ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ) ನಡೆದಿರುವ ನೇಮಕಾತಿ ಅಕ್ರಮದ ಪ್ರಮುಖ ಆರೋಪಿಗಳಾದ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆಯನ್ನು ಜಾರಿ ನಿರ್ದೇಶನಾಲಯ (ಇಡಿ)ಅಧಿಕಾರಿಗಳು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ನ್ಯಾಯಾಂಗ ಬಂಧನದಲ್ಲಿರುವ ಇವರಿಬ್ಬರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಪಿಎಸ್ಸಿ ನೇಮಕಾತಿ ಅಕ್ರಮದ ವಿಚಾರಣೆಗೆ ಅಸಹಾಕಾರ ನೀಡಿದ ಹಿನ್ನೆಲೆಯಲ್ಲಿ ಇಬ್ಬರನ್ನು ಶುಕ್ರವಾರ ಬಂಧಿಸಿರುವ ಇಡಿ ಅಧಿಕಾರಿಗಳು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಗ್ಯಾನೇಂದ್ರ ಕುಮಾರ್ ಹಾಗೂ ಬಸವರಾಜ್ ಕನ್ನಾಳೆಯನ್ನು ಸಿಐಡಿ ಅಧಿಕಾರಿಗಳ ಬಂಧಿಸಿದ ಬಳಿಕ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು,ಜೈಲಿಗೆ ಹೋಗಿದ್ದ ಇವರಿಬ್ಬರನ್ನು ಇಡಿ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ವಿಚಾರಣೆ ನಡೆಸಿದ್ದರು. ಆದರೆ ಇವರಿಬ್ಬರು ವಿಚಾರಣೆಗೆ ಅಸಹಾಕಾರ ನೀಡಿದ ಹಿನ್ನೆಲೆ ರಾತ್ರಿ ಜೈಲಿನಲ್ಲಿಯೇ ಇಬ್ಬರನ್ನು ಬಂಧಿಸಿ ಇಡಿ ಕೇಂದ್ರ ಕಚೇರಿಗೆ ಕರೆದೊಯ್ದು ವಿಚಾರಣೆ ಕೈಗೊಂಡು
ವಿಚಾರಣೆಯ ಬಳಿಕ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಇಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡು ಮತ್ತೆ ವಿಚಾರಣೆ ನಡೆಸಲಾಗುತ್ತದೆ ಎಂದು ಇಡಿ ಮೂಲಗಳು ತಿಳಿಸಿವೆ.
ಕೆಪಿಎಸ್ ಸಿ ನೇಮಕಾತಿ ಹಗರಣದಲ್ಲಿ ಅಭ್ಯರ್ಥಿಗಳಿಂದ ಕೋಟ್ಯಾಂತರ ರೂ ಲಂಚ ವಸೂಲಿ ಮಾಡಿದ ಅಕ್ರಮ ಹಣದಿಂದ ಜ್ಞಾನೇಂದ್ರ ಅವರು ತಮ್ಮ ಗೆಳತಿಗೆ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಖರೀದಿಸಿ ನೀಡಿದ್ದರು,ಅಲ್ಲದೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ತಮ್ಮ ಅಣ್ಣನ ಹೆಸರಿನಲ್ಲಿ ಐಷಾರಾಮಿ ಎಲ್ಲಾ ಖರೀದಿಸಿರುವುದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಕೆಪಿಎಸ್ಸಿ 400 ಹುದ್ದೆಗಳ ನೇಮಕಾತಿಗೆ ನಡೆಸಿದ ಈ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಅಭ್ಯರ್ಥಿಗಳಿಂದ ಹಣ ಪಡೆಯುವುದು ಹಾಗೂ ಉತ್ತರ ಪತ್ರಿಕೆಗಳಲ್ಲಿನ ಅಕ್ರಮಗಳ ಆರೋಪಗಳು ತನಿಖೆಯ ಕೇಂದ್ರಬಿಂದುವಾಗಿವೆ.
ಗಂಗ್ವಾರ್ ಅವರು 2024ರಿಂದ ಮಾ. 2026 ರವರೆಗೆ ಕೆಪಿಎಸ್ಸಿ ಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಸಿಐಡಿ ತನಿಖೆಯಲ್ಲಿ ಕೆಲವು ಅಭ್ಯರ್ಥಿಗಳು ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಾವತಿಸಿದ್ದರೆಂಬ ಆರೋಪಗಳು ಬೆಳಕಿಗೆ ಬಂದಿವೆ. ತನಿಖಾಧಿಕಾರಿಗಳ ಪ್ರಕಾರ, 24 ಅಭ್ಯರ್ಥಿಗಳಿಂದ 12 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹವಾಗಿರಬಹುದು ಎಂಬ ಅಂಶವೂ ತನಿಖೆಯಲ್ಲಿ ಕಂಡುಬಂದಿದೆ. ಪ್ರಶ್ನೆಪತ್ರಿಕೆ ಪರೀಕ್ಷೆಗೆ ಮುನ್ನವೇ ಮಧ್ಯವರ್ತಿಗಳಿಗೆ ತಲುಪಿತ್ತು ಎಂಬ ಆರೋಪವೂ ಗೊತ್ತಾಗಿದೆ.
ಹಣದ ವಹಿವಾಟಿನ ಆರೋಪ:
ತನಿಖೆಯಲ್ಲಿ ಬಸವರಾಜ್ ಕನ್ನಾಳೆ ಪ್ರಮುಖ ಮಧ್ಯವರ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಕೆಲವು ಅಭ್ಯರ್ಥಿಗಳಿಂದ ಹಣವನ್ನು ಬ್ಯಾಂಕ್ ವರ್ಗಾವಣೆ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಪಡೆದಿರುವುದರ ಕುರಿತು ಸಿಐಡಿ ಮಾಹಿತಿ ಸಂಗ್ರಹಿಸಿದೆ. 12 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅಕ್ರಮ ಅನುಕೂಲ ಪಡೆಯಲು ಹಣ ಪಾವತಿಸಿರುವ ಬಗ್ಗೆ ತನಿಖೆಯಲ್ಲಿ ಸುಳಿವು ಸಿಕ್ಕಿದೆ ಎಂದು ವರದಿಯಾಗಿದೆ. ಕೆಲವು ಅಭ್ಯರ್ಥಿಗಳಿಂದ ಪಡೆದ ಹಣದ ಒಂದು ಭಾಗವನ್ನು 52 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ವಜ್ರಾಭರಣ ಖರೀದಿಗೆ ಬಳಸಲಾಗಿದೆ ಎಂಬ ಆರೋಪವೂ ಇದೆ.
ವಿಮಾನ ಪ್ರಯಾಣಕ್ಕೆ ಸಾಥ್:
ಈ ನಡುವೆ ಐಎಎಸ್ ಜ್ಞಾನೇಂದ್ರಕುಮಾರ್ ಗಂಗ್ವಾರ್ ನವದೆಹಲಿ ಉತ್ತರಪ್ರದೇಶ ಸೇರಿದಂತೆ ದೇಶಾದ್ಯಂತ ಸುತ್ತಾಡಲು ವಿಮಾನ ಪ್ರಯಾಣಕ್ಕೆ ಸುಮಾರು 11 ಲಕ್ಷ ರೂ. ವ್ಯಯಿಸಿದ್ದು, ಈ ವೆಚ್ಚವನ್ನು ಬಸವರಾಜ ಕನ್ನಾಳೆ ಭರಿಸಿದ್ದ ಎಂಬುದು ಸಿಐಡಿ ತನಿಖೆಯಲ್ಲಿ ಗೊತ್ತಾಗಿದೆ.
ಕಳೆದ 2024ರಲ್ಲಿ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿ ಜ್ಞಾನೇಂದ್ರ ಕುಮಾರ್ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಹಳೆಯ ಗೆಳೆಯ ಬಸವರಾಜ ಕನ್ನಾಳೆ ನೇಮಕಾತಿಗಳಲ್ಲಿ ಅಕ್ರಮವೆಸಗುವ ಯೋಜನೆ ರೂಪಿಸಿಕೊಂಡಿದ್ದನು. ಪಶುವೈದ್ಯಾಧಿಕಾರಿ ನೇಮಕಾತಿ ಸೇರಿ ಇತರೆ ನೇಮಕಾತಿಗಳಲ್ಲಿ ಅಭ್ಯರ್ಥಿಗಳೊಂದಿಗೆ ಡೀಲ್ ಕುದುರಿಸಲು ಹಾಗೂ ಪ್ರಶ್ನೆಪತ್ರಿಕೆಗಳ ಸೋರಿಕೆ ಸಂಬಂಧ ಜ್ಞಾನೇಂದ್ರ ಕುಮಾರ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದ ಎನ್ನುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.
ಹಲವು ಬಾರಿ ಭೇಟಿ:
ಐಎಎಸ್ ಅಧಿಕಾರಿಯ ಇಷ್ಟಾರ್ಥಗಳನ್ನು ಪೂರೈಸಿ ವಿಶ್ವಾಸ ಗಳಿಸಿದ್ದ ಕನ್ನಾಳೆ ಅಲ್ಲದೇ ಹಲವು ಬಾರಿ ಜ್ಞಾನೇಂದ್ರ ಕುಮಾರ್ ಮನೆಗೆ ಭೇಟಿ ನೀಡಿ, ನೇಮಕಾತಿಯ ಡೀಲ್ ಕುರಿತಂತೆ ಮಾತುಕತೆ ನಡೆಸಿದ್ದ ಎನ್ನಲಾಗಿದೆ.
ಡೀಲ್ ಯಶಸ್ವಿಯಾದ ನಂತರ ಜ್ಞಾನೇಂದ್ರಕುಮಾರ್ ಹೊಸದಿಲ್ಲಿ, ಉತ್ತರಪ್ರದೇಶ ಸೇರಿದಂತೆ ದೇಶದ ನಾನಾ ಭಾಗಗಳಿಗೆ ಪ್ರವಾಸ ಕೈಗೊಳ್ಳಲು ಕನ್ನಾಳೆಯೇ ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದ್ದ. ವಿಮಾನ ಪ್ರಯಾಣದ ಟಿಕೆಟ್ಗಳ ಮೊತ್ತ ಸುಮಾರು 11 ಲಕ್ಷ ರೂ. ಆಗಿದ್ದು, ಅಷ್ಟೂ ಹಣವನ್ನು ಕನ್ನಾಳೆ ಭರಿಸಿದ್ದಾನೆ. ಇದಕ್ಕೆ ಪೂರಕ ಪುರಾವೆಗಳು ಸಿಕ್ಕಿವೆ ಎಂದು ತನಿಖಾ ಮೂಲಗಳು ತಿಳಿಸಿವೆ.



