ಆನೆಗಳ ನಡುವೆ ನಡೆದ ಕಾಳಗದಲ್ಲಿ ಸಿಲುಕಿದ ಪ್ರವಾಸಕ್ಕೆ ಬಂದಿದ್ದ ಮಹಿಳೆ ಮೃತಪಟ್ಟ ಭೀಕರ ಘಟನೆ ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಸಂಭವಿಸಿದೆ.
ಚೆನ್ನೈ ಮೂಲದ ಜಿನ್ಶು (33) ಎಂಬ ಮಹಿಳೆ ಮದಗಜಗಳ ಕಾದಾಟಕ್ಕೆ ಸಿಲುಕಿ ಬಲಿಯಾಗಿದ್ದು, ಪತ್ನಿಯನ್ನು ಕಾಪಾಡಲು ಗಂಡ ಜೋಯೆಲ್ ಪ್ರಯತ್ನ ವಿಫಲವಾಗಿದ್ದು, ಕೈಯಲ್ಲಿ ಮಗು ಪಾರಾಗಿದೆ.
ಆನೆಗಳಿಗೆ ಸ್ನಾನ ಮಾಡಿಸುವ ಸಂದರ್ಭ ಅವುಗಳಿಗೆ ಆಹಾರ ಕೊಡುವುದು ಪ್ರವಾಸಿಗರಿಗೆ ಖುಷಿ ಕೊಡುವ ಸಂಗತಿ. ಇದೇ ರೀತಿ ತಮಿಳುನಾಡಿನಿಂದ ಬಂದಿದ್ದ ಜಿನ್ಶು ಸಹ “ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದಾಗ ಆಹಾರ ಕೊಡುವುದಕ್ಕಾಗಿ ಅಲ್ಲಿಗೆ ಹೋಗಿದ್ದಾರೆ. ಈ ವೇಳೆ ಅಲ್ಲಿ ಪಳಗಿಸಿದ್ದ 2 ಆನೆಗಳು ಏಕಾಏಕಿ ಕಾದಾಟ ಆರಂಭಿಸಿವೆ.
ಒಂದು ಆನೆ ಮತ್ತೊಂದು ಆನೆ ಮೇಲೆ ದಾಳಿ ಮಾಡಲು ಶುರು ಮಾಡಿದಾಗ, ಅಲ್ಲಿ ಇದ್ದ ಪ್ರವಾಸಿಗರು ಭಯಪಟ್ಟು ಓಡಲು ಪ್ರಯತ್ನಿಸಿದ್ದಾರೆ. ಈ ಗೊಂದಲದ ನಡುವೆ ಜಿನ್ಶು ಅವರು ಕೂಡ ಆತಂಕದಿಂದ ಓಡುವ ವೇಳೆ ಸಮತೋಲನ ಕಳೆದುಕೊಂಡು ನೀರಿನಲ್ಲಿ ಬಿದ್ದಿದ್ದಾರೆ. ಈ ವೇಳೆ ಆಕೆಯನ್ನು ರಕ್ಷಿಸುವುದು ಕಷ್ಟವಾಯಿತು. ನೀರಿನಲ್ಲಿ ಬಿದ್ದ ಜಿನ್ಶು ಅವರನ್ನು ಗಮನಿಸಿದ ಸ್ಥಳೀಯರು ತಕ್ಷಣ ನೀರಿಗೆ ಇಳಿದು ಅವರನ್ನು ಹೊರತೆಗೆಯಲು ಪ್ರಯತ್ನುಸಿದ್ದಾರೆ. ಜಿನ್ಶು ಅವರನ್ನು ನದಿಯಿಂದ ಹೊರಗೆ ತಂದು ಚಿಕಿತ್ಸೆಗಾಗಿ ಕರೆದೊಯ್ಯಲಾಯಿತಾದರೂ ಆಕೆ ಬದುಕುಳಿಯಲಿಲ್ಲ. ಈ ಘಟನೆ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂತರ ಕಾಯ್ದುಕೊಳ್ಳಲು ಸಚಿವರ ಸೂಚನೆ
ಪ್ರವಾಸಿಗರಿಗೆ ಆನೆ ಮೈ ತೊಳೆಯಲು ಅವಕಾಶ ನೀಡುವುದು, ಅವರಿಂದ ಬೆಲ್ಲ, ಬಾಳೆಹಣ್ಣು ಇತ್ಯಾದಿ ಆಹಾರ ತಿನ್ನಿಸುವುದನ್ನು ನಿರ್ಬಂಧಿಸಲು ಕ್ರಮ ವಹಿಸುವಂತೆ ಮತ್ತು ವನ್ಯಜೀವಿಗಳಿಂದ ಪ್ರವಾಸಿಗರು ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವಂತೆ ಕ್ರಮ ವಹಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.



