ಡಿಸಿಎಂ ಜಿ. ಪರಮೇಶ್ವರ್ ಗೆ ಕಂದಾಯ ಇಲಾಖೆ, ಪ್ರಿಯಾಂಕ್ ಖರ್ಗೆ ಗೆ ಗೃಹ, ಯತೀಂದ್ರ ಸಿದ್ದರಾಮಯ್ಯಗೆ ನಗರಾಭಿವೃದ್ಧಿ ಸೇರಿದಂತೆ 13 ಸಚಿವರಿಗೆ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಾತೆ ಹಂಚಿಕೆ ಮಾಡಿದ್ದಾರೆ.
ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಗುರುವಾರ ಖಾತೆ ಹಂಚಿಕೆ ಮಾಡಿದ್ದು, ವರಿಷ್ಠರ ಸೂಚನೆಯಂತೆ ಖಾತೆ ಹಂಚಿಕೆ ಆಗಿದ್ದು, ರಾಜ್ಯಪಾಲರಿಗೆ ಪಟ್ಟಿ ಕಳುಹಿಸಿಕೊಡಲಾಗಿದೆ ಎಂದು ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದರು. ಈ ಮೂಲಕ ಖಾತೆ ಹಂಚಿಕೆ ಅಂತಿಮಗೊಳಿಸಿರುವ ಸೂಚನೆ ನೀಡಿದರೂ, ವಿವರಗಳನ್ನು ನೀಡಲಿಲ್ಲ.
ಮೂಲಗಳ ಪ್ರಕಾರ ರಾಮಲಿಂಗಾರೆಡ್ಡಿ ಮತ್ತು ಸತೀಶ್ ಜಾರಕಿಹೊಳಿ ತಮ್ಮ ಖಾತೆಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ರಾಮಲಿಂಗಾರೆಡ್ಡಿಗೆ ಜಲಸಂಪನ್ಮೂಲ ಖಾತೆ ನೀಡಲಾಗಿದೆ. ಆದರೆ ಅವರು ನನಗೆ ರಾಜ್ಯದ ಜಲ ವಿಷಯಗಳ ಬಗ್ಗೆ ಅರಿವು ಇಲ್ಲ. ಬೆಂಗಳೂರಿನವನಾದ ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ರಾಮಲಿಂಗಾರೆಡ್ಡಿ ಅವರ ಬೇಡಿಕೆಗೆ ಡಿಕೆ ಶಿವಕುಮಾರ್ ಮಣಿಯದ ಕಾರಣ ನಾನು ಶಾಸಕನಾಗಿಯೇ ಇರುತ್ತೇನೆ. ಯಾವುದೇ ಖಾತೆ ವಹಿಸಿಕೊಳ್ಳುವುದಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿ ರಾಮಲಿಂಗಾರೆಡ್ಡಿ ಹೊರ ಹೋಗಿದ್ದಾರೆ ಎಂದು ಹೇಳಲಾಗಿದೆ.
ಸತೀಶ್ ಜಾರಕಿಹೊಳಿಗೆ ಲೋಕೋಪಯೋಗಿ ಖಾತೆ, ಪರಮೇಶ್ವರ್ ಗೆ ಕಂದಾಯ ಜೊತೆ ಕ್ರೀಡೆ ಮತ್ತು ಯುವ ಸಬಲೀಕರಣ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಪ್ರಿಯಾಂಕ್ ಖರ್ಗೆ ಗೆ ಪ್ರತಿಷ್ಠಿತ ಗೃಹ ಹಾಗೂ ಐಟಿ ಬಿಟಿ ಹಾಗೂ ಬೈರತಿ ಸುರೇಶ್ ಗೆ ಸಾರಿಗೆ ಇಲಾಖೆ ನೀಡಲಾಗಿದೆ.
ಕೆಎಚ್ ಮುನಿಯಪ್ಪಗೆ ಹಿಂದಿನ ಸರ್ಕಾರದಲ್ಲಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಯುಟಿ ಖಾದರ್ ಗೆ ಆರೋಗ್ಯ ಇಲಾಖೆ, ಶರಣುಪ್ರಕಾಶ್ ಪಾಟೀಲ್ ಗೆ ವೈದ್ಯಕೀಯ ಶಿಕ್ಷಣ ಹಾಗೂ ಈಶ್ವರ್ ಖಂಡ್ರೆಗೆ ಗ್ರಾಮೀಣಾಭಿವೃದ್ಖಿ ಖಾತೆಗಳನ್ನು ನೀಡಲಾಗಿದ್ದು, ಉಳಿದ ಖಾತೆಗಳನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ಸಚಿವರ ಖಾತೆ ವಿವರ ಇಲ್ಲಿದೆ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಳಿಸಿಕೊಂಡಿರುವ ಖಾತೆಗಳು
ಹಣಕಾಸು ಇಲಾಖೆ, ಡಿಪಿಎಆರ್ & ಇತರ ಎಲ್ಲಾ ಖಾತೆಗಳು
ಡಿಸಿಎಂ ಡಾ.ಜಿ.ಪರಮೇಶ್ವರ್ – ಕಂದಾಯ ಇಲಾಖೆ ಹಾಗೂ ಕ್ರೀಡಾ ಹಾಗೂ ಯುವಜನ ಸಬಲೀಕರಣ ಇಲಾಖೆ
ಪ್ರಿಯಾಂಕ್ ಖರ್ಗೆ- ಗೃಹ ಸಚಿವ, ಐಟಿ ಬಿಟಿ ಇಲಾಖೆ
ಕೆ.ಜೆ.ಜಾರ್ಜ್- ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ
ಎಂ.ಬಿ.ಪಾಟೀಲ್- ಬೃಹತ್ & ಮಧ್ಯಮ ಕೈಗಾರಿಕೆ ಇಲಾಖೆ
ಸತೀಶ್ ಜಾರಕಿಹೊಳಿ- ಲೋಕೋಪಯೋಗಿ ಇಲಾಖೆ
ಕೃಷ್ಣ ಭೈರೇಗೌಡ- ಬೆಂಗಳೂರು ನಗರಾಭಿವೃದ್ಧಿ(ಜಿಬಿಎ)
ರಾಮಲಿಂಗಾರೆಡ್ಡಿ- ಜಲಸಂಪನ್ಮೂಲ ಇಲಾಖೆ
ಕೆ.ಹೆಚ್.ಮುನಿಯಪ್ಪ- ಆಹಾರ & ನಾಗರಿಕ ಸರಬರಾಜು ಇಲಾಖೆ
ಭೈರತಿ ಸುರೇಶ್- ಸಾರಿಗೆ ಇಲಾಖೆ
ಯು.ಟಿ.ಖಾದರ್- ಆರೋಗ್ಯ ಇಲಾಖೆ
ಡಾ.ಯತೀಂದ್ರ ಸಿದ್ದರಾಮಯ್ಯ- ನಗರಾಭಿವೃದ್ಧಿ ಇಲಾಖೆ
ಶರಣಪ್ರಕಾಶ್ ಪಾಟೀಲ್- ವೈದ್ಯಕೀಯ ಶಿಕ್ಷಣ ಇಲಾಖೆ
ಈಶ್ವರ್ ಖಂಡ್ರೆ- ಗ್ರಾಮೀಣಾಭಿವೃದ್ಧಿ ಇಲಾಖೆ



