ಹಾಸನ: ಕೆಲ ದಿನಗಳ ಹಿಂದೆ ಸಕಲೇಶಪುರ ಸಮೀಪ ಮಹಿಳೆಯೊಬ್ಬರನ್ನು ತುಳಿದು ಕೊಂದಿದ್ದ ಪುಂಡಾನೆ ಸೆರೆಗೆ 5 ಆನೆಗಳ ತಂಡ ಆಗಮಿಸಿದೆ.
ಧನಂಜಯ, ಲಕ್ಷ್ಮಣ, ಶ್ರೀರಾಮ, ಅಯ್ಯಪ್ಪ ಮತ್ತು ಸುಗ್ರೀವನಿರುವ ಕುಮ್ಕಿ ಆನೆಗಳ ತಂಡವು ಕುಮ್ಕಿ ಆನೆಗಳ ತಂಡ ಭೈರಾಪುರಕ್ಕೆ ಆಗಮಿಸಿದ್ದು, ಶನಿವಾರದಿಂದ ಕಾರ್ಯಾಚರಣೆ ಕೈಗೊಂಡಿದೆ.
ಸ್ಥಳೀಯರ ಒತ್ತಾಯಕ್ಕೆ ಮಣಿದು ಕೊಡಗು ಭಾಗದಿಂದ ಬಂದ ಈ ನರಹಂತಕ ಆನೆಯನ್ನು ಸೆರೆಹಿಡಿಯಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದರು.
ಇತ್ತೀಚೆಗೆ ಆಲೂರು ಸಮೀಪ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಶೋಭ ಅವರ ಮೇಲೆ ಕಾಡಾನೆ ದಾಳಿ ಮಾಡಿ, ಕೊಂದು ಹಾಕಿತ್ತು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮೃತದೇಹ ಮೇಲೆತ್ತಲು ಬಿಡದೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಗೆ ಸಾಥ್ ನೀಡಿದ್ದ ಶಾಸಕ ಸಿಮೆಂಟ್ ಮಂಜು ಸ್ಥಳದಿಂದಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕರೆ ಮಾಡಿದ್ದರು. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುಂತೆ ಒತ್ತಾಯಿಸಿದ್ದರು.
ಸ್ಥಳಕ್ಕೆ ಆಗಮಿಸಿ ಹೋರಾಟಗಾರರ ಮನವಿ ಆಲಿಸಿ ಸಚಿವರ ಗಮನಕ್ಕೆ ತರುವುದಾಗಿ ಡಿಸಿ ಕೆ.ಎಸ್.ಲತಾಕುಮಾರಿ ಭರವಸೆ ನೀಡಿದ್ದರು



