ಬೆಂಗಳೂರು: ರಾಮನಗರದ ನಗರ ಪ್ರದೇಶ ಮಾತ್ರವಲ್ಲ, ಇಡೀ ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೊಸ ರೂಪ ನೀಡಬೇಕು ಎಂಬುದು ನನ್ನ ಸಂಕಲ್ಪ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಮಾರ್ ಹೇಳಿದ್ದಾರೆ.
ರಾಮನಗರದ ನಗರಸಭೆ ಅಧ್ಯಕ್ಷರಾದ ಕೆ.ಶೇಷಾದ್ರಿ ನೇತೃತ್ವದಲ್ಲಿ ರಾಮನಗರದ ರೈತ ಮುಖಂಡರು ಹಾಗೂ ನಾಗರಿಕರು ಬುಧವಾರ ಸಿಎಂ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ರಾಮನಗರದ ಸಿಎಂಸಿ ಕಚೇರಿ ಬಳಿ ವಾಣಿಜ್ಯ ಸಂಕೀರ್ಣ, ಅಂಬೇಡ್ಕರ್ ಭವನದ ನವೀಕರಣ, ರಾಮನಗರ ರೈಲ್ವೇ ನಿಲ್ದಾಣದಿಂದ ಸಿಎಂಸಿ ವ್ಯಾಪ್ತಿಯ ರಸ್ತೆ ಅಗಲೀಕರಣ, ವಿವಿಧ ವಾರ್ಡ್ ಗಳ ವಿಸ್ತರಣೆ ಅಭಿವೃದ್ಧಿ ಕಾರ್ಯ ಸೇರಿದಂತೆ ತಾಲ್ಲೂಕಿನಲ್ಲಿ 772.70 ಕೋಟಿ ಮೊತ್ತದ 18 ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೊಸ ರೂಪ ಈಗ ಮಾಡದಿದ್ದರೆ, ಮತ್ತ್ಯಾವ ಸಮಯದಲ್ಲೂ ಮಾಡಲು ಸಾಧ್ಯವಿಲ್ಲ ಎಂಬ ಅರಿವಿದೆ. ಇದನ್ನು ಹಂತ ಹಂತವಾಗಿ ಮಾಡುತ್ತೇವೆ ಎಂದರು.
ಈಗಾಗಲೇ ವೈದ್ಯಕೀಯ ವಿವಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಕ್ಷೇತ್ರ ಹಾಗೂ ಜಿಲ್ಲೆ ಈ ಹಿಂದೆ ಹೇಗಿತ್ತು ಎಂದು ನಾನು ಈಗ ಚರ್ಚೆ ಮಾಡುವುದಿಲ್ಲ, ಹೇಳಿದರೆ ಅದು ರಾಜಕೀಯವಾಗುತ್ತದೆ. ಈಗ ನಮ್ಮ ಮೇಲೆ ಜವಾಬ್ದಾರಿ ಇದೆ. ಈ ಭಾಗದ ಅನುಕೂಲಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಬಡವರಿಗೆ ಯಾವ ರೀತಿ ನಿವೇಶನ ಹಂಚಿಕೆ ಮಾಡಬೇಕು ಎಂದು ಈಗಾಗಲೇ ನಿಮ್ಮ ಶಾಸಕರಾದ ಇಕ್ಬಾಲ್ ಹುಸೇನ್ ಅವರಿಗೆ ಮಾರ್ಗದರ್ಶನ ನೀಡಿದ್ದೇನೆ. ಮೊದಲ ಹಂತದಲ್ಲೇ ನಿವೇಶನ ಹಂಚಿಕೆಗೆ ಶೀಘ್ರದಲ್ಲೇ ಹಣ ಬಿಡುಗಡೆ ಮಾಡಲಾಗುವುದು. ಚನ್ನಪಟ್ಟಣ, ಮಾಗಡಿ, ರಾಮನಗರ, ಕನಕಪುರ ಎಲ್ಲವೂ ನನ್ನ ಕ್ಷೇತ್ರವೇ. ರಾಮನಗರ ಜಿಲ್ಲೆಯ ಕೇಂದ್ರ ಕಚೇರಿಯಾಗಿದ್ದು, ಅದಕ್ಕೆ ಎಷ್ಟು ಗೌರವ ನೀಡಬೇಕೋ ನೀಡುತ್ತೇವೆ ಎಂದು ತಿಳಿಸಿದರು.
ವಿರೋಧ ಪಕ್ಷದವರಿಂದ ಸಹಿಸಲು ಆಗುತ್ತಿಲ್ಲ
ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ ನಂತರ ಹೇಗೆ ಗೌರವ ಬಂದಿದೆ ಎಂದು ನೀವು ಗಮನಿಸಿದ್ದೀರಿ. ಜನ ನಿಮ್ಮನ್ನು ಹೇಗೆ ನೋಡುತ್ತಿದ್ದಾರೆ. ನಿಮ್ಮ ಆಸ್ತಿ ಮೌಲ್ಯ ಎಷ್ಟಾಗಿದೆ ನಿಮಗೆ ಗೊತ್ತಿದೆ. ನೀವುಗಳು ಎಲ್ಲಾ ಜನರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿ. ಬೇರೆ ಪಕ್ಷದವರು ಸಂಪರ್ಕ ಮಾಡಲು ಇಚ್ಛಿಸುತ್ತಿದ್ದಾರೆ. ಅವರನ್ನು ಸೇರಿಸಿಕೊಂಡು ಮುಂದಿನ ಚುನಾವಣೆ ಸುಗಮವಾಗಿ ನಡೆಯುವಂತೆ ಮಾಡಿ. ನಾವು ಅಧಿಕಾರಕ್ಕೆ ಬಂದಿರುವುದನ್ನು ವಿರೋಧ ಪಕ್ಷದವರಿಂದ ಸಹಿಸಲು ಆಗುತ್ತಿಲ್ಲ. ನಿಮಗೆ ಒಳ್ಳೆಯದಾಗುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ನನ್ನ ಹೆಸರು ಹೇಳಿಕೊಂಡು ಕೆಲವರು ಏಜೆಂಟರಂತೆ ಬರುತ್ತಾರೆ. ಅಂತಹವರಿಂದ ಹುಷಾರಾಗಿರಿ. ನಿಮ್ಮ ಊರಿನ ಅಭಿವೃದ್ಧಿ ವಿಚಾರ ಹೊರತುಪಡಿಸಿ, ಅಧಿಕಾರಿಗಳು, ಗುತ್ತಿಗೆದಾರರ ವಿಚಾರಕ್ಕೆ ತಲೆಕೆಡಿಸಿಕೊಳ್ಳಬೇಡಿ. ಸಿಎಂ ಜಿಲ್ಲೆ ಎಂದರೆ ಯಾವತ್ತೂ ಇಲ್ಲದ ನೆಂಟರು ಕೂಡಲೇ ಹುಟ್ಟಿಕೊಳ್ಳುತ್ತಾರೆ. ಅಂತಹವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬೇಡಿ. ಅಂತಹವರು ಬಂದು ಏನಾದರೂ ಕೇಳಿದರೆ, ನೀವುಂಟು, ಅವರುಂಟು ಎಂದು ಹೇಳಿ ಎಂದು ಸಲಹೆ ನೀಡಿದರು.
ನಾನೇ ಬಂದು ಧನ್ಯವಾದ ತಿಳಿಸುವೆ
ನನಗೆ ಅಭಿನಂದನೆ ಸಲ್ಲಿಸಲು ನೀವು ಬಂದಿದ್ದೀರಿ. ನೀವು ಬರುವುದಕ್ಕಿಂತ ನಿಮ್ಮ ಶಾಸಕರು ಆಸ್ಪತ್ರೆಯಿಂದ ಬಂದ ನಂತರ ನಾನೇ ನಿಮ್ಮ ಕ್ಷೇತ್ರಕ್ಕೆ ಬರುತ್ತೇನೆ. ನಿಮ್ಮ ಕ್ಷೇತ್ರದ 3 ಕಡೆ ಸಭೆಗಳನ್ನು ಮಾಡಿ ಕೃತಜ್ಞತೆ ಸಲ್ಲಿಸುತ್ತೇನೆ. ನೀವು ನನಗೆ ಸನ್ಮಾನ ಮಾಡುವುದಕ್ಕಿಂತ, ನಾನು ನಿಮಗೆ ಸನ್ಮಾನ ಮಾಡಬೇಕು. ನಾನು ಸಧ್ಯ ಇಲಾಖೆಗಳ ಪರಿಶೀಲನಾ ಸಭೆ ಮಾಡುತ್ತಿದ್ದೇನೆ. ನಂತರ ಪರಿಷತ್ ನೂತನ ಸದಸ್ಯರ ಪ್ರಮಾಣವಚನ ಕಾರ್ಯಕ್ರಮವಿದೆ. ಮುಂದಿನ ತಿಂಗಳು ಅಧಿವೇಶನ ಕರೆಯಬೇಕಾಗಿದೆ. ಈ ಮಧ್ಯೆ ಸಚಿವ ಸಂಪುಟ ವಿಸ್ತರಣೆ ಮಾಡಬೇಕು. ಅದಕ್ಕಾಗಿ ದೆಹಲಿಗೆ ಹೋಗಬೇಕಾಗಿದೆ ಎಂದು ತಿಳಿಸಿದರು.
ನೀವು ಪಕ್ಷ ಸಂಘಟನೆ ಮಾಡುವ ಬಗ್ಗೆ ಆಸಕ್ತಿ ವಹಿಸಿ. ನಿಮ್ಮ ಗುರಿ 2028 ಆಗಿರಬೇಕು. ಬಿಡದಿಯಲ್ಲಿ ಟೌನ್ ಶಿಪ್ ಯೋಜನೆ ನಾನು ಮಾಡಿದ್ದೆನಾ? ಬಿಡದಿ ಕೈಗಾರಿಕಾ ಪ್ರದೇಶ ನಾನು ಮಾಡಿಲ್ಲವ ದಲ? ಅವರೇ ಮಾಡಿ, ಈಗ ವಿರೋಧ ಮಾಡುತ್ತಿದ್ದಾರೆ. ಬಿಡದಿ ಟೌನ್ ಶಿಪ್ ಆದರೆ ರಾಮನಗರ, ಮಾಗಡಿ, ಕನಕಪುರದವರಿಗೂ ಲಾಭವೇ ಅಲ್ಲವೇ? ದೇವನಹಳ್ಳಿಗೆ ವಿಮಾನ ನಿಲ್ದಾಣ ಬಂದ ಕಾರಣಕ್ಕೆ ದೊಡ್ಡಬಳ್ಳಾಪುರದವರೆಗೂ ಅನುಕೂಲವಾಗಿಲ್ಲವೇ? ಟೌನ್ ಶಿಪ್ ಅನ್ನು ಅವರೇ ಡಿನೋಟಿಫಿಕೇಶನ್ ಮಾಡಬಹುದಾಗಿತ್ತು, ಮಾಡಲಿಲ್ಲ. ಚರ್ಚೆ ಮಾಡಿ ಬನ್ನಿ ಎಂದು ನಾನು ಕರೆದರೆ, ನಾನು ಬಿಡದಿಗೆ ಹೋಗಬೇಕಂತೆ. ನಾನು ಹೋಗುವುದು ಸರಿಯೇ? ಅವಕಾಶ ಇದ್ದಾಗ ಮಾಡಲಿಲ್ಲ ಎಂದು ಕುಟುಕಿದರು.
ಕ್ಷೇತ್ರ ಬಿಟ್ಟವರಿಂದ ರಾಜಕೀಯ
ಕ್ಷೇತ್ರವನ್ನೇ ಬಿಟ್ಟು ಹೋದವರು ಈಗ ಮತ್ತೆ ಬಂದು ವಿರೋಧ ಮಾಡುತ್ತಿದ್ದಾರೆ. ನಮ್ಮ ಕೈಲಾದಷ್ಟು ಒಳ್ಳೆಯ ಕೆಲಸ ನಾವು ಮಾಡುತ್ತೇವೆ. ನಾನು ಯಾವ ಊರನ್ನು ಒಕ್ಕಲೆಬ್ಬಿಸುವುದಿಲ್ಲ. ಎಲ್ಲಾ ಊರುಗಳು ಅಲ್ಲೇ ಇರುತ್ತವೆ. ಆ ಊರುಗಳು ಅಭಿವೃದ್ಧಿಯಾಗುತ್ತವೆ. ಆ ಭಾಗದ ಜನರಿಗೆ ಪರಿಹಾರ ನೀಡಲಾಗುವುದು. ಎರಡು ಮೂರು ಹಳ್ಳಿಗಳನ್ನು ಸೇರಿ ಅಧಿಸೂಚನೆ ಹೊರಡಿಸುತ್ತಿದ್ದೇವೆ. ಕೆಲವರು ರಾಜಕಾರಣ ಮಾಡುತ್ತಿದ್ದಾರೆ. ಹಾಸನದ ರೈತರು ಬಂದು ಅವರ ಕಷ್ಟ ಹೇಳಿಕೊಂಡರು. ಹಾಸನ ಪಟ್ಟಣ ಪಕ್ಕ ಭೂಸ್ವಾಧೀನಪಡಿಸಿಕೊಂಡಿದ್ದು ಯಾಕೆ? ತಮ್ಮ ಕಾರ್ಯಕರ್ತನ 11 ಎಕರೆ ಬಿಟ್ಟು ಉಳಿದವುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಈಗ ಚರ್ಚೆ ಬೇಡ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಈ ಹಿಂದೆ ದಳ ಹಾಗೂ ಬಿಜೆಪಿ ಕಾಲದಲ್ಲಿದ್ದ ಈ ಯೋಜನೆ ನಾನು ಮುಂದುವರಿಸುತ್ತಿದ್ದೇನೆ ಎಂದು ವಿವರಿಸಿದರು.



