾ ಸಿಜೆಪಿ ನಿಯೋಗವು ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೊಂದಿಗೆ 3ನೇ ಸುತ್ತಿನ ಮಾತುಕತೆ ಯಶಸ್ವಿಯಾಗಿ ನಡೆಯಿತು.
ಮಾತುಕತೆ ವೇಳೆ ಕಾಕ್ರೋಚ್ ಜನತಾ ಪಾರ್ಟಿ ಇಟ್ಟಿದ್ದ 5 ಪ್ರಮುಖ ಬೇಡಿಕೆಗಳ ಪೈಕಿ ಮೊದಲ ಹಾಗೂ ಪ್ರಮುಖವಾದ ಬೇಡಿಕೆ ಆಗಿದ್ದು ಧರ್ಮೆಂದ್ರ ಪ್ರಧಾನ್ ರಾಜೀನಾಮೆ. ಮಾತುಕತೆಗೂ ಮುನ್ನವೇ ಧರ್ಮೆಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರಿಂದ ಉಳಿದ ನಾಲ್ಕು ಬೇಡಿಕೆಗಳ ಬಗ್ಗೆ ಮಾತ್ರ ಚರ್ಚಿಸಲಾಯಿತು.
ಸಭೆಯ ನಂತರ ಮಾತನಾಡಿದ ಕೇಂದ್ರ ಸಚಿವರು ಮತ್ತು ಸಿಜೆಪಿ ನಾಯಕರ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ಬೇಡಿಕೆಗಳಿಗೂ ಮಣಿದ ಕಾರಣ ತತ್ ಕ್ಷಣದಿಂದಲೇ ಹಿಂಪಡೆಯುವುದಾಗಿ ಘೋಷಿಸಿದರು.
ಸಿಜೆಪಿ ವಕ್ತಾರ ಸೌರವ್ ದಾಸ್ ಮಾತನಾಡಿ, “ನೀಟ್ ಅಕ್ರಮದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡಬೇಕೆಂಬ ಬೇಡಿಕೆಯನ್ನು ನಿಯಮಗಳು ಮತ್ತು ಕಾಯ್ದೆಗಳಿಗೆ ಒಳಪಟ್ಟು ಗೌರವಪೂರ್ವಕ ಪರಿಹಾರವನ್ನು ಒದಗಿಸುವುದಾಗಿ ಸರ್ಕಾರ ಒಪ್ಪಿಕೊಂಡಿದೆ ಎಂದರು.
ವ್ಯಾಪಕ ಶಿಕ್ಷಣ ಮತ್ತು ಪರೀಕ್ಷಾ ಸುಧಾರಣೆಗಳನ್ನು ಒಳಗೊಂಡ 5 ಅಂಶಗಳ ಬೇಡಿಕೆಗಳ ಚಾರ್ಟರ್ ಅನ್ನು ನಾವು ಸರ್ಕಾರದ ಮುಂದಿಟ್ಟಿದ್ದೇವೆ. ಶಿಕ್ಷಣ ಸುಧಾರಣೆಗಳ ಕುರಿತು ಒಟ್ಟಾಗಿ ಕೆಲಸ ಮಾಡಲು 4 ವಾರಗಳ ಒಳಗೆ ಸರ್ಕಾರ ಹಾಗೂ ಸಿಜೆಪಿ ನಿಯೋಗವು ಮತ್ತೊಮ್ಮೆ ಸಭೆ ಸೇರಲಿದೆ ಎಂದು ಅವರು ಹೇಳಿದರು.
ಸಿಜೆಪಿ ವಕ್ತಾರ ಅಶುತೋಷ್ ರಾಂಕಾ ಮಾತನಾಡಿ, ಪ್ರತಿಭಟನಾಕಾರರ ಮೇಲೆ ದಾಖಲಾದ ಎಲ್ಲಾ ಎಫ್ ಐಆರ್ ವಾಪಸ್ ಪಡೆಯಲು ಕೇಂದ್ರ ಒಪ್ಪಿದೆ. ಅಲ್ಲದೇ ಈ ಬಗ್ಗೆ ದಾಖಲಾಗಿರುವ ಪ್ರಕರಣಗಳ ದಾಖಲೆ ನಮಗೆ ನೀಡಲಿದ್ದು, ಮುಂದೆಯೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವ ಭರವಸೆ ನೀಡಿದೆ ಎಂದು ಹೇಳಿದರು.



