ಬೆಂಗಳೂರು: ಕೊಡಗು, ಬಳ್ಳಾರಿ, ಚಿತ್ರದುರ್ಗ, ಮೈಸೂರು, ಶಿವಮೊಗ್ಗ ಸೇರಿ ರಾಜ್ಯದ 35 ಕಡೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು 8 ಮಂದಿ ಅಧಿಕಾರಿಗಳನ್ನು ಬಲೆಗೆ ಕೆಡವಿ 36 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಹಚ್ಚಿದ್ದಾರೆ.
ಬಲೆಗೆ ಬಿದ್ದಿರುವ 8 ಮಂದಿ ಅಧಿಕಾರಿಗಳಿಂದ ಕೋಟ್ಯಂತರ ಮೌಲ್ಯದ ನಗದು, ಚಿನ್ನಾಭರಣಗಳು,ಐಷಾರಾಮಿ ವಸ್ತುಗಳು ವಶಪಡಿಸಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ.
ಬಳ್ಳಾರಿ, ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದ ಎಇಇ ಪುಟ್ಟಸ್ವಾಮಿ,ಬೀದರ್ ಜಿಲ್ಲೆಯ ಪಶು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಸುರೇಶ್,ಬಳ್ಳಾರಿಯ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಣ್ಣ,ಚಿತ್ರದುರ್ಗದಲ್ಲಿ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಸುಶೀಲಮ್ಮ ಸೇರಿ 8 ಮಂದಿ ಭ್ರಷ್ಟ ಅಧಿಕಾರಿಗಳ ಕಚೇರಿ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಕಳೆದ ವರ್ಷ ಹಿಂದೆ ವಿಆರ್ಎಸ್ ಪಡೆದಿದ್ದ ಚಿತ್ರದುರ್ಗದಲ್ಲಿ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಸುಶೀಲಮ್ಮ ಅವರ ಮೆದೇಹಳ್ಳಿ ಬಡಾವಣೆಯ ಮನೆ, ಹಿರಿಯೂರು ತಾಲೂಕಿನ ಯಾದಲಘಟ್ಟ ಗ್ರಾಮದ ತೋಟದ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಬಳ್ಳಾರಿಯ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶಿವಣ್ಣ ಅವರ . ಲ ಕಚೇರಿ,ಸಿದ್ಧಾರ್ಥ್ ನಗರದ ಮನೆ ಸೇರಿ ನಾಲ್ಕು ಕಡೆ ದಾಳಿ ನಡೆಸಿ ಸರ್ಕಾರಿ ಬೊಲೆರೋ ಕಾರನ್ನೂ ಬಿಡದೇ ಪರಿಶೀಲನೆ ನಡೆಸಿದ್ದಾರೆ.
ಲೋಕೋಪಯೋಗಿ ಇಲಾಖೆ ಎಇಇ ರೇವಣ್ಣ ಅವರ ಮೈಸೂರಿನ ಕಚೇರಿ ಹಾಗೂ ಮಂಡ್ಯದ ಎರಡು ನಿವಾಸದಲ್ಲಿ ದಾಳಿ ನಡೆಸಲಾಗಿದೆ.ಶಿವಮೊಗ್ಗದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ.ಕೆ.ಆರ್ ಅವರ
ಶಿಕಾರಿಪುರದ ಚೆನ್ನಕೇಶವ ನಗರದ ಮನೆ ತರಲಘಟ್ಟ ಬಳಿಯ 4 ಎಕರೆ ತೋಟ ಹಾಗೂ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಲಾಗಿದೆ.
ಶೋಭಾ ಅವರ ಒಡೆತನದ ಸಾಗರ ತಾಲೂಕಿನ ಅಚಾಪುರ ಬಳಿಯ ಶಾಲೆ, ನವಿಲೆ ಬಳಿಯ ಮನೆ, ಬಿಸಿಎಂ ಜಿಲ್ಲಾ ಕಚೇರಿ ಮೇಲೂ ದಾಳಿ ಮಾಡಲಾಗಿದೆ.
ಬಿಸಿಎಂ ಇಲಾಖೆಯ ರಾಘವೇಂದ್ರ ಎಂಬವರ ಮನೆ ಮೇಲೆ ಸಹ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಶಿವಮೊಗ್ಗ ನಗರದ ಗೋಪಾಳ ಬಳಿಯ ಚಾಲುಕ್ಯನಗರದಲ್ಲಿನ ಮನೆಯಲ್ಲಿ ಬೆಳಗ್ಗೆಯಿಂದಲೂ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.



