ಬೆಂಗಳೂರು: ಕೇರಳದಲ್ಲಿ ಸರ್ಕಾರ ರಚನೆ ಮತ್ತು ಹೊಸ ಮುಖ್ಯಮಂತ್ರಿ ಆಯ್ಕೆಯನ್ನು ಅಸಮಾಧಾನ ವಿವಾದ ಉಂಟಾಗದಂತೆ ಕೈಗೊಂಡ ಕಾಂಗ್ರೆಸ್ ಹೈಕಮಾಂಡ್, ರಾಜ್ಯದಲ್ಲಿ ಸುದೀರ್ಘ ಕಾಲದಿಂದ ನೆನಗುದಿಗೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಎರ್ಪಟ್ಟಿರುವ ನಾಯಕತ್ವ ಸ್ಪರ್ಧೆಗೆ ಅಂತ್ಯಹಾಡಲು ಮುಂದಾಗಿದೆ.
ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ, ಕರ್ನಾಟಕದ ನಾಯಕತ್ವ ಗೊಂದಲ ಬಗೆಹರಿಸಲು ಕಾಂಗ್ರೆಸ್ ಸಮಯಾವಕಾಶ ಕೇಳಿತ್ತು. ಈಗ ಚುನಾವಣೆಗಳು ಮುಗಿದು ಫಲಿತಾಂಶವೂ ಹೊರಬಿದ್ದಿದ್ದು, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿದೆ.
ಇದರಿಂದ ಕಾಂಗ್ರೆಸ್ ಹೈಕಮಾಂಡ್, ಕರ್ನಾಟಕದತ್ತ ತಿರುಗಿ ನೋಡುವ ಸಾಧ್ಯತೆ ದಟ್ಟವಾಗಿದೆ.
ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ 10 ದಿನಗಳು ಕಳೆದರೂ ಮುಖ್ಯಮಂತ್ರಿ ಆಯ್ಕೆ ಮಾಡದಿದ್ದ ಕಾಂಗ್ರೆಸ್, ತೀವ್ರ ಹಗ್ಗಜಗ್ಗಾಟದ ಬಳಿಕ ಅಂತಿಮವಾಗಿ ಆಗಿ ಘೋಷಿಸಿದೆ. ಆದರೆ ಸಿಎಂ ಪಟ್ಟದ ಆಕಾಂಕ್ಷಿಗಳಾಗಿದ್ದ ಕೆಸಿ ವೇಣುಗೋಪಾಲ್ ಮತ್ತು ರಮೇಶ್ ಚೆನ್ನತ್ತಿಲ ಅವರಲ್ಲಿ ಅಸಮಾಧಾನ ಉಂಟಾಗದಂತೆ ಮದ್ದು ಅರೆಯು ವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದೆ.
ಇದು ಕರ್ನಾಟಕ ನಾಯಕತ್ವ ವಿವಾದವನ್ನೂ ಬಗೆಹರಿಸುವ ಉತ್ಸಾಹವನ್ನು ಹೈಕಮಾಂಡ್ ನಾಯಕರಲ್ಲಿ ತುಂಬಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ನಾಯಕತ್ವ ಕಿತ್ತಾಟ ಮತ್ತೊಮ್ಮೆ ತೀವ್ರಗೊಳ್ಳುವ ನಿರೀಕ್ಷೆಯಿದೆ.
ಸಿದ್ದರಾಮಯ್ಯ ಸಂಪುಟ ಪುನರ್ರಚನೆ ಮತ್ತು ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿಗೆ ಒತ್ತಾಯಿಸುತ್ತಿದ್ದರೆ, ಡಿಕೆ ಶಿವಕುಮಾರ್ ಅವರು ಪ್ರಸ್ತುತ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮಹತ್ವಾಕಾಂಕ್ಷೆಯನ್ನು ತೋರ್ಪಡಿಸಿದ್ದಾರೆ.
ಈ ಬೆಳವಣಿಗೆಗಳು ಇಬ್ಬರನ್ನೂ ಕರೆದು ಮಾತನಾಡಿಸಲು ಸಕಾಲ ಎಂಬ ಸಂದೇಶವನ್ನು ಹೈಕಮಾಂಡ್ಗೆ ರವಾನಿಸಿದೆ. ಈ ಹಂತದಲ್ಲಿ ಸಂಪುಟ ಪುನರ್ರಚನೆಯು ಡಿಕೆ ಶಿವಕುಮಾರ್ ಅವರ ನಾಯಕತ್ವ ಪರಿವರ್ತನೆಯ ಆಶಯವನ್ನು ದುರ್ಬಲಗೊಳಿಸಬಹುದು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.
ಸಿದ್ದರಾಮಯ್ಯ ಆಡಳಿತ ಮತ್ತು ಶಾಸಕಾಂಗ ಪಕ್ಷದ ಮೇಲೆ ತಮ್ಮ ಹಿಡಿತವನ್ನು ಬಲಪಡಿಸುವಲ್ಲಿ ಯಶಸ್ವಿಯಾದರೆ, ಅದು ಡಿಕೆಶಿ ಬಣಕ್ಕೆ ಭಾರೀ ಹಿನ್ನಡೆಯಾದಂತೆಯೇ ಸರಿ ಎಂಬುದು ಹಲವರ ಅನಿಸಿಕೆ. ಇದೇ ಕಾರಣಕ್ಕೆ ಈ ಬಣ ಸರ್ಕಾರ ರಚನೆಯ ಸಂದರ್ಭದಲ್ಲಿ ಮಾಡಿಕೊಳ್ಳಲಾಗಿದೆ ಎನ್ನಲಾದ ಅಧಿಕಾರ ಹಂಚಿಕೆ ತಿಳುವಳಿಕೆ ಬಗ್ಗೆ ಪದೇ ಪದೇ ನೆನಪಿಸುತ್ತಿದೆ.
ಸಂಪುಟ ಪುನರ್ರಚನೆ:
ಅದೇ ಸಮಯದಲ್ಲಿ, ಸಿದ್ದರಾಮಯ್ಯ ಪಾಳೆಯ ಸಂಪುಟ ಪುನರ್ರಚನೆಯನ್ನು ಬಯಸುತ್ತಿದೆ. ಈ ಮೂಲಕ ನಾಯಕತ್ವ ಬದಲಾವಣೆಯನ್ನು ಮುಂದೂಡುವುದು ಅದರ ತಂತ್ರಗಾರಿಕೆ. ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಸಂದರ್ಭದಲ್ಲಿ, ಸಚಿವ ಸ್ಥಾನಗಳನ್ನು ಬಯಸುವ ಹಲವಾರು ಕಾಂಗ್ರೆಸ್ ಶಾಸಕರು ಲಾಬಿ ನಡೆಸುತ್ತಿರುವುದು ಪಕ್ಷದ ನಾಯಕತ್ವದ ಮೇಲೆ ಮತ್ತಷ್ಟು ಒತ್ತಡವನ್ನು ಹೆಚ್ಚಿಸುತ್ತಿದೆ. ಇದು ಕಾದು ನೋಡುವ ಸಿದ್ದರಾಮಯ್ಯ ಬಣದ ಆಲೋಚನೆಗೆ ಬಲ ತುಂಬಿದೆ.
ಮುಂದಿನ ಕೆಲವು ದಿನಗಳಲ್ಲಿ, ಸರ್ಕಾರದ ಸ್ಥಿರತೆ ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವ ನಿರೀಕ್ಷೆಯಿದೆ.
ಮುಂದಿನ ಮುಖ್ಯಮಂತ್ರಿ:
ಕೆಪಿಸಿಸಿ ಕಚೇರಿಯ ಹೊರಗೆ ಮತ್ತು ರಾಜ್ಯದ ಹಲವಾರು ಭಾಗಗಳಲ್ಲಿ ಡಿಕೆ ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಪೋಸ್ಟರ್ಗಳು ಕಾಣಿಸಿಕೊಂಡಿದ್ದು, ಕೆಲವು ಪೋಸ್ಟರ್ಗಳು ಅವರನ್ನು “ಕರ್ನಾಟಕದ ಮುಂದಿನ ಮುಖ್ಯಮಂತ್ರಿ” ಎಂದು ಉಲ್ಲೇಖಿಸಿವೆ. ಇದನ್ನು ಹೈಕಮಾಂಡ್ ಗಮನಿಸಿದೆ.
ಮೈಸೂರಿನಲ್ಲಿ ಡಿಕೆ ಶಿವಕುಮಾರ್ ಅವರ ಬೆಂಬಲಿಗರು ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವ ಹುಟ್ಟುಹಬ್ಬದ ಕೇಕ್ ಕತ್ತರಿಸಿ ಗಮನ ಸೆಳೆದಿದ್ದಾರೆ.
ಇದು ಸಿದ್ದರಾಮಯ್ಯ ಬಣದ ಚಿಂತೆ ಹೆಚ್ಚಿಸಿದ್ದು, ಸಂಪುಟ ಪುನರ್ರಚನೆಗೆ ಹೈಕಮಾಂಡ್ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿದೆ. ಆದರೆ ಈ ಬಾರಿ ನಾಯಕತ್ವ ಬದಲಾವಣೆ ವಿವಾದವನ್ನೇ ಬಗೆಹರಿಸಲು ಹೈಕಮಾಂಡ್ ಮನಸ್ಸು ಮಾಡಿದಂತಿದ್ದು, ಯಾರ ಕೈ ಮೇಲಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಸಿದ್ದರಾಮಯ್ಯ 6 ಬೇಡಿಕೆ:
2028ರವರೆಗೂ ಅಧಿಕಾರದಲ್ಲಿ ಮುಂದುವರೆಯುವ ಆಸೆ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಮುಂದೆ ಸಂಪುಟ ಪುನರ್ರಚನೆ, ಸಂಪುಟದಲ್ಲಿ ಹೊಸ ಶಾಸಕರಿಗೆ ಅವಕಾಶ, ಖಾಲಿ ಸಚಿವ ಸ್ಥಾನಗಳ ಭರ್ತಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸ್ಥಾನ ಖಚಿತಪಡಿಸಲು ಒತ್ತಾಯ, ನಾಯಕತ್ವದ ನಿರ್ಧಾರ ಶೀಘ್ರ ಇತ್ಯರ್ಥಕ್ಕೆ ಒತ್ತಾಯ,ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯವರೆಗೆ ಸೇರಿದಂತೆ 6 ಬೇಡಿಕೆಗಳನ್ನು ಮುಂದಿಟ್ಟಿದೆ.
5 ಪ್ರಮುಖ ಬೇಡಿಕೆ:
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬಣ ಕೂಡ ತಮ್ಮದೇ ಕೆಪಿಸಿಸಿ ಮುಖ್ಯಸ್ಥರಾಗಿ ಡಿಕೆಶಿ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷದ ದಾಖಲೆಯ ವಿಧಾನಸಭಾ ಗೆಲುವಿಗೆ ಮಾನ್ಯತೆ ಮತ್ತು ಪ್ರತಿಫಲ, ಈ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಡಿಕೆಶಿ ನಾಯಕತ್ವದ ಅರ್ಹತೆಗಳನ್ನು ಸ್ಥಾಪಿಸಲು ಸಮಯಾವಕಾಶ, ಡಿಕೆ ಶಿವಕುಮಾರ್ ನಾಯಕತ್ವದಲ್ಲಿ ಹೊಸ ಸಚಿವ ಸಂಪುಟ ರಚನೆ, ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಮುಖ್ಯಮಂತ್ರಿಯಾಗಿ ಬಡ್ತಿ ಪಡೆದರೆ ಬಿಟ್ಟುಕೊಡುವ ಇಚ್ಛೆ,ಅಧಿಕಾರ ಹಂಚಿಕೆಯ ಕುರಿತು ಹೇಳಲಾದ ಭರವಸೆಯನ್ನು ಗೌರವಿಸಲು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಸೇರಿ ಐದು ಬೇಡಿಕೆಗಳನ್ನು ಮುಂದಿಟ್ಟಿದೆ.
ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ನಾಯಕತ್ವ ಗೊಂದಲದ ಕುರಿತ ತನ್ನ ಅಂತಿಮ ನಿರ್ಧಾರವನ್ನು ವಿಳಂಬ ಮಾಡುವುದು ಸುರಕ್ಷಿತ ರಾಜಕೀಯ ತಂತ್ರವೆಂದು ಭಾವಿಸಿತ್ತು. ಆದಾಗ್ಯೂ, ಎರಡೂ ಬಣಗಳು ಒತ್ತಡ ಹೇರುತ್ತಲೇ ಬಂದಿದ್ದು, ಇದೀಗ ಕೇರಳದಲ್ಲಿ ನಾಯಕತ್ವ ಗೊಂದಲ ಬಗೆಹರಿಸಿದಂತೆ ಮಾಡಿದಂತಿದೆ.



