ದೇವನಹಳ್ಳಿ(ಬೆಂಗಳೂರು): ಶ್ರೀರಾಮನವಮಿ ಹಬ್ಬದ ಅಂಗವಾಗಿ ದೇವನಹಳ್ಳಿ ತಾಲೂಕಿನ ಬೆಟ್ಟೇನಹಳ್ಳಿ ಗ್ರಾಮದ ದೇವಸ್ಥಾನದಲ್ಲಿ ವಿತರಿಸಿದ ಪ್ರಸಾದ ಸೇವಿಸಿ 400ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ.
ಪ್ರಸಾದ ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡವರನ್ನು ಅರದೇಶನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, 200ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದಿದ್ದಾರೆ.ಬಹುತೇಕರು ಚೇತರಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಬೀಡು ಬಿಟ್ಟು ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಲಕ್ಕಾ ಕೃಷ್ಣರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥ ರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಲಕ್ಕಷಾ ಕೃಷ್ಣ ರೆಡ್ಡಿ, “ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಪ್ರಸಾದ ಸೇವಿಸಿದ ಗ್ರಾಮಸ್ಥರ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿದೆ. ಕೆಲವರಿಗೆ ಹೊಟ್ಟೆನೋವು, ವಾಂತಿ-ಭೇದಿಯಾಗಿ ಅಸ್ವಸ್ಥಗೊಂಡಿದ್ದಾರೆ. ಸುಮಾರು 400 ಜನರ ಆರೋಗ್ಯ ಏರುಪೇರಾಗಿದೆ. ಕೆಲವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೆಲವರು ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಶಾ ತಂಡ, ಆರ್ಆರ್ಟಿ ತಂಡ, ಆರೋಗ್ಯ ಸಿಬ್ಬಂದಿ ಮಾನಿಟರ್ ಮಾಡ್ತಿದ್ದಾರೆ. ಮನೆ ಮನೆಗೆ ಭೇಟಿ ಕೊಟ್ಟು ಮಾಹಿತಿ ಪಡೆದು ಚಿಕಿತ್ಸೆ ಕೊಡುತ್ತಿದ್ದಾರೆ” ಎಂದು ಹೇಳಿದರು.
“ಗ್ರಾಮಸ್ಥರು, ದಾರಿಹೋಕರು, ಅಕ್ಕಪಕ್ಕದ ಗ್ರಾಮಸ್ಥರು ಪ್ರಸಾದ ಸೇವಿಸಿದ್ದಾರೆ. ಅನ್ನ ಪ್ರಸಾದದಲ್ಲಿದ್ದ ಆಹಾರ ಮತ್ತು ಪದಾರ್ಥಗಳನ್ನು ಟೆಸ್ಟಿಂಗ್ಗಾಗಿ ಕಳಿಸಿದ್ದೇವೆ. ಅಡುಗೆ ತಯಾರಿಕೆಗೆ ಬಳಸಿರುವ ನೀರನ್ನೂ ಸಹ ಟೆಸ್ಟಿಂಗ್ಗಾಗಿ ಕಳಿಸಿದ್ದೇವೆ. ಒಂದು ದಿನದಲ್ಲಿ ರಿಪೋರ್ಟ್ ಬರಲಿದ್ದು, ಫುಡ್ ಪಾಯ್ಸನ್ಗೆ ನಿಜವಾದ ಕಾರಣ ತಿಳಿದು ಬರಲಿದೆ” ಎಂದು ತಿಳಿಸಿದರು.
ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ನಲ್ಲಿ ವಾಂತಿ ಭೇದಿ ಪ್ರಕರಣ ಕಾಣಿಸಿಕೊಂಡಿತ್ತು. ಓರ್ವ ಮಹಿಳೆ ಸಾವನ್ನಪ್ಪಿದ್ದರು. ಕಾರ್ಗಲ್ನ ಪ್ರಸಿದ್ಧ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆಗೆ ಬಂದಿದ್ದ ಕೆಲವು ಭಕ್ತರು ಅಸ್ವಸ್ಥರಾಗಿದ್ದರು. ಜಾತ್ರೆಯಲ್ಲಿ ಐಸ್ ಕ್ರೀಂ ಹಾಗೂ ಆಲೂಗೆಡ್ಡೆ ಟ್ವಿಸ್ಟರ್ ಸೇವಿಸಿ ಅನಾರೋಗ್ಯ ಉಂಟಾಗಿತ್ತು.


