ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹೇಳುವುದು ಒಂದು ಮಾಡುವುದು ಇನ್ನೊಂದು. ಇದರಿಂದ ದೇಶಕ್ಕೆ ದೊಡ್ಡ ಹಾನಿಯಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಖರ್ಗೆ, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಯನ್ನು ಮೋದಿ ಅವರು ಹೆಚ್ಚಿಸುತ್ತಿದ್ದಾರೆ. ಹೊರಗಡೆ ನಾವು ಒಳ್ಳೆಯ ಸರ್ಕಾರವನ್ನು ನೀಡಿದ್ದೇವೆ ಎಂದು ಹೇಳುವ ಮೂಲಕ ಇಬ್ಬಗೆಯ ನಿಲುವು ತಾಳುತ್ತಾರೆ ಎಂದು ಲೇವಡಿ ಮಾಡಿದರು.
ಭಾರತ ದೇಶವನ್ನು ಆರ್ಥಿಕವಾಗಿ ಬಹಳಷ್ಟು ಬಲಿಷ್ಠವಾಗಿ ಮಾಡಿದ್ದೇವೆ ಅಂತಾ ಹೇಳಿಕೊಂಡು ಬಂದರು. ಈಗ ನೋಡಿದರೆ ಪ್ರತಿಯೊಂದರಲ್ಲೂ ಕೂಡ ಬೆಲೆ ಏರಿಕೆಯಾಗುತ್ತಿದೆ, ಬಡವರು ಮಧ್ಯಮ ವರ್ಗದವರಿಗೆ ಕಷ್ಟವಾಗುತ್ತಿದೆ ಎಂದು ಟೀಕಿಸಿದರು.
ಶ್ರೀಮಂತರು ಶ್ರೀಮಂತರಾಗಿಯೇ ಇದ್ದಾರೆ, ಬಡವರು ಬಡವರಾಗಿಯೇ ಇದ್ದಾರೆ. ಯಾರಿಗೂ ಕೂಡ ಸಮಾಧಾನ, ನೆಮ್ಮದಿ ಜೀವನ ನಡೆಸುವುದಕ್ಕೆ ಆಗುತ್ತಾ ಇಲ್ಲ. ಅದಕ್ಕೆ ನಾವು ಪದೇ ಪದೆ ಮೋದಿ ಅವರಿಗೆ ಹೇಳುತ್ತಿದ್ದೇವೆ. ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಆರ್ಥಿಕ ವ್ಯವಸ್ಥೆ ನಾಶವಾಗುತ್ತಿದೆ. ದಯವಿಟ್ಟು ಇದರ ಬಗ್ಗೆ ಗಮನ ಹರಿಸಿ, ಊರು ಊರು ತಿರುಗಿದರೆ ಏನು ಆಗಲ್ಲ. ಮೋದಿ ಅವರು ವಿದೇಶ ಪ್ರವಾಸ ಕೈಗೊಂಡು ಹಣ ತರುತ್ತಿದ್ದಾರಾ ಎಂದು ಪ್ರಶ್ನಿಸಿದರು.
ಮೋದಿ ಅವರು ಹೇಳೋದು ಒಂದು ನಡೆದುಕೊಳ್ಳುದು ಇನ್ನೊಂದು ರೀತಿ. ನಾನು ಅಷ್ಟು ತಂದೆ ಇಷ್ಟು ತಂದೆ ಎನ್ನುತ್ತಾರೆ, ಈಗ ನೂರಾರು ದೇಶ ಅಡ್ಡಾಡಿದ್ದಾರೆ. ಎಲ್ಲಿಂದ ಎಷ್ಟು ಹಣ ತಂದಿದ್ದಾರೆ ಎನ್ನುವುದನ್ನು ಹೇಳಬೇಕು? ಅಷ್ಟು ಹಣ ಬಂದಿದ್ದರೆ ಎಲ್ಲಿ ಹೋಯ್ತು?. ಉದ್ಯೋಗ ಇಲ್ಲ, ಹಣದುಬ್ಬರ ಕಡಿಮೆ ಆಗುತ್ತಿಲ್ಲ, ಪೆಟ್ರೋಲ್ ಡೀಸೆಲ್, ಗ್ಯಾಸ್ ಇವಂತೂ ಬಿಡಿ. ಅವರು ಯಾವಾಗ ಅಧಿಕಾರಕ್ಕೆ ಬಂದಿದ್ದಾರೆ ಅಂದಿನಿಂದ ಇಲ್ಲಿಯವರೆಗೆ ಏರುತ್ತಲೇ ಇದೆ ಎಂದು ಕಿಡಿಕಾರಿದರು.
ಕಡಿಮೆ ಅಂತೂ ಮಾಡಿಲ್ಲ, ಕಚ್ಚಾ ತೈಲ ಬೆಲೆ ಕಡಿಮೆ ಆದರೂ ಕೂಡ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಿಲ್ಲ. ಮೋದಿ ಅವರ ಆಡಳಿತ ಹದಗೆಟ್ಟು ಹೋಗಿದೆ, ಕೆಲವು ಜನರು ಅಲ್ಲಿ ಇಲ್ಲಿ ತೋರಿಸ್ತಾರೆ. ಯಾವ ಪೆಟ್ರೋಲ್ ಬಂಕ್ ಅವರಿಗೆ ಸಂಬಂಧಪಟ್ಟಿದ್ದು ಇರುತ್ತದ್ದೋ ಅಲ್ಲಿ ಹೋಗಿ ಅಭಿಪ್ರಾಯ ತೆಗೆದುಕೊಳ್ತಾರೆ. ನಿಮ್ಮ ಫಾರಿನ್ ಪಾಲಿಸಿ ಏನಾಯ್ತು?. ಅನೇಕ ದೇಶಗಳಿಗೆ ಹೋಗ್ತೀರಿ. ಇದರ ಬಗ್ಗೆ ನಿಮಗೆ ಮಾಹಿತಿ ಸಿಕ್ಕಿಲ್ವ?. ಯಾವುದೇ ಒಂದು ಮಾಹಿತಿ ಇಲ್ಲದೇ ದೇಶದ ಸ್ಥಿತಿ ಕೆಳಮಟ್ಟಕ್ಕೆ ತಂದಿದ್ದು ಬಹಳ ದುರ್ದೈವದ ಸಂಗತಿ ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ಎಲ್ಲವನ್ನೂ ಕೂಡ ದೇವರ ಹೆಸರಿನಲ್ಲಿ ಮಾಡಿಕೊಂಡು ಹೋಗಿ ದೇಶ ಹಾಳು ಮಾಡುವುದಕ್ಕೆ ಆಗಲ್ಲ. ಎಲ್ಲರೂ ದೇವರನ್ನು ನಂಬುತ್ತಾರೆ, ಪೂಜೆ ಪುನಸ್ಕಾರ ಮಾಡ್ತಾರೆ, ಆ ಮಾತು ಬೇರೆ. ಪ್ರತಿಯೊಂದು ಇಂತಹದು ಏನಾದರೂ ಬಂದರೆ ಡಿವೈಡ್ ಮಾಡೋದು, ಮಧ್ಯದಲ್ಲಿ ಬೇರೆ ವಿಚಾರ ಎಳೆದು ತರೋದು. ಈಗ ಜನ ರೊಚ್ಚಿಗೆದ್ದಿದ್ದಾರೆ. ಬೇರೆ ವಿಚಾರ ತಂದು ತಣ್ಣಗೆ ಮಾಡುವ ಕೆಲಸ ಅವರು ಮಾಡುತ್ತಿದ್ದಾರೆ. ಆದರೆ ಈಗ ಅದು ಆಗೋದಿಲ್ಲ, ಈಗಲಾದರೂ ಗಮನ ಕೊಡಬೇಕು. ಜನರ ಸಮಸ್ಯೆಗಳನ್ನು ಪರಿಹರಿಸೋ ಕೆಲಸ ಮಾಡಬೇಕು. ಸಮಸ್ಯೆ ತಿಳಿದುಕೊಂಡು ಪರಿಹಾರ ಕೊಟ್ಟರೆ ಜನ ನೆಮ್ಮದಿಯಾಗಿರುತ್ತಾರೆ. ಬರೀ ಭಾಷಣ ಮಾಡಿಕೊಂಡು ಹೋದರೆ ಏನು ಆಗೋದಿಲ್ಲ ಎಂದು ಖರ್ಗೆ ಅವರು ಆಗ್ರಹಿಸಿದರು.



