ಬೆಂಗಳೂರು : ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸದ ಅಧಿಕಾರಿಗಳು ಗಣತಿ ನಮೂನೆ (ಎನ್ಯುಮರೇಷನ್ ಫಾರಂ) ಅರ್ಜಿ ಭರ್ತಿ ಮಾಡುವ ಮೂಲಕ ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಮಂಗಳವಾರ ಬೆಳಿಗ್ಗೆ ಸದಾಶಿವನಗರದಲ್ಲಿನ ಸಿಎಂ ಡಿ. ಕೆ. ಶಿವಕುಮಾರ್ ಮನೆಗೆ ಬಿಎಲ್ಒಗಳು ಭೇಟಿ ನೀಡಿ ಎನ್ಯುಮರೇಷನ್ ಫಾರಂ ನೀಡಿದರು. ಸಿಎಂ ಅವರ ತವರೂರು ಕನಕಪುರ ಒಳಗೊಂಡ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಉಪಸ್ಥಿತರಿದ್ದರು.
ಈ ವೇಳೆ ಎಸ್ ಐಆರ್ ಕುರಿತು ಸಿಎಂ ಮಾಹಿತಿ ಪಡೆದರು. ನನ್ನ ಫೋನಿನಲ್ಲಿ ಆ್ಯಪ್ ಡೌನ್ ಲೋಡ್ ಮಾಡಿ ತೋರಿಸಿ ಎಂದು ಸಿಎಂ ಡಿಕೆಶಿ ಕೋರಿದರು. ಜೊತೆಗೆ ತಮ್ಮ ವೋಟರ್ ಲಿಸ್ಟ್, ಕುಟುಂಬದ ಮತದಾರ ಪಟ್ಟಿ ಎಲ್ಲವನ್ನು ಪರಿಶೀಲನೆ ನಡೆಸಿದರು. ಆನ್ಲೈನ್ನಲ್ಲಿ ಹೇಗೆ ಪ್ರಕ್ರಿಯೆ ಮಾಡೋದು ಎಂದು ಕೇಳಿ ತಿಳಿದುಕೊಂಡರು.
ಆನ್ಲೈನ್ನಲ್ಲಿ ಜನರು ಹೇಗೆ ಎನ್ಯುಮರೇಷನ್ ಮಾಡೋದು?. ಯಾವ ನಂಬರ್ ಹಿಂದೆ ಕೊಟ್ಟಿರುತ್ತೀರಿ ಅದೇ ನಂಬರ್ ಕೊಡಬೇಕೇ. ಹೊಸ ನಂಬರ್ ಲಿಂಕ್ ಮಾಡಬಹುದೇ? ಎಂಬ ಪ್ರಶ್ನೆಗಳನ್ನು ಕೇಳಿ ತಿಳಿದುಕೊಂಡರು. ತಮ್ಮ ಪತ್ನಿಯ ಕಡೆಯಿಂದ ಎಪಿಕ್ ಐಡಿ ಮೂಲಕ ಪರಿಶೀಲನೆ ಮಾಡಿಸಿದರು.
ನನ್ನದು, ನನ್ನ ಹೆಂಡತಿಯ ಹೆಸರು ಲಿಸ್ಟ್ನಲ್ಲಿದೆ. ಹೇಗೆ ಲಾಗಿನ್ ಮಾಡಬೇಕೆಂದು ಹೇಳಿ, ಡೌನ್ಲೋಡ್ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ನನ್ನ ಫೋನ್ನಲ್ಲೇ ಹೇಳಿ ಹೇಗೆ ಮಾಡೋದು ಎಂದು ಸಿಎಂ ಕೇಳಿದ್ರು. ಮತದಾರರ ಹೆಸರು ಯಾವ ನಂಬರ್ಗೆ ಲಿಂಕ್ ಇದೆಯೊ ಅದೇ ನಂಬರ್ಗೆ ಲಿಂಕ್ ಮಾಡಿ. ವೋಟರ್ ಲಿಸ್ಟ್ನಲ್ಲಿ ಯಾವ ನಂಬರ್ ಕೊಟ್ಟಿದ್ದೀರಿ ಅದೇ ನಂಬರ್ ಹೇಳಬೇಕು ಎಂದರು. ಅಧಿಕಾರಿಗಳ ಮುಂದೆ ನೀನು ಮಾಡು ಎಂದು ಪತ್ನಿ ಉಷಾ ಅವರಿಗೆ ಹೇಳಿ ಫಾರ್ಮ್ ಭರ್ತಿ ಮಾಡಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದಿನಿಂದ ಎಸ್ಐಆರ್ ಆರಂಭ ಮಾಡಿದ್ದಾರೆ. ಅಧಿಕಾರಿಗಳು ಮನೆಗೆ ಬಂದು ಎನ್ಯುಮರೇಷನ್ ಫಾರ್ಮ್ ಕೊಟ್ಟಿದ್ದಾರೆ. ಫಾರ್ಮ್ ಭರ್ತಿ ಮಾಡಿ ಸಹಿ ಹಾಕಿ ಕೊಟ್ಟಿದ್ದೇನೆ. ಮತದಾರರ ಪಟ್ಟಿ ಮಾಡುವಾಗ ನಿಮ್ಮ ಮೊಬೈಲ್ ನಂ. ಕೊಟ್ಟಿರುತ್ತೀರಿ. ನೀವೇ ಸ್ವಂತ ಫಾರ್ಮ್ ಡೌನ್ಲೋಡ್ ಮಾಡುವಾಗ ನಿಮ್ಮ ನಂ. ಕೇಳುತ್ತದೆ. ಮತದಾರರ ಹೆಸರಿಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿದೆ. ಈಗ ಹೊಸ ನಂಬರ್ನ್ನು ಸೇರ್ಪಡೆಗೊಳಿಸಲು ಅವಕಾಶ ಇದೆ. ನೀವು ಕೊಟ್ಟಿರುವ ನಂಬರ್ಗೆ ಒಟಿಪಿ ಬರುತ್ತದೆ. ನೀವು ತುಂಬಿದ ಫಾರ್ಮ್ನ್ನು ಜು.29ಕ್ಕೆ ಬಿಎಲ್ಒಗಳು ವಾಪಸ್ ಪಡೆಯುತ್ತಾರೆ ಎಂದರು.
ಏಳು ದಿನಗಳಲ್ಲಿ ಎಲ್ಲಾ ಮನೆಗಳಿಗೆ ಎನ್ಯುಮರೇಷನ್ ಫಾರ್ಮ್ ನೀಡಲಾಗುತ್ತದೆ. ಎಲ್ಲರೂ ಎನ್ಯುಮರೇಷನ್ ಫಾರ್ಮ್ ತುಂಬಿ ಕೊಡಬೇಕು. ನಿಮ್ಮ ಮನೆಗೆ ಬಿಎಲ್ಒಗಳು ಬರ್ತಾರೆ. ಅವರಿಗೆ ನೀವು ಅರ್ಜಿ ತುಂಬಿಕೊಡಬೇಕು. ಏಳು ದಿನಗಳಲ್ಲಿ ಕುಟುಂಬಸ್ಥರು ಆ ಅರ್ಜಿ ತುಂಬಿ ಕೊಡಬೇಕು. ಮನೆಯಲ್ಲಿ ಇದ್ದವರು ಅರ್ಜಿ ತುಂಬಿಕೊಡಿ ಎಂದು ಹೇಳಿದರು.
ಫೋಟೋ ಬದಲಾವಣೆ ಮಾಡಲು ಫೋಟೋ ಕೊಡಬಹುದು. ಹೊಸ ವಿಚಾರ ಗಮನದಲ್ಲಿಟ್ಟುಕೊಳ್ಳಬೇಕು. ಎಲ್ಲರೂ ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಆಧಾರ್ ನಂಬರ್ ಮಾಹಿತಿಗೆ ಕೊಡಬಹುದು. ಆಗ ನಿಮ್ಮ ವೋಟರ್ ಲಿಸ್ಟ್ ಬರುತ್ತದೆ. ಮನೆ ಬಾಗಿಲಿಗೆ ಬಂದಾಗ ಮನೆಯಲ್ಲಿ ಇದ್ದವರು ಸಹಿ ಮಾಡಿ, ಇಲ್ಲದಿದ್ದರೆ ಎಲ್ಲರ ಪರವಾಗಿ ಹಿರಿಯರು ಸಹಿ ಮಾಡಬಹುದು ಎಂದು ಹೇಳಿದರು.
ಎಸ್ಐಆರ್ ಫಾರ್ಮ್ ಭರ್ತಿ ಮಾಡುವುದು ಕಷ್ಟನಾ? ಎಂಬ ಪ್ರಶ್ನೆಗೆ, ನಾನು ಅನ್ ಎಜುಕೇಟೆಡ್, ನಂಗೂ ಆಪ್ ಗೊತ್ತಾಗಿಲ್ಲ. ಫಾರ್ಮ್ ಫಿಲ್ ಮಾಡಿ ಕೊಡಿ. ಪಶ್ಚಿಮ ಬಂಗಾಳ ಸೇರಿ ಹಲವಾರು ಕಡೆ ಸೌಲಭ್ಯ ನಿಲ್ಲಿಸಿದ್ದಾರೆ. ನಮ್ಮ ರಾಜ್ಯದವರಿಗೆ ನಾವು ಗ್ಯಾರಂಟಿ ಕೊಡಬೇಕು. ನಮ್ಮ ರಾಜ್ಯದಲ್ಲಿ ಇಲ್ಲದಿದ್ದರೆ ಅವರ ರಾಜ್ಯದಲ್ಲೂ ಸೌಲಭ್ಯ ಪಡೆದಿದ್ದರೆ, ಎರಡೂ ಕಡೆ ನಾವು ಏಕೆ ಕೊಡಬೇಕು? ಎಂದು ಸಿಎಂ ಪ್ರಶ್ನಿಸಿದರು.



