ಶಿವಮೊಗ್ಗ: ವೇಗವಾಗಿ ಬಂದ ಬೈಕ್ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದರಿಂದ ನವ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಸಂಭವಿಸಿದೆ.
ಭದ್ರಾವತಿಯ ಶಂಕರಘಟ್ಟ ಗ್ರಾಮದ ಬಿಆರ್ಪಿ ಬಳಿ ಸಂಭವಿಸಿದ ಅಪಘಾತದಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ತಾಲೂಕಿನ ಅರವನಹಳ್ಳಿಯ ಗೌಳಿಗೆರೆ ಕ್ಯಾಂಪ್ ಬಾಬು (30) ಹಾಗೂ ಪತ್ನಿ ಸಾವಿತ್ರಿ (26) ಮೃತಪಟ್ಟಿದ್ದಾರೆ.
ಶಿವಮೊಗ್ಗದ ವೆಜ್ ಫುಡ್ ಕೋರ್ಟ್ ಹೊಟೇಲ್ ನಲ್ಲಿ ಬಾಬು ತಂದೂರಿ ರೊಟ್ಟಿ ತಯಾರಕನಾಗಿದ್ದು, ಸಾವಿತ್ರಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಕಳೆದ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿತ್ತು.
ಭಾನುವಾರ ರಾತ್ರಿ ಫುಡ್ ಕೋರ್ಟ್ನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಅಪಘಾತ ಸಂಭವಿಸಿದೆ. ಹುಣಸೆಘಟ್ಟ ಜಂಕ್ಷನ್ನಿಂದ ಶಂಕರಘಟ್ಟ ಕಡೆ ಹೋಗುವಾಗ ರಸ್ತೆಯಲ್ಲಿ ಲೋಡ್ ತುಂಬಿದ ಲಾರಿಯೊಂದು ಇವರ ಬೈಕ್ ಮುಂದೆ ಸಾಗುತ್ತಿತ್ತು.
ಅಲ್ಲಿ ರಸ್ತೆ ಸ್ವಲ್ಪ ಎತ್ತರವಿದ್ದು, ಲಾರಿ ನಿಧಾನವಾಗಿ ಚಲಿಸಲು ಆರಂಭಿಸಿದೆ. ಆಗ ವೇಗದಲ್ಲಿದ್ದ ಬೈಕ್ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದಂಪತಿ ರಸ್ತೆಗೆ ಬಿದ್ದು, ಗಂಭೀರ ಗಾಯಗಳೊಂದಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಭದ್ರಾವತಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಇಬ್ಬರು ಸ್ನೇಹಿತರು ದುರ್ಮರಣ:
ಚಿಕ್ಕಬಳ್ಳಾಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿನ ಸಾಧಲಿ ಕ್ರಾಸ್ ಸಮೀಪ ಕ್ಯಾಂಟರ್ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ.
ಚೇಳೂರು ಗ್ರಾಮದ ನಿವಾಸಿ ನರಸಿಂಹಪ್ಪ (45) ಹಾಗೂ ನಾರಾಯಣಸ್ವಾಮಿ (44) ಮೃತ ದುರ್ದೈವಿಗಳು.
ಸ್ನೇಹಿತನನ್ನು ಮಾತನಾಡಿಸುವ ಸಲುವಾಗಿ ಇಬ್ಬರೂ ಬೈಕ್ ನಲ್ಲಿ ಪೆರೇಸಂದ್ರ ಕಡೆಗೆ ಬರುತಿದ್ದ ಸಂದರ್ಭದಲ್ಲಿ ಬಾಗೇಪಲ್ಲಿ ಕಡೆಯಿಂದ ಬೆಂಗಳೂರಿಗೆ ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಬೈಕ್ ಸವಾರರು ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಈ ಸಂಬಂಧ ತಾಲ್ಲೂಕಿನ ಪೆರಸಂದ್ರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.



