ಮೆಟ್ರೋ ವಯಾಡೆಕ್ಟ್ ಸಾಗಿಸುತ್ತಿದ್ದ
ಲಾರಿ ತುಂಡಾಗಿ ಬಿದ್ದು ಆಟೋ ಚಾಲಕ ಸಾವು
ಬೆಂಗಳೂರು:ನಮ್ಮ ಮೆಟ್ರೋ ನಿರ್ಲಕ್ಷ್ಯದಿಂದ ಯಲಹಂಕ ಬಳಿಯ ಕೋಗಿಲು ಕ್ರಾಸ್ ಬಳಿ ಬೃಹತ್ ವಯಾಡೆಕ್ಟ್ (ಬೃಹದಾಕಾರದ ತಡೆಗೋಡೆ) ಸಾಗಿಸುವ ವೇಳೆ ಹೆಗಡೆನಗರದ ಆಟೋ ಚಾಲಕ ಖಾಸಿಂಸಾಬ್ ಮೃತಪಟ್ಟಿರುವ ದುರ್ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ.
ಅವಘಡ ಬಳಿಕ ವಯಾಡೆಕ್ ಸಾಗಿಸುತ್ತಿದ್ದ ಚಾಲಕ ಸ್ಥಳದಲ್ಲೇ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಮೆಟ್ರೋ ಕಾಮಗಾರಿ ವೇಳೆ ಮುನ್ನೆಚ್ಚರಿಕಾ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಲಹಂಕದ ಕೋಗಿಲು ಕ್ರಾಸ್ ಬಳಿ ಮಧ್ಯರಾತ್ರಿ 12.5ರ ವೇಳೆ ಮೆಟ್ರೋ ಕಾಮಗಾರಿಗೆ ಸಿಮೆಂಟ್ ತಡೆಗೋಡೆ (ವಯಾಡೆಕ್ಟ್) ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ವಾಹನ ತಿರುವು ತೆಗೆದುಕೊಳ್ಳುವಾಗ ವಯಾಡೆಕ್ಟ್ ಒಯ್ಯುತ್ತಿದ್ದ 18 ಚಕ್ರದ ಬೃಹತ್ ಲಾರಿಯೇ ತುಂಡಾಗಿ ವಯಾಡೆಕ್ಟ್ ಪಕ್ಕದಲ್ಲಿ ಸಂಚರಿಸುತ್ತಿದ್ದ ಆಟೋ ಮೇಲೆ ಬಿದ್ದು, ಆಟೋ ಅಪ್ಪಚ್ಚಿಯಾಗಿದೆ.
ಇದರಿಂದ ಸ್ಥಳದಲ್ಲೇ ರಿಕ್ಷಾ ಚಾಲಕ ಖಾಸಿಂ ಸಾಬ್ ಮೃತಪಟ್ಟಿದ್ದಾನೆ. ಪ್ರಯಾಣಿಕ ಅದೃಷ್ಟವಶಾತ್ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾನೆ.
ಪ್ರಯಾಣಿಕನನ್ನು ಆಟೋ ಹತ್ತಿಸಿಕೊಂಡು ನಾಗವಾರದ ಕಡೆ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.ಮೆಟ್ರೋ ಏರ್ ಪೋರ್ಟ್ ಮಾರ್ಗದ ಕಾಮಗಾರಿಗಾಗಿ ದೊಡ್ಡ ಸಿಮೆಂಟ್ ಗೋಡೆ ತೆಗೆದುಕೊಂಡು ಹೋಗಲಾಗುತ್ತಿತ್ತು.
ಕೋಗಿಲು ಕ್ರಾಸ್ ನಲ್ಲಿ ತಿರುವು ತೆಗೆದುಕೊಳ್ಳುವ ವೇಳೆ ಲಾರಿಯೇ ತುಂಡಾಗಿ ಈ ಘಟನೆ ಸಂಭವಿಸಿದೆ. ಈ ವೇಳೆ ವಯಾಡೆಕ್ಟ್ ಕೆಳಕ್ಕೆ ಉರುಳಿದೆ. ಲಾರಿ ಪಕ್ಕದಲ್ಲೇ ಆಟೋ ಸಂಚರಿಸುತ್ತಿತ್ತು. ಲಾರಿ ತುಂಡಾಗಿ ವಯಾಡೆಕ್ಟ್ ಕುಸಿದು ಬೀಳುತ್ತಿದ್ದಂತೆ ಪ್ಯಾಸೆಂಜರ್ ತಕ್ಷಣ ಇಳಿದು ಓಡಿಹೋಗಿದ್ದಾರೆ. ಆದರೆ ದುರಾದೃಷ್ಟವಶಾತ್ ಚಾಲಕ ಇಳಿಯುವಷ್ಟರಲ್ಲಿ ಆಟೋ ಮೇಲೆ ಸಿಮೆಂಟ್ ಗೋಡೆ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಯಲಹಂಕ ಪೊಲೀಸರು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ನಾಗವಾರ ಬಳಿ ನಿರ್ಮಾಣ ಹಂತದ 40 ಅಡಿ ಎತ್ತರದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿತಗೊಂಡು ತಾಯಿ ಮಗ ಸಾವನ್ನಪ್ಪಿದ್ದರು. ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್ಬಿಆರ್ ಲೇಔಟ್ ಬಳಿ ಬೆಳಗ್ಗೆ ನಡೆದಿತ್ತು. ತೇಜಸ್ವಿನಿ (28), ಅವರ ಪುತ್ರ ವಿಹಾನ್ (2.5) ಮೃತಪಟ್ಟಿದ್ದರು. ಪತ್ನಿಯನ್ನು ಕಚೇರಿಗೆ ಬಿಡಲು ಹೊರಟಿದ್ದ ಪತಿ ಲೋಹಿತ್ ಕುಮಾರ್ ಮತ್ತು ತೇಜಸ್ವಿನಿ ದಂಪತಿ ತಮ್ಮ ಅವಳಿ ಮಕ್ಕಳ ಜೊತೆ ಬೈಕ್ನಲ್ಲಿ ತೆರಳುತ್ತಿದ್ದರು, ಇವರು ಹೊರಮಾವು ನಿವಾಸಿಗಳಾಗಿದ್ದರು


